Friday, November 16, 2012

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....

"ದೇಹವನ್ನಾದರು ಸುಲಭದಲ್ಲಿ ಪರರೆದುರಿಗೆ ತೆರೆದಿಡಬಹುದೇನೋ ಆದರೆ ಆತ್ಮವನ್ನು ತೆರೆದಿಡುವುದು ಅತ್ಯಂತ ಕಠಿಣ"- ನನ್ನನ  ಅತೀಯಾಗಿ ಕಾಡುವ ವಾಕ್ಯವಿದು.ಈ ಒಂದು ಸಾಲು ಮನುಷ್ಯನಿಗೆ ತನ್ನ ಬಗ್ಗೆ ಹಾಗು ಇತರರ ಬಗ್ಗೆ ತನಗಿರೋ  ಬಲವಾದ ನಂಬಿಕೆ ವಿಶ್ವಾಸಗಳನ್ನೇ ಅಲುಗಾಡಿಸಿ ಬಿಡುವಂತದ್ದು.ಅಬ್ಬಾ!ಯಾರೆದುರಿಗಾದರು ನಮ್ಮ ಪ್ರತಿ ಆಲೋಚನೆ ಮನಸಿನ ತುಡಿತ ಆತ್ಮ ಚಟುವಟಿಕೆ ಸಹಿತವಾದ ನಿಜ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೆರೆದಿಡುವುದೆಂದರೆ ಸುಲಭದ ಮಾತಲ್ಲ.ಅದರಲ್ಲೂ ಹತ್ತಿರದ ಗಾಢ ಸಂಭಂದಗಳಂತು ಸದಾ ಇಂತಹ ಮುಕ್ತತೆಯ ಅನುಭೂತಿಯೊಂದರ  ನೀರಿಕ್ಷೆಯಲ್ಲಿರುತ್ತವೆ.ನಮಗಿರುವ ಅನಿವಾರ್ಯತೆ  ಭಯ ಒತ್ತಡ ಇತ್ಯಾದಿಗಳಿಂದ ಬೇಕಂತಲೇ ಮುಚ್ಚಿಡುವ ದೊಡ್ಡ ಸೂಕ್ಷ್ಮ ವಿಚಾರಗಳ ಸಂಗತಿ ಒತ್ತಟಿಗಿರಲಿ ಕೆಲವೊಂದು ಬಾರಿ ಸಣ್ಣ ಪುಟ್ಟ ವಿಷಯಗಳು ಸಮಯಕ್ಕೆ ನೆನಪಿಗೆ ಬಾರದಿದ್ದದಕ್ಕೋ ಅಥವಾ ಕ್ಷುಲಕವೆನಿಸಿಯೋ ಪರಸ್ಪರ ಹಂಚಿಕೊಳ್ಳದಿದ್ದಾಗ ಆಕಾರಕ್ಕಿಂತಲೂ ದೊಡ್ಡದಾಗಿ ಪರಿವರ್ತನೆಗೊಂಡು ಸಂಭಂದಗಳ ದೋಣಿಯನ್ನೇ ಮುಳುಗಿಸುವಷ್ಟು ತಾಕತ್ತನ್ನ ಪ್ರದರ್ಶಿಸಲು ನಿಂತು ಬಿಡುತ್ತವೆ.

ಹೊರ ಜಗತ್ತಿನ ಮುಂದಿರಲಿ ಮೌನದಲ್ಲಿ ಎಷ್ಟು ಬಾರಿ ನಾವುಗಳು ನಮ್ಮಲ್ಲಿರುವ ಅಭಿವ್ಯಕ್ತಿಗೆ ಸ್ವತಂತ್ರ ಕೊಟ್ಟಿರಬಹುದು?ಅವನೆಲ್ಲಾ ಸ್ವವಿಮರ್ಶಕನ  ಎದುರೆಳೆದು ನಮ್ಮನ್ನು ನಾವೇ ಇಡಿಯಾಗಿ ವಿಮರ್ಶಿಸಿರಬಹುದು? ಯಾವಾಗಲು ರೇಸಿಗೆ  ಬಿದ್ದಂತೆ ಮತ್ತೊಬ್ಬರ ಮುಖವಾಡ ಕಳಚೋ ಹಿಂದಿರುವ ನಾವುಗಳು ನಮ್ಮೊಳಗಿರುವ ಮುಖವಾಡಗಳ ಎಳೆಯೋ ಪ್ರಯತ್ನ ಪಡುವುದು ವಿರಳ.ನಾನು ಕಣ್ಣು ಮುಚ್ಚಿ ಅಂತದ್ದೊಂದು ಪ್ರಯತ್ನ ಮಾಡಿದಾಗೆಲ್ಲ ಅವಳೇ ನೆನಪಾಗುತ್ತಾಳೆ.ಅಮ್ಮ ಅಪ್ಪ ಅಜ್ಜಿನ ಹೊರತು ಪಡಿಸಿ ಅವಳೊಬ್ಬಳೇ ನನ್ನ ಉಸಿರಿನ ಏರಿಳಿತಗಳ ಮೇರಿಗೆ ಮನಸಿನ ಸ್ಥಿತಿಗತಿಗಳ ತಾನೆ ಅನುಭವಿಸಿದಷ್ಟು ನಿಕರವಾಗಿ ಹೇಳಿಬಿಡುತ್ತಿದ್ದವಳು.ಇಂತಹ ಗೆಳತಿ ಗೆಳತಿಗಿಂತಲೂ ಹೆಚ್ಚು ಆತ್ಮ ಸಹೋದರಿ ಎನಿಸಿಕೊಂಡವಳಿಗೂ ಸಹ ನನ್ನದೊಂದು  ವಿಚಿತ್ರ ಸ್ವಭಾವದ ಪರಿಚಯವಿರಲಿಲ್ಲ.ಅದೇನಂದರೆ ನಾನು ಕೆಲವೊಮ್ಮೆ ಕಾರಣವೇ ಇಲ್ಲದ ಕಾರಣಕ್ಕೆ ಯಾರೋ ಎಂದೋ ಚುಚ್ಚಿದ ಮಾಸದ ಗಾಯದ ಕನವರಿಕೆಗಳಿಗೆ ನನ್ನದೇ ಕೆಲವು ದೋಷಗಳಿಂದ ಬಿದ್ದ ಪೆಟ್ಟಿನ ಕಲೆಗಳಿಗೆ ಸುತ್ತಮುತ್ತಲಿನೆಲ್ಲರು ಹಕ್ಕುದಾರರೆನ್ನುವಂತೆ ನನ್ನ ಅಪ್ತರಿಂದ ದೂರ ಸರಿದು ಬಿಡುತ್ತೇನೆ.


ನಾನು ಚಿಕ್ಕವಳಿದ್ದಾಗ ಆಲೂ ಬಟಾಟ ಪುರಿ ಬಾಯಿಚಪ್ಪರಿಸಿ ಆಸೆ ಪಟ್ಟು ತಿನ್ನುತ್ತಿದ್ದೆ .ಒಮ್ಮೆ ಅಮ್ಮ ನನ್ನ ತಟ್ಟೆಯಿಂದ ಅದನ್ನ ತಿನ್ನಲ್ಲು ನೋಡಿದಳು,ಅಷ್ಟೇ ಆಗಿದ್ದು,ಅಂದಿನಿಂದ ಆಲೂ ಚಾಟ್ ಮುಟ್ಟಿದವಳಲ್ಲ ನಾನು!ನಂಗಿಷ್ಟ ಅಂತ ಎಷ್ಟು ಸಲ ಆಲೂ ಚಾಟ್ ಅಪ್ಪನಿಗೆ ಹೇಳಿ ತರಿಸಿ ಅಮ್ಮನಿಗೆ ತಿನ್ನಿಸಿದ್ದೇನೋ ಲೆಕ್ಕವಿಲ್ಲ ಆದರೆ ನಾನು ಮಾತ್ರ ಅದನ್ನ ಪೂರ್ತಿ ತ್ಯಜಿಸಿದೀನಿ.ನಾನು ಹೆಚ್ಚು ಇಷ್ಟಪಡುವುದನ್ನು ನನ್ನವರೆ ಆಯ್ದು ಕೊಂಡರೆ ಅದನ್ನು ನಾನು ಕೈ ಬಿಟ್ಟು ಅವರ ಮೂಲಕವೇ ಅನುಭವಿಸುವ ಸುಡುಗಾಡು ಭಾವವೋ ದುರ್ಬುದ್ಧಿಯೋ ಅಂತೂ ಅಪ್ತರನ್ನು ದೂರ ಮಾಡಿಕೊಳ್ಳೋ ಮತ್ತೊಂದು ವಿಧವು  ಬೆಳೆದುಕೊಂಡಿದೆ.ಹೀಗೆ ಅನೇಕಾನೇಕ ವೈವಿದ್ಯಮಯ ಕಾರಣಗಳಿಂದಾಗಿ ಸಣ್ಣ  ವೈರಾಗ್ಯವ ಅಪ್ಪಿಕೊಂಡೇ ಬದುಕುವ ಚಟವತ್ತಿಸಿಕೊಂಡಿದ್ದೇನೋ ಚಟವತ್ತಿಸಿಬಿಡುತ್ತಾರೋ  ಗೊತ್ತಿಲ್ಲ ಒಟ್ಟಾರೆ ಚಟವಂತು ಇದ್ದೆ ಇದೆ! ಈ ನಡವಳಿಕೆಯೂ ಸುಮಾರು ಸಲ ಉಪಯೋಗಕ್ಕೆ(ತಿಂಡಿ ∝ ತೂಕ) ಬಂದದ್ದು ಉಂಟು ಅದರಿಂದಾಗಿ ಉತ್ತಮ ಸ್ನೇಹ ಕಸಿದು ಹೋದದ್ದು ಉಂಟು. ಆದರೆ ಅವಳಿದ್ದಾಳಲ್ಲ... ಅವಳು ಮಾತ್ರ ಹೀಗೇಕೆ? ಅವಳೇ "ಅವನಿ".ಅವಳು ಅದೆಷ್ಟು ಮುನಿಸಿಕೊಂಡಿದ್ದಾಳೋ ಒಳಗೊಳಗೇ ವ್ಯಥೆ ಪಟ್ಟಿದ್ದಾಳೋ ನೆಪಕ್ಕಾದರು ಯಾರ ಮುಂದೆಯೂ ಚಕಾರವೆತ್ತಿರುವ ಸುದ್ದಿ ಬಂದಿಲ್ಲ ನೇರ ನನ್ನನ್ನೇ ಕಟುವಾಗಿ ಪ್ರಶ್ನಿಸಿದ್ದು ಇಲ್ಲ.ಅವನಿ' ಮೌನವನ್ನೂ ಮಾತಾಡಿಸ ಬಲ್ಲಂತಹ  ಸಂವೇದನಶೀಲತೆವುಳ್ಳ ವ್ಯಕ್ತಿತ್ವದವಳು.ನೂರು ಸುಳ್ಳುಗಳ ನಡುವೆ ಒದ್ದಾಡುತ್ತಿರುವ ಒಂದು ಸತ್ಯವ ಹೆಕ್ಕಿ ಅದರಂತರಾಳವ ಅರಿಯುವ ಸಿದ್ದಿ ಅವಳಿಗೆ ಮಾತ್ರ ಸಂದಿರುವಂತೆ ಪ್ರೀತಿಸುವ ಜಾಯಮಾನದವಳು!ನನಗೆ ಇಂತವಳ ಪರಿಚಯವಾಗಿ ಅದಾಗಲೇ ಹತ್ತೊಂಬತ್ತು ವಸಂತಗಳಾಗಿವೆ.



ಚಿತ್ರಕೃಪೆ:ಮದನ್ ಕುಮಾರ್


ಒಂದೇ ಓಣಿ  ಒಂದೇ ಶಾಲೆ ಒಂದೇ ಟುಷ್ಯನ್ ಅಂತ ಒಟ್ಟೊಟ್ಟಿಗೆ ಬೆಳೆದ ಹುಡುಗಿಯರು ನಾವು.ಶಾಲೆಯಲ್ಲಿ ನಾವಿಬ್ಬರು ಪರಸ್ಪರ ವಿನಿಮಯಿಸಿಕೊಳ್ಳುತ್ತಿದ್ದ ನಗೆ ತಪ್ಪಿದರೆ ಒಂದೆರೆಡು ಮೊಟಕು ಮಾತುಗಳಿಗಷ್ಟೇ ಪರಿಚಯಸ್ತರು ಅನ್ನಿಸಿಕೊಂಡಿದ್ದೆವು.ಅದಕ್ಕೂ ಮೀರಿದ ನಿಜ ಸ್ವರೂಪದ ನವಿರಾದ ಗೆಳೆತನ ಬೆಳೆದಿದ್ದು ನಂತರದ ದಿನಗಳಲ್ಲಿ ಎಂಟು ವರುಷಗಳ ಕೆಳಗೆ.ಈ ಎಂಟು ವರುಷದ ಸುಧೀರ್ಘ ಗೆಳೆತನದಲ್ಲಿ ನಾವಿಬ್ಬರು ಒಬ್ಬರನೊಬ್ಬರು ನೋಡದಂತ ನಡೆದ ನಿತ್ಯದ ರಾಮಾಯಣಗಳನ್ನ ಹಂಚಿಕೊಳ್ಳದಂತ ದಿನವೇ ಹುಟ್ಟಿರಲಿಲ್ಲ.ಅವನಿ ಮುಗ್ದ ಹುಡುಗಿಯಾದರೂ ಚುರುಕು ಸ್ವಭಾವದವಳು ವ್ಯವಹಾರ ವಿಷಯಗಳಲ್ಲಿ ನನಗಿಂತ ಚಾಣಾಕ್ಷೆ ನನಗಿಂತಲೂ ಒಂದು ಕೈ ಹೆಚ್ಚು ಧೈರ್ಯವಂತೆ.ಗಡುಸುಗಾರ್ತಿ ಮಾತುಗಾರ್ತಿ  'ಭೂಮಿ'ಯಷ್ಟೇ ಸಂಯಮವುಳ್ಳ ನನ್ನ 'ಅವನಿ' ಎಲ್ಲರ ಮನಸಲ್ಲೂ ಸುಲುಭದಲ್ಲಿ ನೆಲೆಯೂರಿಬಿಡುತ್ತಿದ್ದ ಸ್ನೇಹಮಯಿ.

ದಿನಾಂಕದ ವಿಚಾರದಲ್ಲಿ ಅತಿ ಮರಗುಳಿಯಾದ ನನಗೆ ಪ್ರತಿಯೊಂದನ್ನು ತಪ್ಪದೆ ನೆನಪಿಸಿ ನಾನು ಯಾವುದೇ ವಿಶೇಷ ದಿನಗಳನ್ನ ಕಾರ್ಯಗಳನ್ನ ಮರೆಯದಂತೆ ನೋಡಿಕೊಳ್ಳುತ್ತಿದ್ದಳು.ಅದೆಷ್ಟರ ಮಟ್ಟಿಗೆಂದರೆ ಅವನಿ'ಯ ಹುಟ್ಟು ಹಬ್ಬವನ್ನೂ ಅವಳೇ ನೆನಪಿಸಬೇಕಿತ್ತು " ಸ್ವೀಟಿ ಸಂಜೆ ಮನೆಗೆ ಬಾರೋ ಪಾರ್ಟಿ ಇದೆ....ಅದಿರಲಿ ನನಗೆ ವಿಶ್ ಮಾಡೋಲ್ವ ನೀನು?" ನಗುತ್ತಲೇ ಕೊಂಚವೂ ಮುನಿಸಿಲ್ಲದೆ ವರ್ಷ ವರ್ಷ ಫೋನ್ ಅಚ್ಚುತ್ತಿದ್ದಳು ಅವನಿ.ಇನ್ನು ನನ್ನ ಹುಟ್ಟು ಹಬ್ಬಕ್ಕೆ  ಸ್ನೇಹಿತೆಯರ  ಪೈಕಿ ಮೊದಲನೇ ವಿಶ್ ಅವಳದೆ! ಅವಳು ತೋರುತ್ತಿದ್ದ ಕಾಳಜಿ ಮೆರೆಯುತ್ತಿದ್ದ  ಹೃದಯ ವಿಶಾಲತೆ  ಯಾವುದಕ್ಕೂ ನನ್ನ ಬಿಟ್ಟು ಕೊಡದ ಅವಳ ಅಮ್ಮನಂಥ ಆಪ್ತತೆಯೇ ನಾನು ಬಹುವಾಗಿ ಹಚ್ಚಿಕೊಂಡಿದ್ದು.ಒಡ ಹುಟ್ಟಿದ ಸಹೋದರಿ ಭಾಗ್ಯ ಕಾಣದ   ನನಗೆ ಒಂದು ವರುಷ ಹಿರಿಯವಳಾದ ಅವನಿ'ಯೇ ಅಕ್ಕ ಆದಳು.ಇಂತಿಪ ಅವನಿ'ಯನ್ನು ನಾ ದೂರ ಮಾಡಿಕೊಂಡಿದ್ದಾದರು ಯಾಕೆ ಅನ್ನೋ ನಿರ್ದಿಷ್ಟ ಕಾರಣ  ನನಗೂ  ತಿಳಿದಿಲ್ಲ.ನಮ್ಮಿಬ್ಬರ ನಡುವೆ ಅಂತದ್ದೊಂದು ಕಡೆ ಕೊನೆಯಿಲ್ಲದ ಮೌನ ಸೃಷ್ಟಿ ಮಾಡಿ ನಿಲ್ಲಿಸಿರುವುದಕ್ಕೆ ಯಾರದೋ ವೈಯುಕ್ತಿಕ ಹಿತಾಸಕ್ತಿಗಳಿದ್ದಿರಬಹುದು ಒಳಸಂಚಿದ್ದಿರಬಹುದು ಅದೇನಿದ್ದರು    ಇವೆಲ್ಲದಕ್ಕೂ ನನ್ನ ಅವನಿ'ಯ ಸುಂದರ ಮಧುರ ಗೆಳೆತನವಂತು ಕಾರಣವಲ್ಲವೆಂಬ ಸತ್ಯದ ಅರಿವು ಮಾತ್ರ ನನಗಿತ್ತು ಅವಳಿಗೂ ಇದ್ದಂಗಿತ್ತು.ಅದುವೇ ನನ್ನನ್ನು ಇಂದಿಗೂ ಆ ಮೌನ ಕಾಪಾಡಲು ಪ್ರೇರೇಪಿಸುತ್ತದೆ ಅಂತೆಯೇ ಅವಳಿಗೆ ಆ ಮೌನ ಮುರಿಯಲು!


ನನ್ನ ಇತರೆ ಸ್ನೇಹಿತರು ಬಂಧುಗಳು ಕೂಡ ನನ್ನೀ ತರ ತರನಾದ ವೈರಾಗ್ಯಕ್ಕೆ ಅಂಟಿಕೊಳ್ಳುವ ಸ್ವಭಾವದ ರುಚಿ ನೋಡಿದ್ದುಂಟು ಅವೆಲ್ಲವೂ ಒಂದೆರೆಡು ದಿನ ವಾರದೊಳಗೆ ಮುಗಿಯುತ್ತಿತ್ತು.ಅದೇಕೋ ಅವನಿ'ಯ ವಿಚಾರದಲ್ಲಿ ತುಸು ಜಾಸ್ತಿ ಎಂಬಂತೆ ಸಾಗಿ ಬಿಟ್ಟಿದೆ.ನಾನು ಅವಳನ್ನೆಷ್ಟೇ  ದೂರವಿಟ್ಟರು ಅವಳು ನನ್ನನು ಎಂದಿನಂತೆ ಪ್ರೀತಿಸುತ್ತಾಳೆ ಮುಂದೆಂದ್ದಾದರು ಅವಳೆದುರು ನಿಂತರೆ ಹಿಂದಿನ ಹಾಗೆ ಆಲಂಗಿಸುತ್ತಾಳೆ ಅನ್ನೋ ಧೃಡ ನಂಬಿಕೆಯೇ?ನಮ್ಮಿಬ್ಬರ ಸ್ನೇಹದ ಪರೀಕ್ಷೆಯೇ? ಅಥವಾ ನನ್ನ ಆವರಿಸಿಕೊಂಡಿರುವ ವಿಚಿತ್ರ ಸ್ವಭಾವ ಪಡೆದಿರುವ ವಿರಾಟ ಸ್ವರೂಪದ ನರ್ತನವೇ? ಗೊತ್ತಿಲ್ಲ! ಸದ್ಯದ ನನ್ನ  ಈ ಮೌನಕ್ಕೆ ಮೂರು ವರ್ಷ ಆರು ತಿಂಗಳ ಪ್ರೌಡತೆ! ಮೊದಲೆಲ್ಲ ಮನೆಗೆ ಹುಡುಕಿಕೊಂಡು ಬಂದು ಬಿಡುತ್ತಿದ್ದವಳನ್ನ ಕೆಲವೊಮ್ಮೆ ಮನೆಯಲ್ಲಿ ಇದ್ದುಕೊಂಡೆ ನನ್ನ  ಕೋಣೆ ಮೂಲೆ ಸೇರಿ ಅಮ್ಮ ಅಪ್ಪನ ಬಾಯಲ್ಲಿ ಇಲ್ಲವೆಂದು ಸುಳ್ಳು ಆಡಿಸಿ ಕಳಿಸಿ ಬಿಡುತ್ತಿದ್ದೆ.ಮನೆಯವರಿಗೂ ನಂದು ಅತಿರೇಕದ ನಡವಳಿಕೆ ಅನಿಸಿ ಬಯ್ದಾಡುತಿದ್ದರಾದರು  ಮನಸಿಗೆ ತೋಚಿದಂತೆ ಆಡೋ ನನ್ನ ಬುದ್ಧಿಗೆ ಅವರೆಲ್ಲ ಸೋತು ಎಂದೋ ಶರಣಾಗಿದ್ದಾರೆ.ಆದರೆ ಅವನಿ'ಗೆ ಅವಮಾನಿಸಿ ಕಳಿಸೋದು ನನಗೆ  ಕೊಂಚವೂ ಇಷ್ಟವಿಲ್ಲದಿದ್ದ ಕಾರಣ ಪರಿಹಾರವೆಂಬಂತೆ ಮನಸು ಮಾಡಿ ಕೊನೆಗೂ ಒಂದು ಮೆಸೇಜ್ ಕಳಿಸಿ ಬಿಟ್ಟಿದ್ದೆ"ಇತ್ತೀಚಿಗೆ ತುಂಬಾ ಬ್ಯುಸಿ ಆಗಿದ್ದೀನಿ ಮನೇಲಿ ಇರೋದು ಕಡಿಮೆ ಬರೋ ಮುಂಚೆ ಮೆಸೇಜ್ ಕಳಿಸಿ ನಾನಿರುವುದ  ಕಾತರಿ ಪಡಿಸಿಕೊಂಡು ಬಾ ಸುಮ್ಮನೆ ಬರೋ ತೊಂದರೆ ಬೇಡ ನಿನಗೆ.ಜೋಪಾನ ಮಾಡು." ಈಗ  ಅವನಿ'ಗೂ ಅವಳದೇ ಆದ ಕೆಲಸ ಅಲ್ಲಿನ ಸ್ನೇಹಿತರಿದ್ದಾರೆ ಹಾಗಿದ್ದರು ವಾರಕ್ಕೆ ಎರಡು ಸಲ ಪರ್ಸನಲ್ ಮೆಸೇಜ್ ಮೇಲ್ ರವಾನಿಸೋದ ಮರೆತಿಲ್ಲ."ಹೇಯ್ ಹನಿ ಊಟ ಆಯ್ತಾ? ಹೇಗಿದ್ದೀಯ?ನಿನ್ನ ನೋಡಬೇಕಂತ ಆಸೆ ಆಗಿದೆ.ಪ್ಲೀಸ್ ಈ ವೀಕೆಂಡಾದರು ಸಿಗುತ್ತಿಯ?" ಅನ್ನೋ ಅವಳ ಮೆಸೇಜ್ ಗಳಿಗೆ ಮನಸಿನಲ್ಲೇ ಉತ್ತರಿಸಿಕೊಳ್ಳುತ್ತೇನೆ.ಈ ದಿನದವರೆಗೂ ಅವಳಿಗೆ ಮೆಸೇಜ್ ನಲ್ಲಿ ಉತ್ತರಿಸೋದು ಅವಳ ಕರೆ ಕಟ್ ಮಾಡಿದ್ದಾಗ ಅಥವಾ ಆಕೆಯ "ಮನೆಗೆ ಬರಲಾ?" ಎಂಬ ಆರ್ತ ಬಿನ್ನಹಗಳ ಎಸಎಂಎಸ ಬಂದಾಗ ಮಾತ್ರ.

ಈ ರೋಧನೆ ಹಿಂದೆಯೂ ಕಾಣದ ಮುಗುಳ್ನಗೆ ಪ್ರೀತಿ ಅರಳುತ್ತಿದೆ.ನನ್ನ ಮೌನಕ್ಕೆ ಯಾರದೋ ಮಾತುಗಳಿಗೆ ಸೇತುವೆ ಆದ ಸಾರ್ಥಕತೆಯಿದೆ.ಹಪ ಹಪಿಸಿ ಬರೊ ಬಿಕ್ಕಳಿಕೆಗಳಿಗೆ ಅವನಿಯ ನೆನಪಿನ ಲೇಪನವಿದೆ.ಒಟ್ಟಿನಲ್ಲಿ ನಾ ಅವನಿ ಮುಂದೆ ಧರಿಸಿರುವ ಮುಖವಾಡ ಒಂಥರಾ ಹಿತಾನುಭವ ಅಷ್ಟೇ ಕಾಡುವ ದುಃಖದ ಕಣ್ಣೇರುಗಳು ನೀಡುತ್ತಿದೆ.ಎಲ್ಲದಕ್ಕೂ ಮಿಗಿಲಾಗಿ ಅವನಿ ಇಲ್ಲದ ಬದುಕು ಹಲವು ಪಾಠ ಕಲಿಸಿದೆ.ಇತ್ತೀಚಿಗೆ ಸ್ವಲ್ಪ ಪೆದ್ದುತನ ಕಳಚಿ ಹೋಗಿ ಅದರ ಬದಲಿಗೆ ಸಾಸಿವೆಯಷ್ಟು ಚುರುಕುತನ ಬೆಟ್ಟದಷ್ಟು ಮೊಂಡುತನ ಕುಕ್ಕರಿಸಿದೆ.ಹಿಂದಿಗಿಂತಲೂ ಹೆಚ್ಚು ಧೈರ್ಯವಂತಳಂತೆ ನಟಿಸಲು ಕಲಿತಿರುವೆ.ಹಾಗೆಯೇ ಎಲ್ಲಾ ಮುಖ್ಯ ಕಾರ್ಯಕ್ರಮಗಳ ದಿನಾಂಕಗಳನ್ನು  ಕಡ್ಡಾಯವಾಗಿ ಬರೆದಿಟ್ಟುಕೊಂಡು ನೆನಪಿಗೆ ತಂದುಕೊಳ್ಳುವ ಯತ್ನ ನಡೆಸುತ್ತೇನೆ ಇನ್ನು ಕೆಲವನ್ನು ಎಂದಿನಂತೆ ಅವನಿ ಇಂದಿಗೂ ಮೆಸೇಜ್ ಮಾಡಿ ನೆನೆಪಿಸುವುದ ಮರೆತಿಲ್ಲ.ಮೊನ್ನೆ ರಾತ್ರಿ 12 ಆಗುತ್ತಿದಂತೆಯೇ ಅವನಿಯ ಹುಟ್ಟು ಹಬ್ಬ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ನೆನಪಿನಲ್ಲಿ  ನಿಂತ್ತಿತ್ತು!ಅದೇ ಖುಷಿಯಲ್ಲಿ ಫೋನ್ನಲ್ಲಿ  ನಂಬರ್ ಕೀ ಒತ್ತುತಲೇ ..ಯಾವುದೊ ದುಃಖ ಉಮ್ಮೆಳಿಸಿ ತುಟಿ ಕಚ್ಚಿ ನುಂಗಿ ಫೋನ್ ಆಚೆ ಎಸೆದೆ."ಹೇಯ್ ಡಿಯರ್ ವಿಶ್  ಮಾಡೋಲ್ವಾ?ಮನೆಗೆ ಬಾರೋ" ಮೆಸೇಜ್ ಗಾಗಿ ಮುನ್ನೋಡುತ್ತ ಕೂತಲ್ಲೇ ನಿದುರೆಗೆ ಜಾರಿ ಹೋದೆ...  


"ಬೆಳಕಿನ ಬೆನ್ ಹಿಂದೆಯೇ,
ಕತ್ತಲಿರುವಂತೆ.....
ಎಲ್ಲಾ  ಶ್ರೇಷ್ಟ ಪ್ರೀತಿಗೂ,
ಸ್ವಾರ್ಥದ ಸೆರಗುಂಟು.....
ತ್ಯಾಗದ ದೇಣಿಗೆ ಉಂಟು....
ಎಲ್ಲಾ ನಲಿವಿನ ಮುನ್ನುಡಿಯಲ್ಲೇ,
ಕೇಳದ ಚಿತ್ಕಾರದ ನೆರಳುಂಟು.....
ಎಲ್ಲಾ ಸತ್ಯದ ಗರ್ಭದಲ್ಲೂ,
ಚಿಕ್ಕ ಸುಳ್ಳಿನ ಕಿಡಿಯುಂಟು...."

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....


11 comments:

  1. ಗ್ರಹಗಳಿಗೂ ಗ್ರಹಣ ಹಿಡಿವಾಗ ಹುಲುಮಾನವರಾದ ನಮಗೆ ಗ್ರಹಗಳು ನಮ್ಮ ಹಠ, ಚಟ, ನಡುವಳಿಕೆ ರೂಪದಲ್ಲಿ ಕಾಡಿಸುತ್ತವೆ..ಗೆಳೆತನ ಎಂದಾಗ ಅಲ್ಲಿ ಬರಿ ಸ್ನೇಹ ಮಾತ್ರವಿರುವುದಿಲ್ಲ ಎನ್ನುವುದನ್ನು ನಿಮ್ಮ ಲೇಖನ ಸಾರಿ ಸಾರಿ ಹೇಳುತ್ತದೆ..ವಿರಸಕ್ಕೆ ಕಾರಣವಿಲ್ಲ.ಸರಸಕ್ಕೆ ಕಾರಣ ಬೇಕಿಲ್ಲ.ಇದು ಜೀವನದ ಸೂತ್ರ...ನಮ್ಮ ಕೆಲವು ಚಟಗಳು ಚಟ್ಟ ಹತ್ತಿದರೂ ಕಾಡುತ್ತವೆ..
    ಒಮ್ಮೆಯಾದರೂ ಜಗಳವಾಡದ ಸ್ನೇಹ ಸುಂದರ ಗೆಳೆತನದಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುವ ಮಾತನ್ನು ಕೇಳಿದ್ದೇನೆ..ಭೂಮಿಯು ಸುತ್ತಿದ ಹಾಗೆ ಗೆಳೆತನವು ಒಮ್ಮೆ ಸುತ್ತಿ ಬಂದು ನಮ್ಮ ಮುಂದೆ ನಿಲ್ಲುತ್ತದೆ.
    ಸುಂದರವಾಗಿದೆ ಲೇಖನ..

    ReplyDelete
    Replies
    1. ಶ್ರೀಕಾಂತ್ ಭೈಯ್ಯ... ಕೆಲವು ಚಟಗಳು ಚಟ್ಟ ಹತ್ತಿದರೂ ಕಾಡುತ್ತವೆ ನಿಜ ನಿಮ್ಮ ಮಾತು ಅವುಗಳೇ ಚಟ್ಟ ಹತ್ತೋ ಹಾಗೆ ಮಾಡದಿದ್ರೆ ಸಾಕು.ನಿಮ್ಮ ಪ್ರತಿಕ್ರಿಯೆಗಳು ಓದಲು ಚೆಂದ.ಪ್ರೋತ್ಸಾಹಕ್ಕೆ ಧನ್ಯವಾದಗಳು.:-)

      Delete
  2. ಸ"ರಾಗ"ವಾಗಿ ಓದಿಸಿಕೊಂಡು ಹೋಗುವ ಸುಂದರ ಬರಹ. ನಾವೇ ಪಾತ್ರಧಾರಿಯೇನೋ ಅನ್ನೋವಷ್ಟು ಒಳಸೆಳೆಯುವ ಸಾಲುಗಳು, ಸನ್ನಿವೇಶಗಳು..!! ಇಂಥಹ ಬರಹಗಳನ್ನ, ಈ "Intensity" ಯೊಂದಿಗೆ ಬರೆಯುವುದು ತುಂಬಾ ಕಠಿಣ. ಅದು ನನಗೆ ತುಂಬಾ ಚೆನ್ನಾಗಿ ಗೊತ್ತು. ಅವನಿ ಜೊತೆ ಒಮ್ಮೆ ನನಗೂ ಮಾತನಾಡೋಕೆ chance ಕೊಡು :d

    ನಿನ್ನ ಹಠಮಾರಿತನ ತುಂಬಾನೇ ಮುದ್ದು ಬರುವಂತಿದೆ ;-)

    ಹುಟ್ಟುಹಬ್ಬದ ಶುಭಾಷಯ ಕೋರುವ ಸೀಕ್ವೆನ್ಸ್ "ಏನೋ" ನೆನಪನ್ನ ತಂದು, ತುಂಬಾ ಕೊರಗುವಂತೆ ಮಾಡಿತು :/ :-(

    ಮತ್ತೆ ಏನೇನೋ ಹೇಳೋದಿದೆ, :P

    &

    ಕೊನೆಯಲ್ಲಿ ಬರೆದ ಸಾಲುಗಳು......... ಏನ್ ಹೇಳೋದು....? :-O

    ReplyDelete
    Replies
    1. ರಘಾ ಹಟ ಬಿಡಬಾರದು ಅನ್ನೋ ಹಟ ನನ್ನದು.ಅವನಿ ಜೊತೆ ನೀನು ಮಾತನಾಡಬೇಕ?ಕಲಾಯ ತಸ್ಮಯ್ ನಮಃ! ನಿನ್ನ ಎಂದಿನ ಉತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು.ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು:-)

      Delete
  3. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಬರಹ..ಆಪ್ತವಾದ ಶೈಲಿ ಓದಲು ಖುಷಿಕೊಟ್ಟಿತು...ಪ್ರತಿಯೊಬ್ಬರ ಗಾಢ ಗೆಳೆತನದಲ್ಲಿಯೂ ಹಾಗೆಯೇ..ಅವರವರದು ಎಂದು ಒಂದಿಷ್ಟು ಕೆಲಸಗಳು ನಿಗದಿಯೇ ಆಗಿರುತ್ತದೆ...ಕಾಲೇಜಿನಲ್ಲಿ ಅಸೈನ್ ಮೆಂಟು ಬರೆದು ಉಳಿದವರಿಗೆ ಕೊಡುವುದು,ಟ್ರಿಪ್ಪುಗಳನ್ನು ಆಯೋಜಿಸುವುದು,ಇನ್ನು ಪ್ರಿನ್ಸಿಪಾಲರ ಕೋಣೆಗೆ ಹೋಗುವುದು,ಪಾರ್ಟಿಗಳನ್ನು ಆಯೋಜಿಸುವುದು,ಕೊನೆಗೆ ಎಕ್ಸಾಮ್ ಹೆಂಗಾಯ್ತು ಎಂದು ಕೇಳುವುದು,ಎಲ್ಲರದೂ ಫಲಿತಾಂಶ ನೋಡುವುದು ಅಬ್ಬಬ್ಬಾ....ಅದರಲ್ಲಿ ಕೆಲವೊಂದಿಷ್ಟನ್ನು ಬೇರೆ ಯಾರೂ ಮಾಡಲಾಗದು ಎಂಬಷ್ಟು...

    ಚೆನ್ನಾಗಿದೆ ಬರೆಯುತ್ತಿರಿ.....

    ಕೊನೆಯಲ್ಲಿ ಬರೆದ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ :)
    ನಮಸ್ತೆ

    ReplyDelete
    Replies
    1. ಅದರಲ್ಲಿ ಕೆಲವೊಂದಿಷ್ಟನ್ನು ಬೇರೆ ಯಾರೂ ಮಾಡಲಾಗದು ಎಂಬಷ್ಟು....ಚಿನ್ಮಯ್ ಕೇವಲ ಗೆಳೆತನಕ್ಕಲ್ಲ ಎಲ್ಲ ಸಂಭಂದಗಳಿಗು ನಿಮ್ಮಿ ಮಾತು ಅನ್ವಯುಸುತ್ತೆ.Every person is unique and irreplaceable.ಬರೆಯೋಕೆ ಹುರಿದುಂಬಿಸುತ್ತೀರಿ ...ಧನ್ಯವಾದಗಳು.:-)

      Delete
  4. Adbutha....!! nange nimma ella kathe galalli thumba istavada kathe idhu
    ee salugalu...!!
    "ಬೆಳಕಿನ ಬೆನ್ ಹಿಂದೆಯೇ,
    ಕತ್ತಲಿರುವಂತೆ.....
    ಎಲ್ಲಾ ಶ್ರೇಷ್ಟ ಪ್ರೀತಿಗೂ,
    ಸ್ವಾರ್ಥದ ಸೆರಗುಂಟು.....
    ತ್ಯಾಗದ ದೇಣಿಗೆ ಉಂಟು....
    ಎಲ್ಲಾ ನಲಿವಿನ ಮುನ್ನುಡಿಯಲ್ಲೇ,
    ಕೇಳದ ಚಿತ್ಕಾರದ ನೆರಳುಂಟು.....
    ಎಲ್ಲಾ ಸತ್ಯದ ಗರ್ಭದಲ್ಲೂ,
    ಚಿಕ್ಕ ಸುಳ್ಳಿನ ಕಿಡಿಯುಂಟು...."

    Superb Superb Superb...!!!

    ReplyDelete
    Replies
    1. ಥ್ಯಾಂಕ್ಸ್ ಮದನ್ ....ನಿಮ್ಮಿ ಚಿತ್ರವೂ ಸೊಗಸಾಗಿದೆ.ಹೀಗೆ ಇರಲಿ ನಿಮ್ಮ ಸಹಕಾರ.ಧನ್ಯವಾದಗಳು ಗೆಳೆಯ.:-)

      Delete
  5. This comment has been removed by the author.

    ReplyDelete
  6. ನಿನ್ನ ಈ ಬರಹ ಏನೇನನ್ನೋ ನೆನಪಿಸಿ ಕಣ್ಣು ರೆಪ್ಪೆಗಳನ್ನು ಆರ್ದ್ರ ವಾಗಿಸಿತು. ಇಂತಹದೆ ಗೆಳೆತನವನ್ನು ಕಂಡ, ಕೊನೆಗೆ ಯಾರದೋ ಚಾಡಿ ಮಾತಿನ ಕಾರಣ ಮುರಿದು ಹೋದ ಆ ಗೆಳೆತನ ಮತ್ತೊಮ್ಮೆ ಕಣ್ಣೆದುರು ಬಂದು ನಿಂತಿತು.....ಆ ನಮ್ಮ ಗೆಳೆತನವನ್ನೇ ಕುರಿತು ಬರೆದಂತಿರುವ ಬರಹ.....ಸುಂದರ, ಸರಾಗವಾಗಿ ಓಡಿಸಿಕೊಂಡು ಹೋಗುವ ನಿರೂಪಣೆ.....ಹಳೆಯ ಗೆಳೆತನದ ನೆನಪಾಗಿ ಎರೆಡೆರಡು ಸಾರಿ ಓದಿದೆ... ಉತ್ತಮ ಬರಹಕ್ಕಾಗಿ ಅಭಿನಂದನೆಗಳು.....


    "ಬೆಳಕಿನ ಬೆನ್ ಹಿಂದೆಯೇ,
    ಕತ್ತಲಿರುವಂತೆ.....
    ಎಲ್ಲಾ ಶ್ರೇಷ್ಟ ಪ್ರೀತಿಗೂ,
    ಸ್ವಾರ್ಥದ ಸೆರಗುಂಟು.....
    ತ್ಯಾಗದ ದೇಣಿಗೆ ಉಂಟು....
    ಎಲ್ಲಾ ನಲಿವಿನ ಮುನ್ನುಡಿಯಲ್ಲೇ,
    ಕೇಳದ ಚಿತ್ಕಾರದ ನೆರಳುಂಟು.....
    ಎಲ್ಲಾ ಸತ್ಯದ ಗರ್ಭದಲ್ಲೂ,
    ಚಿಕ್ಕ ಸುಳ್ಳಿನ ಕಿಡಿಯುಂಟು...."

    ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ.....ಸುಂದರ ಅತೀ ಸುಂದರ ಸಾಲುಗಳು....

    ReplyDelete
  7. ಅವನಿ.. ಅದರರ್ಥ ಭೂಮಿ.. ನೀನು ಅವರ ಬಗ್ಗೆ ಹೇಳಿದ್ದು ನೋಡಿದರೆ ಅವರ ಸ್ವಭಾವ & ಗುಣ ಭೂಮಿ ತೂಕದ್ದು ಅನಿಸತ್ತೆ..


    ಕೆಲವೊಂದು ಅನುಬಂಧಗಳು ತಾನಾಗೆ ದೂರವಾಗೋದು ಮನೋ ಸಹಜ ಲಕ್ಷಣ. ಅದಕ್ಕೆ ಕಾರಣಗಳು ಬೇಕಿಲ್ಲ.. ಘನ ಉದ್ದೇಶಗಳು ಬೇಕಿಲ್ಲ.. ನಮ್ಮನ್ನ ಅವರು.. ನಾವು ಅವರನ್ನ ಇದಕ್ಕಿದ್ದಂತೆ ಕಳೆದು ಕೊಳ್ಳೋದು.. ಮಿಸ್ ಮಾಡಿ ಕೊಳ್ಳೋದು ಯಾರ ಹಿತಾಸಕ್ತಿಯೋ ಅಥವಾ ಒಳಸಂಚಿನ ಪರಿಣಾಮ ವಾಗಿಯೂ.. ಅಥವಾ ಅದ್ಯಾವುದೂ ಇಲ್ಲದೆಯೂ ಕೆಲವೊಮ್ಮೆ ಅನುಬಂಧಗಳು ಕಡಿದು ಹೋಗುವುದುಂಟು. ಕಡಿದು ಹೋಗುವುದು ಬಿರುಕಿನಿಂದಲ್ಲ.. ಒಡಕಿನಿಂದಲ್ಲ.. ಯಾರೋ ಮಾಡಿದ ಕೆಡುಕಿನಿಂದಲೂ ಆಗಬೇಕಿಲ್ಲ.. ತಾನಾಗೆ ಉದುರಿ ಬಿಡೋ ಹಣ್ಣೆಲೆಗಳ ಹಾಗೆ ಅದೊಂದು ಪ್ರಕೃತಿ ನಿಯಮ ಅಂದುಕೊಂಡರೂ ಅಡ್ಡಿ ಇಲ್ಲ.. ಆದ್ರೆ ಯಾಕಾಗಿ ಕಳ್ಕೊಬೇಕು ಅನ್ನೋ ಪ್ರಶ್ನೆಗೆ ಕೂಡಾ ಉತ್ತರವಿಲ್ಲ.. ನಾನು ಹಾಗೆ ಕಾರಣವಿಲ್ಲದೆ ಕಳಕೊಂಡ ಅನುಬಂಧಗಲೇ ಜಾಸ್ತಿ ಒಂದು ಕಾಲದಲ್ಲಿ ಜೀವಕ್ಕೆ ಜೀವ ಅನಿಸಿದ್ದ ಅನುಬಂಧಗಳು ಕೂಡ ಈಗ ಬರೀ ಪರಿಚಯವಾಗಿ ಉಳಿದಿರೋದು ಕೂಡ ವಿಪರ್ಯಾಸ.


    ಅವನಿ ಥೇಟ್ ಭೂಮಿಯಂತೆ.. ನೀನೆಷ್ಟು ಹಠ ಮಾಡಿ.. ಅದೆಂತೆಂಥ ಆಟವಾಡಿದರೂ ಯಾವುದನ್ನೂ ಸಹಿಸಿಕೊಳ್ಳಬಲ್ಲ ತಾಯಿಯಂತೆ. ಸಂಬಂಧಗಳು ಮತ್ತೆ ಹಳೆಯದ್ದೆ ಹುರುಪಿನಲ್ಲಿ.. ಹಳೆಯದ್ದೆ ವರ್ಚಸ್ಸಿನಲ್ಲಿ.. ಹಳೆಯದ್ದೆ ವರ್ತನೆಯಲ್ಲಿ.. ಹಳೆಯದ್ದೆ ಅಭಿಮಾನದಲ್ಲಿ ಮರಳಿ ಸಿಕ್ಕೋದು ಬಹಳ ಕಷ್ಟ. ಅವನಿಯಿಂದ ಅದು ನಿನಗೆ ಮರಳಿ ಸಿಕ್ಕೋದಾದ್ರೆ ನಿನ್ನ ಸೊಕ್ಕು ಮುರಿದರೂ ಪರವಾಗಿಲ್ಲ.. ಮರಳಿ ಕಳೆದು ಕೊಳ್ಳೋ ಪ್ರಯತ್ನ ಮಾಡಬೇಡ.


    ಲೇಖನ ತುಂಬ ಚೆನ್ನಾಗಿ ನಿರೂಪಿಸಿದ್ದೀಯ.. ತುಂಬಾ ಇಷ್ಟ ಆಯಿತು.. :) :)

    ReplyDelete