Sunday, December 23, 2012

ಮಡಿ ಮಡೆ ಸನ್ನಡೆ! - ಯಾವುದು ಹಿತವಯ್ಯ ನಿಮಗೆ ಈ ಮೂರರಲ್ಲಿ?

ಕುಮಾರ ಪರ್ವತ
ಕಳೆದ ವಾರದ ಮೊದಲ ಮೂರು ದಿನ ಅಪ್ಪನ ಊರಿನಲ್ಲಿ  ಕಳೆದೆವು.ಅಜ್ಜ ಅಜ್ಜಿಯ ಸಾವಿನ ನಂತರ ಊರಿನತ್ತ  ನಮ್ಮನ್ನು ಅತೀಯಾಗಿ  ಸೆಳೆಯುವವನೊಬ್ಬನೇ ಅವನೇ ನಮ್ಮ ಆತ್ಮೀಯ ಬಂಧು ಸುಬ್ಬಪ್ಪ.ಅದೇ ಕುಕ್ಕೆಯ ಸುಬ್ರಮಣ್ಯ ಅಲಿಯಾಸ್ ಕುಕ್ಕೆ ನಾಗಪ್ಪ.ನಮ್ಮ ರಾಘ(ರಾಘವ ಚಂದ್ರ) ನಿನಗೆ ಆ ಊರಿನ ಒಡನಾಟವಿದೆ  'ಮಡೆ ಮಡೆಸ್ನಾನ' ಬಗ್ಗೆ ಬರಿ ಅಂತ ಆದೇಶಿಸಿದ.ಬರೆಯುವ  ಮುನ್ನ ತುಂಬಾ ಆಲೋಚಿಸಿದ್ದೆ.ಧರ್ಮ,ದೇವರು,ಜಾತಿ,ಪಕ್ಷಗಳಲ್ಲಿನ ಭೇದ ಪ್ರಭೇದಗಳ ಗುರುತಿಸಲು ನನ್ನಿಂದ  ಇಂದಿಗೂ ಸಾಧ್ಯವಾಗಿಲ್ಲ.ಅಂತಹುದರಲ್ಲಿ ಒಂದು ಧರ್ಮ ಜಾತಿ ಅಲ್ಪ ಮಟ್ಟಿಗಿನ ರಾಜಿಕೀಯ  ಹಾಗು ನಂಬಿಕೆಗಳಿಗೆ ಸುತ್ತಿ ಹಾಕಿಕೊಂಡಂತಹ 'ಮಡೆ ಮಡೆಸ್ನಾನ' ಕುರಿತಾಗಿ  ಹೇಳುವುದು ತುಂಬಾ ಇದ್ದರೂ ವಿಷಾದ ಕಾಡುತ್ತಿತ್ತು.ಟಾಮ್(ಸತೀಶ್ ನಾಯಕ್) ನ ಬ್ಲಾಗಿನ  ಹಾಗೆ  ನನ್ನ ಬ್ಲಾಗಿಗೂ ದೊಡ್ದಪ್ಪ ರಾಘನೆ.ನಿನ್ನದೇ ಬ್ಲಾಗ್ ತೆರೆ ಅಂತ ರಾಘ ದುಂಬಾಲು ಬೀಳದಿದ್ದರೆ ಪ್ರಾಯಶ  ಈ ಬ್ಲಾಗ್ ಹುಟ್ಟುತ್ತಿರಲಿಲ್ಲ.ನಮ್ಮ ರಾಘನ ಸಂಪೂರ್ಣ ರಾಗಾವನ್ನು  ಇನ್ನೊಂದು ದಿನ ಹಾಡುತ್ತೇನೆ.ಸಧ್ಯಕ್ಕೆ ಅವನ ಮಾತನ್ನು ಮೀರಬಾರದೆಂದು ಈ ಬರಹ.


ಕುಮಾರ ಧಾರೆ

ಬೆಂಗಳೂರಿನಿಂದ  ಸಕಲೇಶಪುರ ತಲುಪಿ ಅಲ್ಲಿಂದ  ಶಿರಾಡಿ ಘಾಟಿನ ರಸ್ತೆ ಹಿಡಿದು ಅಂಕು ಡೊಂಕಿನ ತಿರುವುಗಳ ಉದ್ದಕ್ಕೂ ಕಾಣುವ  ವನ ರಾಶಿಯ  ಸೌಂದರ್ಯ ಸವಿಯುತ್ತ ೩೦ ಕಿಲೋಮೀಟರ್ ಕೆಳಗಿಳಿದರೆ  ಗುಂಡ್ಯ ಸಿಗುತ್ತದೆ.ಗುಂಡ್ಯದ ಸಮೀಪ ಎಡಕ್ಕೆ ಸಾಗುವ ನೇರ ದಾರಿಯಲ್ಲಿ ೨೨ ಕಿ-ಲೋಮೀಟರ್ ಚಲಿಸುತ್ತ ಹೋದರೆ ನಮ್ಮನ ಸ್ವಾಗತಿಸೋದು ಕುಮಾರ ಧಾರೆ ಹೊಳೆ.ಪ್ರಕೃತಿಯ ಮಡಿಲಿಂದ ನಿರ್ಮಲವಾಗಿ ಊರಿನತ್ತ  ಹರಿಯುವ ಹೊಳೆಯ ಮೇಲೆ ಗಟ್ಟಿಯಾಗಿ ಚಾಚಿಕೊಂಡಿರುವ ಸೇತುವೆ ದಾಟಿ  ಹೆಬ್ಬಾಗಿಲು ಸಮೀಪಿಸುತ್ತಲೇ  ತನ್ನ ತಾನೇ ಕಣ್ಣುಗಳು ಅರಳಿಕೊಳ್ಳುತ್ತವೆ ಕೈಗಳು ಪ್ರಕೃತಿಗೆ ವಂದಿಸುತ್ತವೆ ಮನದಲ್ಲೇನೋ ಪುಳಕ ಸುಬ್ಬಪ್ಪನನ್ನ ಕಾಣುವ ಕಾತುರ ಹಿಮ್ಮಡಿಗೊಳ್ಳುತ್ತೆ.ಸುಬ್ಬಪ್ಪ ನನಗ್ಯಾವತ್ತು ದೇವರೆನಿಸಲೇ ಇಲ್ಲ ಅವನು ಗೆಳೆಯನಷ್ಟೇ ಆಪ್ತ.ಎಂದಿಗೂ ಭಯ ಉಲ್ಬಣಿಸಿದಿಲ್ಲ ಭಕ್ತಿಗಿಂತ ಅವನಲ್ಲಿ  ಸ್ನೇಹ ಅಂಕುರಿಸಿದ್ದೆ ಜಾಸ್ತಿ.
ಕುಕ್ಕೆ ಸುಬ್ರಹ್ಮಣ್ಯ 


ಸಣ್ಣತರಲ್ಲಿ ನಾಗಪ್ಪ ಊರಿನ ನಮ್ಮ ಮನೆಯ  ಹಿತ್ತಲಿಗೆ ಬಂದಾಗ ಅಬ(ಅಜ್ಜಿ) ಒಂದು ಮೊಟ್ಟೆ ಇಟ್ಟು ಕೈ ಮುಗಿಯಲು ಹೇಳುತ್ತಿದ್ದಳು.ನಮ್ಮೂರಿನಲ್ಲಿ ಆ ದಿನಗಳಲ್ಲಿ ದಾರಿಗೊಂದು ಕೆರೆ ಹಾವು ನೋಡ ಸಿಗುತ್ತಿತ್ತು .ಕೆಲವೊಮ್ಮೆ ಸರ್ಪಾಧಿಪತಿ ನಾಗಪ್ಪನ ದರುಶನವು ಆಗುತ್ತಿತ್ತು.ಅಷ್ಟಿದ್ದರು ಅಲ್ಲಿ ಹಾವು ಕಡಿದು ತೊಂದರೆಗಿಡಾದವರು    ಮರಣವನಪ್ಪಿದವರೆ  ಇಲ್ಲ.ಮನೆ ಮಕ್ಕಳಿಗೆ ಇಷ್ಟು ಸಲುಗೆ ಕೊಟ್ಟಿರುವ ದೇವರಲ್ಲಿ  ಭಯ ಭೀತಿ ಎಲ್ಲಿಂದ ಆವರಿಸಿಕೊಳ್ಳಬೇಕು ಹೇಳಿ? ಹಾಗೆ,ನಾವೂ ಕೂಡ ಅದಕ್ಕೆ ಕಿಟಲೆ ಮಾಡುವುದಾಗಲಿ ತೊಂದರೆ ಕೊಡೋದಾಗ್ಲಿ ಮಾಡಿದ್ದಿಲ್ಲ ಬಿಡಿ.ಅದನ್ನ ಕಂಡು ತೀರ ಬೆದರೋದು ಇಲ್ಲ.ಅದರ ಸುದ್ಧಿಗೆ ನಾವು ಹೋಗಲ್ಲ ನಮ್ಮ ಸುದ್ಧಿಗೆ ಅದು ಬರೋಲ್ಲ ಥೇಟ್  ಬೆಂಗಳೂರಿನ ನೆರೆ ಕೆರೆಯವರಂತೆ!ಕಂಡಾಗ ಕೈ ಮುಗಿಯುವುದಷ್ಟೇ.ಎಲ್ಲಾ  ಪುಣ್ಯ ಕ್ಷೇತ್ರದಲ್ಲೂ ಇಂತದೊಂದು ಅದ್ಬುತ ಅಗೋಚರವೆನಿಸುವ  ಹುಬ್ಬೇರಿಸುವಂತ  ಸಂಗತಿಗಳು ಇದ್ದೆ ಇರುತ್ತವೆ.ನಾವು ಸಾಕ್ಷಿಯಾಗುವ ಅದ್ಬುತಗಳಿಗೆ ಅಲ್ಲಿನ ಜನರು ಪಾಲಿಸಿಕೊಂಡು ಬಂದಿರುವ  ಜೀವನಶೈಲಿ ಅವರಿಗೂ ಪರಿಸರಕ್ಕೂ ಇರುವ  ಸಂಪರ್ಕ ಹೊಂದಾಣಿಕೆಯೂ ಒಂದು  ಕಾರಣ,ಅದಕ್ಕೆ ಪೂರಕವಾಗಿ ಇವೆಲ್ಲ ಆಗುತ್ತವೆ ಅಂದರೆ  ಉತ್ಪ್ರೇಕ್ಷೆಯಲ್ಲ .ಹಿಂದೊಮ್ಮೆ ಇಡಿ ಭಾರತ ಭೂಮಿಯೇ ಪುಣ್ಯ ಕ್ಷೇತ್ರವಾಗಿತಂತ್ತೆ.ಈಗಾ ಹಾಗೆಂದರೆ ನಿಶ್ಚಯವಾಗಿ ಪಾಪ ಗಂಟು ಬೀಳಬಹುದು! ನಮ್ಮದು ಇಂದಿಗೂ ಪುಣ್ಯ ಭೂಮಿಯೇ ನಿಜ,ನಾವು ನಿವಾಸಿಗಳು ಪುಣ್ಯತ್ಮರಾಗಿ ಉಳಿದಿಲ್ಲವಷ್ಟೇ.


ಸಾಮಾನ್ಯವಾಗಿ  ಕುಕ್ಕೆ ಸುಬ್ಬಪ್ಪನಲ್ಲಿಗೆ   ಗ್ರಹ ದೋಷಗಳಿಂದ ನರಳುತಿರುವವರು ಮಕ್ಕಳಿಲ್ಲದವರು ಮದುವೆ ಆಗದವರು ಮತ್ತೆ ಪ್ರಮುಖವಾಗಿ ಅರೋಗ್ಯ ಸಮಸ್ಯೆಯಿಂದ ಅದರಲ್ಲೂ ಚರ್ಮ ರೋಗ ಭಾದಿತರು ಹರಸಿ ಕೊಳ್ಳುತ್ತಾರೆ ಮೂರೆ ಹೋಗುತ್ತಾರೆ.ದಿನಲೂ ಸಾವಿರಾರು ಜನರನ್ನು ಆಕರ್ಷಿಸುವ ಈ ದೇವರಿಗೆ ವರ್ಷಕೊಮ್ಮೆ ಮಾರ್ಗಶಿರ ಮಾಸದಲ್ಲಿ ಉತ್ಸವವೊಂದು ಜರಗುತ್ತದೆ.ಅದುವೇ ಚಂಪಾ ಷಷ್ಠಿ ಉತ್ಸವ.

ಬ್ರಹ್ಮರಥ - ಚಂಪಾ ಷಷ್ಠಿ,2012
ಈ ಚಂಪಾ ಷಷ್ಠಿ ಯಾ ಪ್ರಮುಖ ಮತ್ತು ಅನೋಖ ಅನಿಸಿದ ಸಧ್ಯಕ್ಕೆ ಸುದ್ಧಿಯಲ್ಲಿರುವ ಆಚರಣೆಯೆಂದರೆ "ಮಡೆಸ್ನಾನ".ಇದರಲ್ಲಿ ಮೂಲತಃ  ಮೂರು ಪ್ರಕಾರಗಳಿವೆ,ಮಡೆಸ್ನಾನ,ಮೂಲೆ ಮಡೆಸ್ನಾನ ಹಾಗು ಮಡೆ ಮಡೆಸ್ನಾನ.ಇವನ್ನು ಸತತ ಮೂರು ದಿನಗಳ ಕಾಲ  ಅಂದರೆ ಚೌತಿ,ಪಂಚಮಿ ಮತ್ತು ಷಷ್ಠಿ ಯಂದು ಭಕ್ತಾದಿಗಳು ಮಾಡುತ್ತಾರೆ.ಮಡೆಸ್ನಾನವೆಂದರೆ ಉರುಳು ಸೇವೆ ಎಂದರ್ಥ.ದೇವಸ್ತಾನದ ಹೆಬ್ಬಾಗಿಲ ಎದುರು ಹರಿಯುವ ಕುಮಾರ ಧಾರೆ ಹೊಳೆಯಲ್ಲಿ ಮುಳುಗಿ ಅಲ್ಲಿಂದ ಸುಮಾರು ೨ ಕಿಲೋಮೀಟರ್  ಉರುಳುತ್ತಲೇ  ದೇವಸ್ಥಾನದ ಗರ್ಭ ಗುಡಿಯ ಹೊರಗಿನ ಆವರಣ ತಲುಪುವ ಸೇವೆ ಇದು.ಕುಮಾರ ಪರ್ವತದ ತಪ್ಪಲಿನಲ್ಲಿ ಉಗಮಿಸುವ ಈ ಹೊಳೆಯು ಅಲ್ಲಿಂದ ಹರಿದು ಬರುವಾಗ ಅನೇಕ ಗಿಡಮುಲಿಕೆಯ ಸಾರವನ್ನು ಹೊತ್ತು ತರುತ್ತದೆ.ಔಷಧಿ ಗುಣವಿರುವ ಈ ಜಲ ಹಾಗು ನೆಲದಲ್ಲಿ ಮುಳುಗೆದ್ದರೆ ರೋಗ ರುಜಿನಗಳು ಅದರಲ್ಲೂ ಮುಖ್ಯವಾಗಿ ಚರ್ಮ ರೋಗದಿಂದ ಮುಕ್ತಿ ಹೊಂದಬಹುದೆಂಬ  ನಂಬಿಕೆ ಅನಾಧಿ ಕಾಲದಿಂದಲೂ ಚಾಲ್ತಿಯಲ್ಲಿದೆ.ಮೂಲೆ ಮಡೆಸ್ನಾನವೆಂದರೆ ದೇವಸ್ಥಾನದ ಒಳಾಂಗಣದ ನಾಲ್ಕು ಮೂಲೆ ಗಳಲ್ಲಿ ಮಾತ್ರ ಉರುಳಿ ದೇವರಿಗೆ ಸೇವೆ ಸಲ್ಲಿಸುವುದು.


ಮಡೆ ಮಡೆಸ್ನಾನ -ಚಂಪಾ ಷಷ್ಠಿ,2012
ಇನ್ನು "ಮಡೆ ಮಡೆಸ್ನಾನ"ವೆಂದರೆ ಎಂಜಲು('ಮಡೆ' ತುಳು ಭಾಷೆಯಲ್ಲಿ) ಮೇಲಿನ ಉರುಳು ಸೇವೆ ಎಂದರ್ಥ.ನಾವು ಗಮನಿಸಿದರೆ ಚರ್ಮ ರೋಗಗಳಿಗೆ ಮೂಲತಃ ದೇಹದ ಒಳಗಿನ ಚಿಕಿತ್ಸೆಯ ಜೊತೆ ಜೊತೆಗೆ  ಹೊರಗಿನ  ಭಾಗಕ್ಕೂ ಲೇಪನಗಳ ಹಚ್ಚಿ ಚಿಕಿತ್ಸೆ ನೀಡಲಾಗುತ್ತೆ.ಸುಬ್ರಮಣ್ಯಕ್ಕೆ ಭೇಟಿ ಕೊಟ್ಟವರೆಲ್ಲರೂ ದೇವಸ್ಥಾನದ ರುಚಿಕಟ್ಟಾದ  ಊಟವ  ಮೆಚ್ಚಿ ಬಾಯಿ ಚಪ್ಪರಿಸಿ ಹೊಗಳುವವರೇ.ಹಿಂದೆ ಈ ಮಡೆ ಸ್ನಾನಗಳು ಹುಟ್ಟಿದ ದಿನಗಳಲ್ಲಿ ಅಲ್ಲಿನ ನೆಲದಲ್ಲೇ ಬೆಳೆದ ಬತ್ತ ಹಾಗು ಇತರ ಪಧಾರ್ಥಗಳಿಂದ ಸಿದ್ದವಾಗುತ್ತಿದ್ದ ಸತ್ವಯುತ ಊಟದಲ್ಲಿ ರೋಗನಿರೋಧಕ ಅಂಶಗಳು ಎತೇಚವಾಗಿದ್ದವು.ಆ ಮೂಲಕ ಇಂತದೊಂದು ಆಚರಣೆ ರೂಢಿಗೆ ಬಂದಿರಬೇಕು.ಎಂಜಿಲು ಸಹ  ಔಷಧಿ ಗುಣವುಳ್ಳದ್ದಾದರು ಇಲ್ಲಿ  ಪರರ ಎಂಜಲಿಗೆ ಯಾವ ರೀತಿ  ಪ್ರಾಮುಖ್ಯತೆ ಮಹಾತ್ಮೆ ಇದೆ ಎಂಬುದು ಸ್ಪಷ್ಟವಾಗಿಲ್ಲ.ಚಂಪಾ ಷಷ್ಠಿಯಂದು ದೇವರಿಗೆ ಮಾಡಿ ಬಡಿಸಿದ ನೈವೇದ್ಯವನ್ನು ದೇವಸ್ಥಾನದ ಆವರಣದಲ್ಲಿ ಉಂಡು ಒಗೆದ  ಎಂಜಿಲೆಲೆಗೆ  ಶ್ರೇಷ್ಠತೆ ಅದೇಗೋ ಸಂಧಿ ಬಿಟ್ಟಿದೆ.ಈ ನಂಬಿಕೆ ಕಲ್ಪಿಸಿರುವ ಶ್ರೇಷ್ಟತೆಯೇ ಎಂಜಿಲೆಲೆಯ  ಮಡೆಸ್ನಾನಕ್ಕೆ ಬುನಾದಿ ಎನ್ನಬಹುದು.ಎಂಜಿಲೆಲೆಯ ಮಡೆಸ್ನಾನದ ಬಗ್ಗೆ ನನ್ನದೂ ಸಂಪೂರ್ಣ ಸಹಮತಿ ಇಲ್ಲದಿದ್ದರೂ ಹೈ ಕೋರ್ಟಿನ ಆಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದಕ್ಕೆ  ಸಂಭ್ರಮಿಸಿದ್ದೆ.ನಮ್ಮ ಮಾನ್ಯ ಹೈ ಕೋರ್ಟ್ ಯಾರು ತಿನ್ನದ ಊಟದ ಎಡೆಗಳ  ಮೇಲೆ ಮಡೆ ಸ್ನಾನ ಮಾಡಲು ಆದೇಶ ಸೂಚಿಸಿದ್ದು ಎಂಜಿಲೆಲೆಯ ಮಡೆಸ್ನಾನಕ್ಕಿಂತಲೂ ಅನಿಷ್ಟ ಅಮಾನವೀಯ ಖಂಡನೀಯ ನನ್ನ ಪ್ರಕಾರ..ಅಲ್ಲಾ,ತಿನ್ನಲು ಅನ್ನವಿಲ್ಲದೆ  ಪೌಷ್ಟಿಕತೆಯ ಕೊರತೆಯಿಂದಾಗಿ ಸಾಯುವ ಜನರಿರುವ ದೇಶದಲ್ಲಿ ಯಾರಿಗಾದರು ಆಹಾರವಾಗಬಲ್ಲಂತಹ  ನೂರಾರು ಊಟದ ಎಲೆಗಳ ಬಡಿಸಿ ಉರುಳಾಡುವುದೆಂದರೆ?? ಆಚರಣೆಯ ರೂಪದಲ್ಲಿ ಅನ್ನಕ್ಕೆ ಮಾಡುವ ಅವಮಾನವೆ ಸರಿ ಅದು!

ಚಂಪಾ ಷಷ್ಠಿ,2012




ಮತ್ತೆ ಇಲ್ಲಿನ ಆವರಣದೊಳಗೆ ಊಟ ಮಾಡಲು ಒಂದು ಪ್ರತ್ಯೇಕ ಮೇಲ್ ವರ್ಗದವರಿಗೆ ಮಾತ್ರ  ಅವಕಾಶವಿದೆ.ಸಾಮಾನ್ಯ ಭಕ್ತಾ ವೃಂದ ಅವಕಾಶವಂಚಿತರಾಗಿದ್ದಾರೆ.ಇಲ್ಲಿ ನಿಜವಾದ ಫಲಾನುಭವಿಗಳು ದೇವರ ಸನ್ನಿಧಿಯಲ್ಲಿ  ಎಲೆ ಊಟ ಮಾಡಿದವರ ಅಥವಾ ಅದರಲ್ಲಿ ಉರುಳುವವರ ಅನ್ನೋದು ನನ್ನ ವಯಕ್ತಿಕ ಗೊಂದಲಗಳಲ್ಲೊಂದು.ಗರ್ಭಗುಡಿಯ  ಒಳಗಿನ  ಪ್ರವೇಶಕ್ಕಾದರು ಮಡಿ ಮೈಲಿಗೆ ಮೊದಲಾದ  ಸಬೂಬುಗಳು ಒಪ್ಪುವಂತದ್ದು,ಆದರೆ ದೇವಸ್ಥಾನದ ಆವರಣದೊಳಗೆ ಕೇವಲ ಒಂದು ವರ್ಗಕ್ಕೆ ಮಾತ್ರ ಪ್ರಸಾದ(ಎಲೆ ಊಟ) ಸ್ವೀಕರಿಸಲು ಹಕ್ಕು ನೀಡಿದ್ದಾರೆ.ಎಲ್ಲ ಜಾತಿ ಧರ್ಮದವರಿಗೂ ಓಡಾಡುವ ಅವಕಾಶವಿರುವಾಗ ಊಟದ  ವಿಷಯದಲ್ಲಿ ಮಾತ್ರ ಬೇರೆಲ್ಲರಿಗೂ ನಿರ್ಭಂದನೆ ಯಾಕೆ? ಇದಕ್ಕುತ್ತರ ಸಾಕ್ಷಾತ್ ನಮ್ಮ ಸುಬ್ಬಪ್ಪನೆ ನೀಡಬೇಕೆನೋ.ಆದರೆ ಯಾಕೋ ಏನೋ ಇವೆಲ್ಲದಕ್ಕಿಂತಲೂ  ಸುದ್ಧಿ ಆಗಿದ್ದು ಮಡೆ ಮಡೆಸ್ನಾನದಿಂದ ಮಲೆಕುಡಿಯ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ.

ಕುಕ್ಕೆ ಸುಬ್ಬಪ್ಪ ತಮ್ಮ ಇಷ್ಟಾರ್ಥ ನೆರವೇರಿಸಲಿಯೆಂದು ದೋಷ  ಕಾಯಿಲೆಗಳು  ಗುಣವಾಗಲೆಂದು ಹರಕೆ ಹೊರುವ ಅಥವಾ ನೆರವೇರಿಸಿದಾಗ  ಕೃತಜ್ಞರಾಗಿ  ಹರಕೆ ತೀರಿಸುವ ಪದ್ದತಿಯಾಗಿ ಈ ಮಡೆ ಸ್ನಾನಗಳು ಆಚರಣೆಗೆ ಬಂದವು.ಇದು ಶತಮಾನಗಳಿಂದಲೂ ಊರಿನನವರು ನಡೆಸಿಕೊಂಡು ಬಂದಿರುವಂತಹ ಸಂಪ್ರದಾಯ.ಅಸಲಿಗೆ ಇದರಲ್ಲಿ ತೊಡಗಿಸಿಕೊಳ್ಳೋಕೆ ಯಾವತ್ತು ಯಾರನ್ನು ಒತ್ತಾಯಿಸಿದಿಲ್ಲ.ಭಕ್ತರು ಸ್ವಯಿಚ್ಚೆಯಿಂದ  ಮನಸೋಪೂರ್ವಕವಾಗಿ ನಡಿಸುವ ಸೇವೆಯಿದು.ಮಜಾ ಏನಂದರೆ ಇಂದು ಇಲ್ಲಿ ಮಡೆಸ್ನಾನ ಸೇವೆಯಾಗಲಿ ಮಡೆ ಮಡೆಸ್ನಾನ  ಸೇವೆಯಾಗಲಿ ಅಲ್ಲಿನ ಮೂಲ ನಿವಾಸಿಗಳಿಗಿಂತಲೂ ಪರ ಊರಿನವರು ಮಾಡುವುದನ್ನ  ಹೆಚ್ಚು ಕಾಣಬಹುದು.ಇನ್ನು ಅವರನ್ನೆಲಾ ಬಲವಂತದಿಂದ ಮಾಡಿಸುವ ಪ್ರಶ್ನೆಯ ಏಳುವುದಿಲ್ಲ ಎಲ್ಲ ಅವರವರ ನಂಬಿಕೆಗೆ ಶ್ರದ್ದೆಗೆ  ಬಿಟ್ಟಂತ ವಿಚಾರಗಳು.ಆದರೆ ಎಲ್ಲೆಡೆ ಇದು ಪ್ರಚಾರವಾಗಿದ್ದು ಮಾತ್ರ ಕೇವಲ ಒಂದು ಜನಾಂಗ ನಡೆಸುತ್ತಿರುವ ಸೇವೆಯೆಂದು! ಪುರಾತನ ಕಾಲದಿಂದಲೂ ಸ್ವಯಿಚ್ಛೆಯಿಂದಲೇ ಮಡೆ ಮಡೆಸ್ನಾನವನ್ನು ಇಲ್ಲಿನ ಮಲೆಕುಡಿಯ ಜನಾಂಗದವರು ಸೇರಿದಂತೆ  ಬ್ರಾಹ್ಮಣರು ಆಚಾರಿಗಳು ಮುಸುಲ್ಮಾನರು ಬೇರೆ ಇತರರೂ ಮಾಡುತ್ತಾ ಬಂದಿದ್ದಾರೆ.

ಪಂಚಮಿ ರಥ - ಚಂಪಾ ಷಷ್ಠಿ,2012


ಆದರೆ ಇದೀಗ ಈ ಪುಣ್ಯ ಕ್ಷೇತ್ರ ದೇಶಾದ್ಯಂತ ಹೆಚ್ಚು ಪ್ರಸಿದ್ಧಿ ಹೊಂದಿದ್ದೆ ತಡ ಕಟ್ಟು ಕಥೆಗಳು ಹಬ್ಬತೊಡಗಿವೆ.ಕಳೆದ ವರ್ಷ ಮಡೆ ಸ್ನಾನದ ನೆಪದಲ್ಲಿ ದಲಿತರಾದ ಮಲೆಕುಡಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರತಿಬಿಂಬಿಸಲಾಯಿತು.ಕರ್ನಾಟಕ ತಮಿಳುನಾಡಿನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ ಅಲ್ಲವೇ? ಹಾಗೆಯೇ ಇಲ್ಲಿಯೂ ಆದದ್ದು ಎಂದುಕೊಳ್ಳಿ.ಮೇಲ್ ವರ್ಗದ ಜನ ಮತ್ತು ದಲಿತ ಮಲೆಕುಡಿಯರ ನಡುವೆ ಎಲ್ಲವೂ ಸರಿ ಇದೆ ಎನ್ನಲಾಗದು.ದೇವಸ್ಥಾನದ ಆಡಳಿತ ಪರಿವಿಧಿಯಲ್ಲಿ ಎಲ್ಲರಿಗೂ ಸಮಾನ  ಹಕ್ಕು,ಉದ್ಯೋಗಾವಕಾಶಗಳು ನೀಡಲಾಗಿಲ್ಲ ಎಂಬ ಕೂಗು ಇಲ್ಲಿ ಕೇಳಿ ಬರುತ್ತದೆ.ಒಳ ಜಗಳ, ಒಂದು ವರ್ಗದ ಮೇಲ್ಗೈ,ದಬ್ಬಾಳಿಕೆ ಇದ್ದದ್ದೇ ...ಹಾಗಂತ  ತಮ್ಮ ಅಸ್ಥಿತ್ವ ಪ್ರತಿನಿಧಿಸುವ ತಮ್ಮ ಹೊಟ್ಟೆಪಾಡು ನೀಗಿಸುತ್ತಿರುವ ಎಲ್ಲದಕ್ಕೂ ಮಿಗಿಲಾಗಿ ಭಾವನಾತ್ಮಕ ಸಂಭಂದವಿರುವ ದೇವಸ್ಥಾನದ  ಆಚರಣೆಗಳ ವಿರುದ್ದ ತಮ್ಮ ಜನಾಂಗದ  ಹೆಸರನ್ನು ಅಸ್ತ್ರವಾಗಿ ಬಳಸಿಕೊಂಡು ಇಲ್ಲದ ಆರೋಪಗಳ ಮಳೆಗರಿಸಿದರೆ ಯಾರು ತಾನೇ ಸುಮ್ಮನಿದ್ದಾರು ಹೇಳಿ? ಅಷ್ಟಕ್ಕೂ ಮಲೆಕುಡಿಯರಿಗೂ ಈ ದೇವರಿಗೂ ಹತ್ತಿರದ ನಂಟಿದೆ.ಊರಿನಲ್ಲಿ ಇವರನೊಳಕೊಂಡಂತೆ ಒಂದು ಕಥೆ ಕೇಳಿ ಬರುತ್ತದೆ.ಯುಗಗಳ ಹಿಂದೆ ಈ ಪ್ರದೇಶದ ಮಲೆಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡಿತಂತೆ.ಬೆಂಕಿಯ ನಡುವೆ ದಿಗ್ಬಂದನವಾಗಿದ್ದ ದೇವ ಸರ್ಪವೊಂದರ ನರಳುವಿಕೆಯಾ ಕೂಗು ಭೇಟಿಗೆಂದು ಹೋಗಿದ್ದ  ಮಲೆಕುಡಿ ಜನಾಂಗದ ಪೂರ್ವಜರ ಕಿವಿಗೆ ಬಿದ್ದಿತಂತೆ.ಸರ್ಪದ ದಯನೀಯ ಸ್ಥಿತಿ ಕಂಡು ಅದನ್ನ ಬೆಂಕಿಯಿಂದ ರಕ್ಷಿಸಿ ತಾನು ತಂದ ಕುಕ್ಕೆ ಯಲ್ಲಿ ಇಟ್ಟುಕೊಂಡು ಬೆಟ್ಟದ ಕೆಳಗೆ ನಡೆಯುತ್ತಿದ್ದಾಗ ನಿನಗೆ ಭಾರವೆನಿಸಿದ ಜಾಗದಲ್ಲಿ ನನ್ನನಿಳಿಸು ಎಂಬ ಅಶರೀರ  ವಾಣಿ  ಕೇಳಿತಂತೆ.ಆ  ಮಾತಿನಂತೆ ಅದು  ಭಾರವಾಗ  ತೊಡಗಿದ ಜಾಗದಲ್ಲಿ ಇಳಿಸಲಾಯಿತು.ಆದರೆ ಆ ಸ್ಥಳ, ಬೆಂಕಿಯ ಭಯದಿಂದ ಬೆಂದಿದ್ದ ಸರ್ಪಕ್ಕೆ ಕ್ಷೇಮವೆನಿಸದ ಕಾರಣ ಅದು ಅಲ್ಲಿಂದ ಸುಮಾರು ಹೆಜ್ಜೆಯ ದೂರದಲ್ಲಿ  ಸುತ್ತಲೂ ನೀರು ಹರಿಯುವಂತ  ಸ್ಥಳದಲ್ಲಿ ತನ್ನನ್ನು ಬಿಡುವಂತೆ ಸೂಚಿಸಿತಂತೆ.ಸರ್ಪವನ್ನು ಮೂಲವಾಗಿ ಇಳಿಸಿದ ಸ್ಥಳವೆ 'ಆದಿ ಸುಬ್ರಹ್ಮಣ್ಯ' ಎಂದು ಪ್ರಸಿದ್ದವಾಯಿತು ಅಲ್ಲಿನ ಗರ್ಭ ಗುಡಿಯಲ್ಲಿ  ಇಂದಿಗೂ ಕೇವಲ ಹುತ್ತವನ್ನು ಮಾತ್ರ ಕಾಣಾಬಹುದಾಗಿದೆ.ದರ್ಪಣತೀರ್ಥ ಹಾಗು ಕುಮಾರ ಧಾರೆ ನದಿಯು ಕುಕ್ಕೆ ದೇವಸ್ಥಾನ  ಪ್ರದೇಶದ ಸುತ್ತಲೂ  ಹರಿದು ಹೋಗುತ್ತದೆ.ಕುಕ್ಕೆ ಯಲ್ಲಿ ಹೊತ್ತು ತಂದದ್ದಕ್ಕೆ ಸರ್ಪ ನೆಲೆಸಿದ ಸುತ್ತಲೂ ನೀರಿರುವ  ಜಾಗ "ಕುಕ್ಕೆ ಸುಬ್ರಹ್ಮಣ್ಯ" ಎಂದು ನಮಾಕರಣಗೊಂಡಿದೆ ಎಂಬುದಾಗಿ ಕಥೆ ಸಾರುತ್ತದೆ.ಹಾಗಾಗಿಯೇ ಇಲ್ಲಿನ ದೇವಸ್ಥಾನದ  ಪದ್ದತಿಯನ್ನು ದೂಷಿಸುತ್ತಿರುವವರ ಎದುರು ದೇವಸ್ಥಾನದ ಮಲೆಕುಡಿಯ ಕಾರ್ಮಿಕರು ಸಿಡಿದೆದ್ದಿದ್ದು.ಇಡಿ ಮಲೆಕುಡಿಯ ಸಮುದಾಯ ಇವರ ಬೆನ್ನ ಹಿಂದೆ ನಿಂತ್ತಿದ್ದು.ಅಂದು ಪ್ರತಿಭಟಿಸಲು ಬಂದ  ದಲಿತ ಮುಖಂಡರು, ತಮ್ಮ ವಿರುದ್ದ ನಿಂತ ದಲಿತ ಮಲೆಕುಡಿಯರ ಕುರಿತಾಗಿ,"ನೀವೆಲ್ಲಾ  ದೌರ್ಜನ್ಯವನ್ನು ಸಹಿಸುತ್ತಿರುವ ಅನಾಗರಿಕರು" ಎಂದಾಗಲೇ ಅವರೊಡನೆ  ಕೈ ಕೈ ಮಿಲಾಯಿಸಿ ಕಡೆಗೆ ಜೈಲಿಗೂ ಹೋಗಿ ಬಂದರು.ಮಲೆಕುಡಿಯರ ಈ ವರ್ತನೆ  ಹಿಂದೆ  ಮೇಲ್ವರ್ಗ ಜನರ ಆಡಳಿತ ಮಂಡಳಿಯ  ಕುಮ್ಮಕ್ಕಿತ್ತೆಂದು ಹೇಳುವವರು ಇದ್ದಾರೆ.ಅದು ಒಂದು ಮಟ್ಟಿಗೆ ಸರಿಯೂ ಹೌದು ಯಾಕಂದರೆ ಆರೋಪ ಮೇಲ್ವರ್ಗದ ಜನ ಹಾಗು ಮಲೆಕುಡಿಯರಿಬ್ಬರಿಗೂ ಸಂಭಂದಿಸಿದ್ದು ಇದಕ್ಕೆ ಇಬ್ಬರೂ ಕೂಡಿ ಪ್ರತಿಭಟಿಸಬೇಕಿತ್ತು.ಸರ್ವರೆದುರು ದಲಿತ ಸಂಘಟನೆಗಳು ನಿರ್ಮಿಸಿದ ಗೊಂದಲಕ್ಕೆ ಉತ್ತರಿಸಬೇಕಿತ್ತು ಹಾಗಾಗಿದ್ದರೆ ಇದು ಇಷ್ಟು ದೂರ ಮುಂದುವರೆಯುತ್ತಿರಲಿಲ್ಲವೇನೋ.ಆದರೆ ಅಂದು ಅವರು ಸಂಪೂರ್ಣವಾಗಿ ಹಿಂದೆ ಸರಿದು ಮೌನ ತಾಳಿದರು ಮಲೆಕುಡಿಯರಿಗೆ ನಿಮ್ಮ ದೇವರನ್ನು ನೀವೇ ಕಾಪಾಡಿಕೊಳ್ಳಿ ಎಂದು ಕಿಚ್ಚೆಬಿಸಿ ಉತ್ತರಿಸಲು ಮುಂದೆ ಬಿಟ್ಟಿದ್ದಾರೆ.ಅದೇನೇ ಆಗಲಿ ನಂತರ  ಜೈಲು ಸೇರಿದವರನ್ನ ರಾಜ ಮರ್ಯಾದೆ ಇಂದಲೇ ಕರೆತಂದರೆನ್ನಿ.ಅಂತು ಇಂತೂ  ಭಿನ್ನಾಭಿಪ್ರಾಯಗಳ ನಡುವೆಯೂ ಸ್ನೇಹ ಸೌಹಾರ್ದತೆಯಿಂದ ಬಾಳುತ್ತಿರುವ ಇಲ್ಲಿನವರ ನಡುವೆ ವಿಷ ಬೀಜ ನೆಡುವಲ್ಲಿ ವಿಫಲವಾಯಿತು ನಾಗರಿಕ(ಎನಿಸಿಕೊಂಡ) ಸಮಾಜ.

ಮಡೆ  ಮಡೆಸ್ನಾನ ದಿಂದ ಕಷ್ಟಗಳು ಪರಿಹಾರವಾಗಿತೆ,ಕಾಯಿಲೆಗಳು  ಗುಣವಾಗಿತೆ ಅನ್ನೋ ಪ್ರಶ್ನೆಗಳು ಹಲವರದ್ದು.ಹಾಲು ಕುಡಿಯುವ ಎಳೆಗೂಸು ಮಾತ್ರ ಅಮ್ಮನ ಹಾಲಿನ ರುಚಿ ಬಲ್ಲದು ಅಲ್ಲವೇ? ಅಂತೆಯೇ ಅದು ಕೆಟ್ಟಾಗ ಮಗುವಿನ ರುಚಿಗೆ  ಆರೋಗ್ಯಕ್ಕೆ ತಕ್ಕದಾಗಿ ಶೋಧಿಕರಿಸಿ ಉಣಿಸ ಬೇಕೇ  ಹೊರತು ನಾವು ದೊಡ್ಡವರ ನಾಲಿಗೆಗೆ ಅದು ಎಷ್ಟು ಸಲ್ಲುತ್ತದೆ ಅನ್ನೋದರ ಮೇಲಲ್ಲ.ಹಾಗೆ  ಧರ್ಮ ದೇವರನ್ನೋಳಗೊಂಡ ನಂಬಿಕೆಯೊಂದು  ಮೌಡ್ಯತೆ ಎಂದು  ಬಿಂಬಿತವಾದ ಹಿನ್ನಲೆಯಲ್ಲಿ  ಅದನ್ನು ಆಸ್ತಿಕರ ದೃಷ್ಟಿಕೋನದಿಂದ ಚರ್ಚಿಸಬೇಕೆ ವಿನಹ ನಾಸ್ತಿಕರ ದೃಷ್ಟಿಕೋನ ಇಟ್ಟುಕೊಂಡು ವಾದಕ್ಕಿಳಿಯುವುದು ಸಮಂಜಸವಲ್ಲ.ಮಡೆ ಸ್ನಾನದಿಂದ ಅರೋಗ್ಯ ವೃದ್ಧಿಸುತ್ತದೆ ರೋಗ ರುಜಿನಗಳು ಇಲ್ಲವಾಗುತ್ತದೆ ದೇವರ ಕೃಪೆಗೆ ಪಾತ್ರರಾಗುತ್ತೇವೆ  ಎಂಬುದು  ಜಾತ್ಯಾತಿತಾರಾದ  ಭಕ್ತರ  ನಂಬಿಕೆ.ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಮ್ಮ ಸಂವಿಧಾನ ಸರ್ಕಾರಕ್ಕೆ ನೀಡಿದೆ.ಧಾರ್ಮಿಕ ನಂಬಿಕೆಗಳನ್ನ ಒಬ್ಬರ ಮೇಲೆ  ಬಲವಂತಾವಾಗಿ ಹೇರಿದಾಗ ಅದರಿಂದಾಗಿ ಒಬ್ಬ ವ್ಯಕ್ತಿಗೆ ಅಥವಾ ಸಮೂಹಕ್ಕೆ ಮಾನಸಿಕ ದೈಹಿಕ ಹಿಂಸೆ ತೊಂದರೆಗಳಾದಾಗ  ಅಂತಹುಗಳನ್ನು ತಡೆಯುವ ನಿಷ್ಕ್ರಿಯೇಗೊಳಿಸುವ ಹಕ್ಕೂ  ಸರ್ಕಾರಕ್ಕಿದೆ.ಈ ಆಚರಣೆಯಲ್ಲಿ  'ಎಂಜಿಲಿನ' ಮೇಲೆ ಉರುಳುತಿದ್ದಾರೆ ಅನ್ನುವುದ ಬಿಟ್ಟರೆ ಬೇರೆ ಯಾವ ತರನಾದ ದೌರ್ಜನ್ಯವು ಯಾರ ಮೇಲೂ ನಡೆಯುತ್ತಿಲ್ಲ.ಹಾಗಾಗಿ ಇಡಿ ಆಚರಣೆಯನ್ನೇ ಸಾರಾಸಗಟು ವಿರೋಧಿಸುವುದು ಎಲ್ಲಿಯ ನ್ಯಾಯ? ಈ ವರ್ಷ ಎಂದಿನಂತೆ ಮಡೆ ಸ್ನಾನ ನಡೆಸಲು ಸುಪ್ರೀಂ ಕೋರ್ಟ್  ಹಸಿರು ನಿಶಾನೆ ತೋರಿಸಿತು.ಕೊಂಚ ತಿದ್ದು ಪಡಿಯೊಂದಿಗೆ ಇದನ್ನ ಮುಂದುವರಿಸುವುದು ಒಳಿತೆಂಬುದು ನನ್ನ ವಯಕ್ತಿವ ಭಾವನೆ.
    
ಸಾಮಾಜಿಕ ಸೋಂಕನ್ನ ತಡೆಗಟ್ಟುವ ಬದಲು ಅವನಿನ್ನೂ ದ್ವಿಗುಣಗೊಳಿಸುವ ಅಂತರವನ್ನು ಬೆಳೆಸಲು ಪುಷ್ಟಿ ಕೊಡುವ ಸಮೂಹಗಳ ಪ್ರಯತ್ನಗಳು ಆಗಾಗ  ನಡೆಯುತ್ತಲೆ ಇರುತ್ತಾವೆ.ಎಲ್ಲರಿಗು ಅವರವರದೇ ಸಮರ್ಥನೆಗಳಿರುವುದರಿಂದ ಇಲ್ಲಿ ಯಾರದ್ದು ತಪ್ಪುಯಾರದ್ದು ಸರಿ ಎಂದು ನಿರ್ದಿಷ್ಟವಾಗಿ ಹೇಳಾಲಾಗದು.ಮೇಲ್ ವರ್ಗದವರು ಹಾಗು ಆಡಳಿತ ಮಂಡಳಿಯೂ ಆರೋಪ ಹೊತ್ತರು ಸಂಯಮ ಕಾಯ್ದು ಕೊಂಡಿದ್ದು ಪ್ರಶಂಸನೀಯ.ಇನ್ನಾದರೂ ಅವರು  ದೇವಸ್ಥಾನದ ಕಾರ್ಯಗಳಲ್ಲಿನ  ಎಲ್ಲಾ ವಿಭಾಗದಲ್ಲೂ  ತೊಡಗಿಸಿಕೊಳ್ಳಲು ಊರಿನ ಇತರ  ವರ್ಗದ ಜನರಿಗೂ "ಸಮಾನವಕಾಶ" ದೊರಕಿಸಿಕೊಡುವಂತಾಗಲಿ.ಮಲೆಕುಡಿಯರು ತಾವು ಹಿಂದುಳಿದವರು ಅಂದು ಕೊಂಡರೆ ಎಂದಿಗೂ  ಹಿಂದೆಯೇ ಉಳಿದು ಬಿಡುತ್ತಾರೆ.ಅದನ್ನ ಬಿಟ್ಟು ಅವರು ಪರದೆಯ ಮುಂದೆ ಬರಬೇಕು.ಇದನ್ನು ಸಂಭಾಳಿಸಿದಂತೆ ಅವರೆಲ್ಲ  ಸಮಸ್ಯೆಗಳಿಗೂ ಸಂಘ ಸಂಸ್ಥೆಗಳ ನೆಚ್ಚದೆ  ತಾವೇ ಧೈರ್ಯವಾಗಿ ಮುನ್ನುಗ್ಗಿ ಪರಿಹಾರ ಹುಡುಕಿಕೊಳ್ಳುವಂತಾಗಬೇಕು.ಒಂದು ವರ್ಗಕ್ಕೆ ಅನ್ಯಾಯ ವಾಗುತ್ತಿದೆ ಎಂಬ ವಿಷಯ ಕಿವಿಮೀಟಿದಾಗ ಸಂಭಂದ ಪಟ್ಟ  ಸಂಘಟನೆಗಳು ಹೋರಾಟಕ್ಕಿಳಿಯುವುದು ಸಹಜವೇ.ದಲಿತ ಸಂಘಟನೆಯೂ ಅದನ್ನೇ ಮಾಡಿದೆ.ಆದರೆ ಅದಕ್ಕೂ ಮುನ್ನ ಬಂದ ಸುದ್ಧಿಗಳ ವಿಷಯ ಮಂಥನವಾಗಬೇಕಿತ್ತಲ್ಲವೇ? ಸತ್ಯಸಥ್ಯತೆಗಳ ಪರಿಶೀಲನೆ ನಡಿಸಬೇಕಿತ್ತು.ಯಾವುದೇ ಸಂಘದ ಹೋರಾಟವಾಗಿರಲಿ ಸುಮ್ಮನೆ ಗಲಭೆ ಸೃಷ್ಟಿಸುವ ಬದಲು ಅದನ್ನಾಶ್ರಯಿಸಿರುವ ಜನರ ಅಭಿವೃದ್ಧಿ ಪರನಾಗಿ ಚಿಂತನೆ ನಡಿಸಬೇಕು.ಪ್ರಚಲಿತವಾಗಿರುವ ಸುಳ್ಳಿನ ಪದರುಗಳ ಸರಿಸಿ ನಿಜ ಸಮಸ್ಯೆಯನ್ನು  ಸಂಘಟನೆಗಳು  ಗುರುತಿಸುವಂತಾಗಬೇಕು.

ಸಮಸ್ಯೆಗಳ ವಿರುದ್ದ  ಹೋರಾಡುವು ಮನೋಭಾವಕಿಂತಲೂ ಯಾವ ಸಮಸ್ಯೆಯನ್ನು ಆಯ್ದುಕೊಂಡರೆ ಎತ್ತಿಡಿದರೆ  ಅಧಿಕ ಜನರ ಗಮನ ಸೆಳೆಯಬಹುದು  ಬೆಂಬಲಗಳಿಸಬಹುದು  ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಲೆಕ್ಕಾಚಾರಗಳೇ ಮೇಲೈಸುತ್ತಿವೆ ಎಲ್ಲೆಡೆ.ಅಲ್ಲಿ ಸಮಸ್ಯೆ ಇರಲಿ ಬಿಡಲಿ ಹೆಚ್ಚು ಮನ್ನಣೆ ಸಿಗುವುದೆಂದರೆ  ಸಮಸ್ಯೆಗಳಿಗೆ ನವ ಹುಟ್ಟು ಕೊಟ್ಟು ಬಿಡುತ್ತಾರೆ.....ಅದಕ್ಕೊಂದು ನಿದರ್ಶನ ಮಡೆ ಮಡೆ ಸ್ನಾನದಲ್ಲಿನ ಮಲೆಕುಡಿಯರ ದೃಷ್ಟಾಂತ!

9 comments:

  1. ನಿಮ್ಮ ಲೇಖನದ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಇತಿಹಾಸ ತಿಳಿದು ಖುಶಿಯಾಯಿತು. ಅಲ್ಲದೆ, ಇಲ್ಲಿಯ ಆಚರಣೆಯ ಮೇಲೆ ಒಳ್ಳೇ ಬೆಳಕು ಬೀರಿರುವಿರಿ.

    ReplyDelete
  2. ವಾಹ್, ವೈಶೂ... ವಾಹ್....!! ಕುಕ್ಕೆ ಸುಬ್ರಹ್ಮಣ್ಯಂ ಶ್ರೀ ಕ್ಷೇತ್ರದ ಬಗ್ಗೆ ಈ ತೆರನಾಗಿ ಬೆಳಕು ಚೆಲ್ಲಿದ ನಿನಗೆ ೫೪೭ ಥ್ಯಾಂಕ್ಸ್.

    "ದೇವರನ್ನ ಸುಬ್ಬಪ್ಪ ಅಂತ ಕರೆದಿದ್ದು", "ಅವನು ನಂಗೆ ದೇವರು ಅಂತ ಅನಿಸಿದ್ದೇ ಇಲ್ಲಾ... ನನ್ನ ದೋಸ್ತ್ ಅಂತಾನೇ ತಿಳಿದಿದ್ದೆ" ಈ ಸಾಲುಗಳನ್ನ ಓದಿದಾಗ ನನಗೆ, "ನನ್ನ ಮೆಚ್ಚಿನ ಜಯಂತ್ ಕಾಯ್ಕಿಣಿ " ಅವರ ಸಾಳುಗಳು ನೆನಪಾದರೆ ಖಂಡಿತ ಅದು ನಿನ್ನ ಬರವಣಿಗೆಗೆ ಸಲ್ಲತಕ್ಕಂಥಹ ಶ್ರೇಯ. J .K. ಅವರು ಕೂಡ "ಅವರ ಮತ್ತು ದೇವಸ್ತಾನಗಳ ತವರೂರು ಅವರ ಹುಟ್ಟೂರು ಗೋಕರ್ಣ ಹಾಗೂ ಅಲ್ಲಿನ ದೇವರ ಜೊತೆಗೆ ಅವರಿಗಿದ್ದ ನಂಟನ್ನ ಹೀಗೆ ವರ್ಣಿಸಿದ್ದರು.Especially "ದೋಸ್ತಿ" ಅನ್ನೋ term ತುಂಬಾ ಇಷ್ಟವಾಯ್ತು :D

    ಊರಿನೊಂದಿಗೆ ನಿನಗಿದ್ದ ಅವಿನಾಭಾವ ಸಂಬಂಧ, ನಿಮ್ಮ ಊರಿನ ಪಯಣ, ನಿನ್ನ ಕ್ಯಾಮೆರ ಕಣ್ಣಲ್ಲಿ ಸೆರೆಹಿಡಿದ ಆ ಚಿತ್ರಗಳು ಎಲ್ಲವೂ ಆಪ್ತವೆನಿಸುತ್ತವೆ :-)

    ಶ್ರೀಕ್ಷೇತ್ರದ ಬಗ್ಗೆ, ಅದರ ಹಿಂದಿರುವ ಇತಿಹಾಸ, ಪೂರ್ವಾಪರಗಳ ಬಗ್ಗೆ ಅನನ್ಯ ಮಾಹಿತಿಯನ್ನೇ ಕೊಟ್ಟಿದ್ದಿಯ.

    ಮದೆಸ್ನಾನದ ಬಗ್ಗೆ ನಿನ್ನ ನಿಲುವು ಅತ್ಯಂತ ಸಮಂಜಸ.

    ಇಲ್ಲಿ ಬಲವಂತದ ಆಚರಣೆಗಳೇ ನಡೆಯುತ್ತಿಲ್ಲವೆಂದಮೇಲೆ, ನಮ್ಮ "ಸ್ವಯಂಘೋಷಿತ ಪ್ರಗತಿಪರರು, ಬುದ್ಧಿ{?}ಜೀವಿಗಳು, ಜಾತ್ಯಾತೀತರು" ಏಕೆ ಸುಮ್ನೆ ಇರುವೆ ಬಿಟ್ಕೊತಿದಾರೋ ನಾ ಕಾಣೆ :P

    ಸಲ್ಮಾನ್ ಖಾನ್ ಗೆ ಗಣಪತಿ ಪೂಜೆ ಮಾಡಬೇಡ, ಸಾನಿಯಾ ಮಿರ್ಜಾ ಗೆ ಸ್ಕರ್ಟ್ ಹಾಕಬೇಡ, ವಿಧವೆಯರು ಕುಂಕುಮ ಇಡಬೇಡ....... ಇತಾದಿ, ಇತ್ಯಾದಿ ದೌರ್ಜನ್ಯಗಳು ಸ್ವಾತಂತ್ರ್ಯ ಹರಣವೆನೆಸಿಕೊಳ್ಳುತ್ತವೆ. ಇವುಗಳ ವಿರುದ್ಧ ಧ್ವನಿಯೆತ್ತದ, ಈ ******** ಗಳು ಈ ಮದೆಸ್ನಾನದ ಹಿಂದೆ ಯಾಕೆ ದುಂಬಾಲು ಬಿದ್ದಿದ್ದಾರೋ....? :P

    ಅತ್ಯಂತ ಪರಿಣಾಮಕಾರಿಯಾಗಿ ನಿನ್ನ ನಿಲುವನ್ನ ಪ್ರಕಟಿಸಿದ್ದೀಯ. ನಿನ್ನೆಲ್ಲಾ ಅಭಿಪ್ರಾಯಗಳಿಗೂ ನನ್ನದೂ ಸಹಮತವಿದೆ.

    ಇಂಥಹ ಒಂದು ಬರಹವನ್ನ ಕೊಟ್ಟಿದ್ದಕ್ಕೆ ಮತ್ತೊಮ್ಮೆ ೫೪೭ ಥಾಂಕ್ಸ್. :D

    ನಿನ್ನ ಗೆಳೆಯ, ದೋಸ್ತ್ ಸುಬ್ಬಪ್ಪ ನಮ್ಮೆಲ್ಲರಿಗೂ ಒಳ್ಳೇದ್ ಮಾಡ್ಲಿ :D

    ReplyDelete
    Replies
    1. ಹೆಹೆಹೆಹೆಹೆ :D ಅರ್ಧಾ ಕಾಮೆಂಟ್ ಅಷ್ಟೇ ಹಾಕಿದೇನ್ ಲೇ :D

      ಇನ್ನರ್ಧಾ ಬ್ಯಾಲೆನ್ಸ್ ಐತಿ. but ಅದರ ಬಗ್ಗೆ ಮಾತಾಡಾಕ್ ನಂಗ್ interest ಇಲ್ಲ್ :/ :P {ಕತ್ತರಿ ಪ್ರಯೋಗದ ಬಗ್ಗೆ ಸೂಚಿಸಿದ ಭಾಗ :P }

      Delete
  3. ವೈಶು ,
    ಮಡೆಸ್ನಾನ ....ಹೀಗೊಂದು ಧಾರ್ಮಿಕ ನಂಬಿಕೆ....ತಪ್ಪೋ ಸರಿಯೋ ಈ ಬಗ್ಗೆ ನಾನು ಪ್ರತಿಕ್ರೀಯಿಸಲಿಚ್ಚಿಸುವುದಿಲ್ಲ....ಆದರೆ ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ಬಂದಾಗ ಸಂತೋಷಪಟ್ಟವನಲ್ಲಿ ನಾನು ಒಬ್ಬ....ಯಾಕೆ ಎಂಬುದು ನನಗೂ ಗೊತ್ತಿಲ್ಲ....ಇದರ ಪರವಾಗಿ, ವಿರುದ್ಧವಾಗಿ ತುಂಬಾ ಜನ ಮಾತಾಡಿದರು. ಎಲ್ಲರೂ ಅವರವರ ಜಾಗದಲ್ಲಿ ಸರಿ ಇದ್ದಾರೆ ಅನ್ನಿಸಿದ್ದು ನಿಜ.....ಆದರೂ ಎಷ್ಟೋ ಹಳೆಯ ಕಾಲದಿಂದ ನಡೆದುಬರುತ್ತಿರುವ ಈ ಸಂಪ್ರದಾಯಕ್ಕೆ ಯಾರೂ ಇಲ್ಲಿಯವರೆಗೆ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ..... ಉಂಡವರು ಶ್ರೇಷ್ಠ ರು , ಅವ್ರ ಎಂಜಲೆಲೆಯ ಮೇಲೆ ಸೇವೆಯೆಂದು ಉರುಲಾಡು ವವರು ಕನಿಷ್ಠ ರು ಎಂಬ ಭಾವನೆಗೆ ಈ ಸಂಪ್ರದಾಯ ಎಡೆ ಮಾಡಿ ಕೊಡುವುದು ನಿಜ....ಆದರೆ ಈ ಸೇವೆಯನ್ನು ಮಾಡುವ ಭಕ್ತರಿಗೆ ಯಾರೂ ಸಹ ನೀವು ಹೀಗೆ ಮಾಡಲೇಬೇಕು ಎಂದು ಬಲವಂತವಾಗಿ ದೂಡುವುದಿಲ್ಲ ವಲ್ಲ....ಅವರು ಸ್ವ-ಇಚ್ಛೆ ಯಿಂದ ಮಾಡುವುದಲ್ಲವೇ ??? ತಿಳಿದವರು, ವಿದ್ಯಾವಂತರು ಕೂಡ ಈ ಸೇವೆಯನ್ನು ಮಾಡುತಿದ್ದರಲ್ಲವೇ ????........ಆದರೆ ಸೇವೆಯ ಹೆಸರಲ್ಲಿ, ಮೇಲು-ಕೀಳು ಎಂಬ ಭಾವನೆಯನ್ನು ಯಾರು ಸಹ ಎತ್ತಿ ಹಿಡಿಯಬಾರದು..ಹಾಗೆಯೇ ತಿನ್ನುವ ಅನ್ನದ ಮೇಲೆ ಹೊರಳಾಡುವುದು ಕೂಡ ಒಂದು ಉತ್ತಮ ಸಂಪ್ರದಾಯ ಎನ್ನಿಸುವುದೇ ಎಂಬುದು ಸಹ ಯೋಚಿಸಬೇಕಾದ ವಿಷಯ.....ನಮ್ಮ ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಇಂತಹ ಅನೇಕ ಸಂಪ್ರದಾಯ ಗಳು ನಡೆದುಕೊಂಡು ಬಂದಿವೆ, ಈಗಲೂ ಬರುತ್ತಿವೆ...ಎಲ್ಲವನ್ನೂ ವಿರೋಧಿಸುವುದು ಸಮಂಜಸವೆನಿಸುವುದಿಲ್ಲ.....ಹಾಗೆಯೇ ಎಲ್ಲಾ ಸಂಪ್ರದಾಯಗಳು ಸರಿ ಎಂದು ಸಹ ನಾನು ವಾದಿಸುವುದಿಲ್ಲ..... ಅವರವರ ಭಾವಕ್ಕೆ ...ಅವರವರ ಭಕುತಿಗೆ........


    ಒಂದು ಸುಂದರ, ಉಪಯುಕ್ತ ಲೇಖನ....ನಿರೂಪಣೆ ಪ್ರಶಂಶಾರ್ಹ .... ಇಂತಹ ಸೊಗಸಾದ ಲೇಖನಗಳು ಹೆಚ್ಚ ಹೆಚ್ಚು ಮೂಡಿ ಬರಲಿ......ಅಭಿನಂದನೆಗಳು.....

    ReplyDelete
  4. ಉತ್ತಮ ಲೇಖನ ಅನುಮಾನವಿಲ್ಲ..ನಂಬಿಕೆ, ಶ್ರದ್ಧೆ, ಭಕ್ತಿ ಇದೆಲ್ಲ ಅವರವರ ವಿಚಾರಕ್ಕೆ ಬಿಟ್ಟದ್ದು...ರುಮ್ಮಿಗೆ ಸೋಡಾ ಹಾಕ ಬೇಕೇ...ಸೋದಕ್ಕೆ ರಮ್ಮು ಹಾಕಬೇಕೆ ಇದು ಸುಪ್ರೀಂ ಕೋರ್ಟ್ ನಿರ್ಧರಿಸುವುದು ಎಷ್ಟು ಸುಡುಗಾಡೋ..ಹಾಗೆ ಭಕ್ತರ ನಂಬಿಕೆಯ ಮೇಲೆ ಸವಾರಿ ಮಾಡುವುದು ಕೂಡ...ಬಿಳಿ ಅಂಗಿ ತೊಟ್ಟು...ಲಂಗೋಟಿಯಂತ ಒಂದು ಬಟ್ಟೆಯನ್ನು ಕಟ್ಟಿಕೊಂಡು..ನಾವು ಡಬ್ಬ ವಿಚಾರವಾದಿಗಳು ಅಂತ ಕುಡಿದು ಮರದ ಪಕ್ಕದಲ್ಲಿ ವಾಂತಿ ಮಾಡುವ ಈ ದರಿದ ವ್ಯಾಧಿ ಪುರುಷರಿಂದ ಈ ಸಮಾಜ ಗಬ್ಬೆದ್ದು ಹೋಗಿದೆ...ಇದನ್ನು ವೈಭವಿಕರಿಸಲು ಮಾಧ್ಯಮಗಳು...ಬೇಸರವಾಗುತ್ತದೆ..ಇವರು ಹೇಳುವುದು ಹೇಗಿದೆ ಎಂದರೆ.ನಮ್ಮ ಅಪ್ಪ ಅಮ್ಮನ ಕಾಲುಮುಟ್ಟಿ ನಮಸ್ಕರಿಸುವುದು ಸ್ಪರ್ಶವಾಗುತ್ತದೆ.ಎಂದು ಹೇಳುವರೀತಿ...ಯಾಕೋ ಮನಸು ಗಲೀಜಾಯ್ತು...ಸುಂದರ ಲೇಖನ..

    ReplyDelete
  5. ವೈಶಾಲಿಯವರೇ,
    ಬರಿಯ ಪತ್ರಿಕೆಗಳಲ್ಲಿ ಆಚರಣೆಯ ಬಗೆಗಿನ ವಿವಾದಗಳನ್ನಷ್ಟೇ ಓದಿದ್ದೆ...
    ಅದರ ಇತಿಹಾಸ ತಿಳಿಸಿ ಉಪಕಾರ ಮಾಡಿದಿರಿ..ಜೊತೆಗೊಂದಿಷ್ಟು ಹೊಸ ವಿಷಯಗಳೂ ಕೂಡಾ...
    ಒಳ್ಳೆಯ ಲೇಖನ..
    ಮುಂದುವರೆಯಲಿ ಬರಹ ಜಾತ್ರೆ :)
    ನಮಸ್ತೆ...

    ReplyDelete
  6. ಉತ್ತಮ ಮತ್ತು ವರ್ತಮಾನವನ್ನ ಅನುಸಂಧಿಸುವ ವೈಚಾರಿಕ ಪ್ರಯತ್ನ ...ತುಂಬಾ ಇಷ್ಟವಾಯಿತು ಶೈಲಿ ಮತ್ತು ನಿರೂಪಣೆ..
    ದೇವರನ್ನ ನಂಬಿಕೆಯಾಗಿಸಿಕೊಂಡಾಗ ಅವನ ಜೊತೆಗಿನ ಸಂಬಂಧಗಳನ್ನ ಹತ್ತಿರಕ್ಕೆಳೆದುಕೊಳ್ಳುವದು ಅಥವಾ ದೊಸ್ತಿ ಬೆಳೆಸುವದು
    ನಮ್ಮ ಬೌದ್ಧಿಕ ನಡವಳಿಕೆಯ ಒಂದು ಭಾಗವೇನೂ ಅಂತಾ ಭಾಸವಾಗುತ್ತೆ..
    ಹಾಗೂ ಅಂತಹ ನಡೆಯೇ ನಮ್ಮ ಮನಸ್ಸು -ಶರೀರವನ್ನ ದೇವರ ಆಪ್ತ ಬಳಗದವರಲ್ಲೊಬ್ಬ ನಾ ಎಂಬ ಸಂತೃಪ್ತಿ ಮತ್ತು ಅದರಾಚೆಗಿನ
    ಆನೂಹ್ಯ ಅನುಭೂತಿ ನಮ್ಮದಾಗಿಸಬಲ್ಲದು ....! ಆ ನಿಟ್ಟಿನಲ್ಲಿ ವೈಶಾಲಿ ಅವ್ರೆ ನೀವು ಬುದ್ದಿವಂತೆ ಮತ್ತು ಮುಗ್ದೇ..!
    ಭೂಮಿ ಮೇಲೆ ಈಶ್ವರವಾದ - ನಿರೀಶ್ವರವಾದ ಎರಡೂ ಪ್ರತಿಪಾದನೆಗಳು ಜೀವಂತವಾಗಿರುವವರೆಗೂ ,
    ಆಚರಣೆ ಮತ್ತು ಮೌಡ್ಯ ನಿರಂತರ ಸಂಘರ್ಷಕ್ಕೊಳಗಾಗುತ್ತಲೇ ಇರುತ್ತವೆ...
    ಭಾರತದ ಸನಾತನ ವೈದಿಕ ಪರಂಪರೆಯಲ್ಲಿ ಆಚರಣೆಗಳಿಗೆ ವಿಶೇಷಾರ್ಥವಿದೆ. ಅವುಗಳಲ್ಲಿ ಮುಕ್ತಿಯನ್ನ ಸನ್ಮಾರ್ಗವನ್ನ ಕೊಡುವ ಶಕ್ತಿಯಿದೆ ..
    ಅದೇನೇ ಆಗಿರಲಿ ಒಂದು ಸಮುದಾಯಕ್ಕೆ ಅಥವಾ ವ್ಯಕ್ತಿಗೆ ನೋವುಂಟು ಮಾಡದ ಆಚರಣೆಗೆ ಪ್ರಚೋದಿಸುವದರಲ್ಲಿ ಅಂತಹ ತಪ್ಪೇನೂ ಇಲ್ಲ ಅನ್ನುವಾದು ನನ್ನ ಅನಿಸಿಕೆ....
    ವೈಶಾಲಿ ಅವ್ರೆ ನಿಮ್ಮ ಪ್ರಭುದ್ಧ ವಿಚಾರ ಲಹರಿ ಹೀಗೆ ಹರಿಯುತ್ತಿರಲಿ..
    ಅಭಿನಂದನೆಗಳು..

    ReplyDelete
  7. ವೆಲ್ ಅವತ್ತು ನನ್ ಹತ್ರ ಫೋನ್ ನಲ್ಲಿ ನೀನು ಇದನ್ನೆಲ್ಲಾ ಹೇಳಿದ್ದಕ್ಕಿಂತ ಶಕ್ತವಾಗಿ ಬರವಣಿಗೆಯಲ್ಲಿ ಮಂಡಿಸಿದ್ದೀಯ.
    ಒಂದು ಅಚಾರ.. ಒಂದು ಅನುಕರಣೆ.. ಒಂದು ಸಂಪ್ರದಾಯ ಅನ್ನೋ ಹೆಸರಿನಲ್ಲಿ ನಡೆಯುವ ಅದೆಷ್ಟೋ ದೌರ್ಜನ್ಯ ಅಥವಾ ಅಮಾನವೀಯ ಕೃತ್ಯಗಳ ಹಾಗೆ ಇದೂ ಕೂಡ ಒಂದಿರಬಹುದೋ ಎನಿಸುವಂತೆ ಭಾಸವಾಗುತ್ತದೆ. ಇದ್ದರೂ ಇರಬಹುದು ಅದನ್ನ ಅಲ್ಲಗಳಿಯುವಂತಿಲ್ಲ.
    ನಾವಿಬ್ಬರು ಅಂದು ಚರ್ಚೆ ಮಾಡಿದಂತೆ ಅನೇಕ ವಿಚಾರಗಳು ಇಲ್ಲಿ ಸತ್ಯವಿರಬಹುದು.. ಆದರೆ ಅದೆಲ್ಲದರ ಮಂಡನೆಗೆ ಇದು ಸೂಕ್ತ ಸ್ಥಳವಲ್ಲ.. ಏಕೆಂದರೆ ಇದೂ ಕೂಡ ಮಾಧ್ಯಮದ ಒಂದು ರೂಪ. ಇಲ್ಲಿ ನಾವೊಂದು ಹೇಳೋದು ಅದರರ್ಥ ಇನ್ನೊಂದಾಗಿ ಗೋಚರಿಸಿ ಮತ್ತೊಂದು ಆಗೋದು ಎಲ್ಲವೂ ಸಾಧ್ಯ.

    ನಮ್ಮ ಹಿರಿಯರು ನಮಗೊಂದು ಚಿಕ್ಕ ಪರಿಪಾಠ ಹೇಳಿ ಕೊಟ್ಟಿದ್ದರು.. ಉಂಡಾದ ನಂತರ.. ಊಟ ಮಾಡಿದ ಕೈ ತೊಳೆದ ನಂತರ ಅದರಿಂದ ಮುಖ ಒರೆಸಿಕೊಳ್ಳೋದು.. ಯಾಕೆಂದರೆ ನಮ್ಮ ಊಟದಲ್ಲಿರಬಹುದಾದ ಅನೇಕ ಜೀವಸತ್ವಗಳು.. ಲವಣಗಳು.. ಮಸಾಲೆ ಪದಾರ್ಥಗಳ ಅಂಶಗಳು ನಮ್ಮ ಮುಖದ ಚರ್ಮದ ಮೇಲೆ ಪ್ರತಿಕ್ರಯಿಸಿ ಮೊಡವೆ ಅಥವಾ ಇತರೆ ಚರ್ಮ ರೋಗಗಳಿಂದ ನಮ್ಮನ್ನು ಸಾಧ್ಯವಾದಷ್ಟು ಮುಕ್ತವಾಗಿಸುತ್ತದೆ ಅನ್ನೋ ನೀತಿ ಅದರೊಳಗಿನ ಹೂರಣ. ಅದೆಷ್ಟು ನಿಜವೋ ನನಗೀಗಲೂ ಗೊತ್ತಿಲ್ಲ. ಆದರೂ ಈಗಲೂ ಕೆಲವೊಮ್ಮೆ ನಾನು ಉಂಡಾದ ನಂತರ ಹಾಗೆ ತೊಳೆದ ಕೈ ಯಲ್ಲಿ ಮುಖ ಒರೆಸಿ ಕೊಳ್ಳುವ ಪರಿಪಾಟ ಆಗಾಗ ಮಾಡುತ್ತಿರುತ್ತೇನೆ. ನಮ್ಮ ಕಡೆ ಬಹಳ ಜನ ಈಗಲೂ ಮಾಡುತ್ತಾರೆ. ಅಂತಹ ನಂಬಿಕೆಯೇ ಈ ಮಡೆಸ್ನಾನದ ರೂಪ ತಳೆದು.. ನಂತರ ರೂಪಾಂತರಗೊಂಡು ಇಂಥಾ ಒಂದು ಆಚರಣೆಯಾಗಿ ಬದಲಾಗಿರಬಹುದಾದ ಸಾಧ್ಯತೆಗಳಿರಬಹುದು.

    ಆದರೆ ತೀರಾ ಅಂಥಾ ಒಂದು ನಂಬಿಕೆ ಇಂಥಾ ಒಂದು ಆಚರಣೆಯಾದುದರ ಬಗೆಗೆ ನನಗೆ ಖೇದವಿದೆ. ಇದರ ಬಗ್ಗೆ ನಾನಷ್ಟು ಹೇಳಲು ಹೋಗೋದಿಲ್ಲ.. ಒಟ್ಟಾರೆ ನನಗೆ ಈ ಪದ್ದತಿಯಲ್ಲಿ ಸವಲ್ಪವೂ ಸಮಾಧಾನ ಕೊಡುವ ಅಂಶಗಳು ಗೋಚರಿಸುತ್ತಿಲ್ಲ. ಎತ್ತಿ ತೋರಲು ಬಹಳ ಹುಳುಕುಗಳಿವೆ.. ಅದಿರಲಿ ಬಿಡು.

    ಬರಹದ ವಿಚಾರಕ್ಕೆ ಬರುವುದಾದರೆ.. ತುಂಬಾ ಸೂಕ್ಷ್ಮ ವಿಚಾರಗಳನ್ನ ಅಷ್ಟೇ ಪರಿಣಾಮಕಾರಿಯಾಗಿ ಯಾರಿಗಾದರು ಸತ್ಯಾಸತ್ಯತೆಗಳ ಅರಿವಾಗುವಂತೆ ತಿಳಿಸಿದ್ದೀಯ. ನಿನ್ನ ಮೇಲೆ ರಾಜಾರೋಷವಾಗಿ ಹೊಟ್ಟೆ ಕಿಚ್ಚು ಪಡೋಕೆ ಈ ಬರಹ ಮತ್ತೊಂದು ಕಾರಣವಾಯ್ತು. ಒಂದು ವಸ್ತು ಸ್ಥಿಥಿಯೊಂದರ ಅದ್ಭುತ ನಿರೂಪಣೆ. ಬರ್ತಾ ಬರ್ತಾ ನಿನ್ ಬರವಣಿಗೆಯ ಧಾಟಿ ಮತ್ತು ಅದರೊಳಗಿನ ವಿಚಾರ ಮಂಡನ ಶಕ್ತಿ ನಿನ್ನಲ್ಲಿ ಬಲವಾಗ್ತಾ ಇರೋದಂತೂ ನಿಜ..

    ದೇವರನ್ನು ಗೆಳೆಯನ ಹಾಗೆ ನೋಡುವ ನಿನ್ನ ನೋಟ.. ನನ್ನೊಳಗೂ ಉಂಟು. ಆದರೆ ಅಪರೂಪಕ್ಕೆ ಮಾತ್ರ.. ಮತ್ತದು ಕೊಡುವ ಅನುಭೂತಿಯೇ ಬೇರೆ. ಯಾಕಂದ್ರೆ ಗೆಳೆಯರ ಬಾಲಿ ಹಂಚಿಕೊಂಡಷ್ಟು ಮುಕ್ತವಾಗಿ ನಾವು ದೇವರ ಬಳಿಯೂ ಹಂಚಿಕೊಳ್ಳೋಕೆ ಸಾಧವಿಲ್ಲ. ಆದ್ದರಿಂದ ದೇವರನ್ನೇ ಗೆಳೆಯನನ್ನಾಗಿ ಮಾಡಿಕೊಳ್ಳೋದು ಒಂದು ಉತ್ತಮ ಪ್ರಯತ್ನ. ನಮ್ಮ ಸಮಸ್ಯೆಗೆ ದೇವರ ಪ್ರತಿಫಲ ಏನಾದರೂ ಇರಬಹುದು.. ಆದರೆ ನಮ್ಮ ಭಾರವನ್ನ ದೇವರೆಮ್ಬುವ ಗೆಳೆಯನ ಜೊತೆ ಹಂಚಿಕೊಂದದ್ದರ ಪರಿಣಾಮವಾಗಿ ಎಷ್ಟೋ ಬಾರಿ ಸಮಾಧಾನವಾಗುವುದುಂಟು.

    ಇಂಥಾ ಪ್ರಬುದ್ಧ ಬರಹಗಳು ಇನ್ನು ಹೆಚ್ಚೆಚ್ಚು ಬರಲಿ.. ಮತ್ತು ನಿರಂತರವಾಗಿರಲಿ. ಅಂದ ಹಾಗೆ ದೊಡ್ಡಪ್ಪ ರಾಘನಿಗೊಂದು ಹೆಚ್ಚುವರಿ ಸೇರಿ ೫೪೮ ಥ್ಯಾಂಕ್ಸ್ಗಳು.. ಕಾರಣ ಹೇಳೋ ಅವಶ್ಯಕತೆ ಇಲ್ಲ ಅನ್ಕೊತೇನೆ.. ;) ;)

    ReplyDelete
  8. ಸನ್ನಡತೆ ಇರೆ ಎಲ್ಲ
    ಮಡೆ ಸ್ನಾನವೂ ಸರಿ
    ಇಲ್ಲದಿರೆ ಎಲ್ಲದರಲ್ಲೂ ಚಿರಿ ಪಿರಿ
    ನಿಮ್ಮ ಭಾಷೆ ತುಂಬಾ ಚೆನ್ನಾಗಿದೆ.

    ReplyDelete