Sunday, December 9, 2012

ಚುಚ್ಚದ ಮುಳ್ಳು...ಗುಲಾಬಿ ಕಣ್ಣಿನ ಹುಡುಗಿ

ಚಿತ್ರಕೃಪೆ  : ಅಂತರ್ಜಾಲ 
ಆಗ  ಸಂಜೆ ಆರು.ಮನೆ ತಲುಪುವ ಕಾತುರದಲ್ಲಿ ಆಟೋ ಇಳಿದವಳೇ ಆತುರ ಆತುರವಾಗಿ ಬಸ್ ನಿಲ್ದಾಣದತ್ತ ಬಿರುಸಿನ ಹೆಜ್ಜೆ ಹಾಕಿದೆ.
ಮನಸು ಹಗುರವಾದರೆ  ಮೈಯ್ಯು ಹಗುರವೆಂಬಂತೆ  ಒಳಗೆ ಗುನಗುನಿಸುತ್ತಿದ ಜೀವದ ಅರಿವಿನ ಹರಿವು ಹೊರಗಿನ ವಾತಾವರಣದೊಂದಿಗೆ ಹದವಾಗಿ ಬೆರೆತು,ತುಂತುರು ಗಾಳಿ ಮಳೆಯಲ್ಲಿ ಚಲಿಸುತ್ತಿದ್ದ ನನ್ನ ಹೆಜ್ಜೆಯ ಬಡಿತದೊಂದಿಗೆ  ಬೀಸುತ್ತಿದ್ದ  ಕೈಗಳ ತಾಳ ಸಮ್ಮಿಳಿತವಾಗಿ  ರಾಗ ಶುರುವಚ್ಚಿಕೊಂಡಿದ್ದವು..ಅದೇ ಹುರುಪು ಕಾದುಕೊಂಡು ನಿಲ್ದಾಣ ಮುಟ್ಟುವಷ್ಟರಲ್ಲಿ ಆವರಿಸಿದ ಗಾಢ ಕಪ್ಪು ಮೋಡದ ಚಪ್ಪರದಿಂದಾಗಿ ನೋಡ ನೋಡುತ್ತಿದ್ದಂಗೆ ಅಲ್ಲೊಂದು ಕತ್ತಲ ಸಾಮ್ರಾಜ್ಯ ಉದಯಿಸಿತ್ತು.ಅದರೊಂದಿಗೆ ಸಣ್ಣ ಭಯವು ಕೂಡ.ಯಾಕಂದರೆ ಒಬ್ಬಳೇ ಹೀಗೆ ಯಾರಿಗೂ ಹೇಳದೆ ಇಷ್ಟು ದೂರ ಯಾವತ್ತು ಪ್ರಯಾಣಿಸಿದ್ದಿಲ್ಲ.

ಎಂದೂ ಮಾಡದ್ದನ್ನ  ಮಾಡಿಸಿಬಿಡುವ ಈ ಹಾಳು ಸಂದರ್ಭಗಳು ಅಚ್ಚಾನಕ್ಕಾಗಿ ಸೃಷ್ಟಿಸುವ ಅನಿವಾರ್ಯತೆಗಳು ಸಮಯ ಸಾಧಕಗಳೇ  ಸೈ.ಅದ್ಯಾವ ನಮೂನೇ ಹೊಂಚು ಹಾಕಿ ಗೆರೆ ದಾಟಲು ಉತ್ತೇಜಿಸುತ್ತಾವೆ.ನಂತರ ನಡೆಯುವುದ್ದೆಲ್ಲಾವು  ನಮ್ಮ ಕೈ ಮೀರಿದ್ದು.ಕಾಲದ ಹಿಡಿತಕ್ಕೆ ಸಿಲುಕಿದ  ಅನೂಹ್ಯ ಗಳಿಗೆಯಲ್ಲಿ ಮರು ಮರಳದಂತೆ ಎಂದಿಗೂ ಅಳಿಸಲಾಗದಂತೆ ಲೀನವಾಗುವಂತವು.

ಅಂದಿನಂತೆ ,ಇಂದಿನನಂತೆ.

ಆದರೆ ಇಂದಿನ ಮಟ್ಟಿಗೆ ಅಂತದೊಂದು ಸಂದರ್ಭ  ಅನಾಹುತದಲ್ಲಿ ಕೊನೆಗಾನಲ್ಲಿಲ್ಲವಷ್ಟೇ.ಈ ದಿನಕ್ಕಾಗೆ ಅಲ್ಲವೇ ವರುಷಗಳಿಂದ ಕಾದಿದ್ದು ನಾನು? ಅದಕ್ಕಾಗೆ ಅಲ್ಲವೇ ಯಾರಿಗೂ ತಿಳಿಸದೇ ಹೊರಟಿ ಇಷ್ಟು ದೂರ ಬರಬೇಕಾದದ್ದು? ತಿಳಿಸದಂತಹ ಗುಟ್ಟಿನ ವಿಷಯವೇನು ಇರಲಿಲ್ಲ.ಅವಳ ಬಗ್ಗೆ  ತಿಳಿದ ಕೂಡಲೇ ಹೊರಡುವ ಅವಸರದಲ್ಲಿ ಎಲ್ಲವ ಮರೆತ್ತಿದ್ದೆನಷ್ಟೇ.ಇಂದು ಅವಳ ನೋಡದ್ದಿದ್ದರೆ  ಮತ್ತೆ ಆ ಅವಕಾಶ ಎಂದೋ.ಅಷ್ಟರಲ್ಲಿ ಒಳಗಿನ ಉರಿ ನನ್ನನೇ ಬೂದಿ ಮಾಡಿ ಮುಗಿಸುತ್ತಿತ್ತೇನೋ.

ಸುಮಾರು ಹೊತ್ತು ಕಾದರೂ  ಒಂದು ಬಸ್ಸು ಬರದೆ ಹೋದ್ದದ್ದು ಮನಸ್ಥಿತಿಯನ್ನು ಕಂಗೆಡೆಸಿತು.ಹೀಗೆ ಕತ್ತಲಲ್ಲಿ ಕಾಯುವ ಪರಿಸ್ಥಿತಿ ನನ್ನ ಮಟ್ಟಿಗೆ ಹೊಸತೆ.ಹೊಸ ಸಮಸ್ಯೆಗಳ ಉದ್ಭವ  ಅಂದರೆ  ಹಳೆ ನಿರ್ಲಕ್ಷಿಸಿದ ಸಲಹೆಗಳಿಗೆ ಪುನರುತ್ಥಾನ.ಅದರ ಹುಟ್ಟು,ಇದಕ್ಕೆ  ಉಸಿರು....

ಛೆ! ನೆಟ್ಟಗೆ  ಗಾಡಿ ಓಡಿಸೋದ ಕಲ್ತಿದ್ರೆ  ಇಲ್ಲಿ ಹೀಗೆ ಕಾಯಬೇಕಾಗಿರಲಿಲ್ಲ!

ಮನೆಯಲ್ಲಿ ಗಾಡಿಯ ವಿಚಾರ ಬಂದಾಗಲೆಲ್ಲ, "ಟೂ ವೀಲರ್ ಬ್ಯಾಲೆನ್ಸಿಂಗ್ ಬರುತ್ತೆ,ಫೋರ್ ವೀಲರ್ ಸ್ಟೀರಿಂಗ್ ಕಂಟ್ರೋಲ್ ಸಹ ಇದೆ.ಟ್ರಾಫಿಕ್ ರೂಲ್ಸ್ ಬಗ್ಗೆ  ಚಾಚು ತಪ್ಪದೆ ಅರಿವಿದೆ.ಮೂರು ತಿಂಗಳು ಡ್ರೈವಿಂಗ್ ಕ್ಲಾಸಿಗೆ ಹೋಗಿ ಲೈಸೆನ್ಸ್ ಸಹ ಪಡೆದ್ದಿದ್ದಾಯಿತಲ್ಲ  ಇನ್ನೇನು?" ಅನ್ನೋ ಬಿಗುಮಾನದ ಮಾತುಗಳಾಡುತ್ತಿದ್ದೆ .

 " ಲೈಸೆನ್ಸ್ ಇದ್ದರೆ ಸಾಕಾಗೋಲ್ಲ ಮಗಳೇ.....  ಗಾಡಿ ಮೇನ್ ರೋಡಿಗೆ   ಇಳಿಸಲು ಕಲಿಯಬೇಕು ಮೊದಲು.ಲೈಸೆನ್ಸ್ ಇಲ್ಲದಿದ್ದರೂ ಗಾಡಿ ಓಡಿಸಬಹುದು.ಆದರೆ ಗಾಡಿ ಓಡಿಸದವರ ಬಳಿ ಲೈಸೆನ್ಸ್ ಇದ್ದರೆಷ್ಟು  ಬಿಟ್ಟರೆಷ್ಟು..." ಎಂಬ  ಅಪ್ಪನ ಕಿವಿ ಮಾತಿಗೂ,

 " ಗಾಡಿ ಮೇನ್ ರೋಡ್ ನಲ್ಲಿ ಓಡಿಸೋದ ಕಲಿತರೆ ಸಾಕಾಗದು ಅವೆನ್ಯೂ ರಸ್ತೆಯಂತ ಜನನಿಬಿಡ ಚಿಕ್ಕ ಜಾಗದಲ್ಲಿ  ಪಾರ್ಕ್ ಮಾಡೋದು  ಕರಗತವಾಗಬೇಕು.ಶಿವಾಜಿನಗರಂತಹ ಇಕ್ಕಟಿನ  ಸಂದಿ ಗೊಂದಿಯಾ ಗಲ್ಲಿಗಳಲ್ಲಿ ಚಲಾಯಿಸಿದ ಅನುಭವವಿರಬೇಕು"  ಅನ್ನೋ ಅಣ್ಣನ  ಮಾತುಗಳಿಗೂ  ರೂಪ ಬಂದು  ಉಸಿರಾಡುತ್ತಿದ್ದಾವೆ ಅನಿಸಿತು.

ನಾನು ಹೇಳಿದ್ದು  ನಗಣ್ಯವಲ್ಲದಿದ್ದರು ಅಷ್ಟೇನೂ ಮುಖ್ಯಪಾತ್ರ ವಯಿಸುವಂತವಲ್ಲ ಎಂದು ನನಗೂ  ಗೊತ್ತಿತ್ತು ಅದಕ್ಕೆ ಅವರೊಂದಿಗೆ  ವಾದ ಮುಂದುವರಿಸುತ್ತಿರಲಿಲ್ಲ .

ಎಷ್ಟಾದರೂ ನನ್ನ ಒಳತಿರುಳ ಬಲ್ಲವಳ್ಳಲವೇ ನಾನು? ಗುಡಿಸಿ ಸಾರಿಸೋದ ಕಲಿತವಳು,ರಂಗೋಲಿ ಹಾಕೋದ ಮರೆತವಳು!ಪರಿಶ್ರಮ ಪರಿಣಿತಿ ಎಷ್ಟಿದ್ದರೇನು ಮನೆ ಅಂಗಳ ಬೋಳು ಬೋಳೆ...


ಅಸಲಿಗೆ ಗಾಡಿಗೂ ಜೀವನದ ಬಂಡಿಗೂ ಇರುವ ಸಾಮ್ಯತೆ ಕಂಡು ಬೆಚ್ಚುತ್ತಿದ್ದೆ.ಅಪ್ಪನ ಮಾತಿನಲ್ಲೂ ಅಣ್ಣನ ಮಾತಿನಲ್ಲೂ ಅವೇ ಸಾಮತ್ಯೆ  ಮೇಲೈಸಿದ್ದಂತೆ ಯಾವುದೊ ಪಾಠ ಬೋಧಿಸುತ್ತಿರುವಂತೆ  ಭಾಸವಾಗುತಿತ್ತು!! ಅದಲ್ಲದೆ  ಎರಡರ ಡ್ರೈವಿಂಗ್ ಮಾಡಲು ಪ್ರಮುಖವಾಗಿ ಬೇಕಾಗೋದು ಆತ್ಮ ವಿಶ್ವಾಸ  ಗುಂಡಿಗೆ  ಮುನ್ನುಗ್ಗುವ ಪ್ರವೃತ್ತಿ ಎಂಬ ಸತ್ಯದಿಂದ ದೂರ ಸರಿಯುತ್ತಿದದ್ದು ಅದು ನನ್ನಲ್ಲಿ ಕಡಿಮೆ ಇದಿದ್ದರ ಪರಿಣಾಮದಿಂದಷ್ಟೇ! ಮನಸು ವ್ಯಾಕುಲ ಗೊಂಡಿತು... ಬ್ಯಾಗಿನಲ್ಲಿ ಹೂತು ಹೋಗಿದ್ದ ಡೈರಿಯನ್ನ ಹೊರ ತೆಗೆಯದೆ  ಮೇಲಿಂದಲೇ ಸ್ಪರ್ಶಿಸಿದೆ ಹಿಂದಿನಂತೆ ಕೈ ನಡುಗಳಿಲ್ಲ.ಕತ್ತಲೆಯ ಭಯವು  ಇಳಿಮುಖವಾಯಿತು .

ಓಹ್! ಇಷ್ಟು ದಿನ ಕತ್ತಲನ್ನೇ ಕಾವಲು ಕಾದು ಕುಳಿತವಳಿಗೆ ಈ ಸ್ವಲ್ಪ ಸಮಯದ ಒಬ್ಬಂಟಿ ಜಗತ್ತಿನ ಕತ್ತಲು ಯಾವ ಲೆಕ್ಕದ್ದು? ಕತ್ತಲೆಯೇ ಕತ್ತಲನ್ನ ಹೊರಗಟಿದ್ದ ಈಗಷ್ಟೆ ನೋಡಿ ಬಂದವಳಲ್ಲವೇ ನಾನು? ಇನ್ನು ಮುಂದೆ ಅಂತ ಕತ್ತಲೆ ನನ್ನ  ನೆರಳು  ಸೋಕಳು ಹೆದರ ಬೇಕು ಅಷ್ಟೊಂದು ಬೆಳಕನ್ನು  ತನ್ನ ಅಂತರ್ಯ ಬಗೆ ಬಗೆದು ತುಂಬಿಸಿ ಕಳಿಸಿದ್ದಾಳೆ "ಪೂರ್ಣಿಮಾ".

ದೂರದ ಊರಿನ  ಬಸ್ ನಿಲ್ದಾಣದಲ್ಲಿ  ಬೆಂಗಳೊರಿನ  ಬಸ್ಸಿಗಾಗಿ  ಕಾಯುತ್ತಿದ್ದವಳಿಗೆ   ಹಿಡಿದ ಜಡಿ ಮಳೆ ಹೀಗೆ ಏನೇನೋ ನೆನಪು ತರಿಸುತ್ತಿವೆ.

*
ಮಳೆಗಾಲದ ಮುಂಜಾವು ಶಾಲೆಗೆ ಹೋಗಲು ಅಣಿಯಾಗುವ ಮೊದಲು ಒಮ್ಮೆ ಮಳೆ ನೀರಲ್ಲಿ  ಆಡಿ ದೋಣಿ ತೇಲಿಸುವ ಅಭ್ಯಾಸವಿತ್ತು.ಅಂದು ಅಡುಗೆ ಮನೆಯಲ್ಲಿ ಚಾ ಮಾಡುತಿದ್ದ ಅಮ್ಮನ ಕಣ್ ತಪ್ಪಿಸಿ ರಾತ್ರಿ ಮಾಡಿಟ್ಟಿದ್ದ ಕಾಗದದ ದೋಣಿ  ಹಿಡಿದವಳೇ ಮನೆಯ ಗೇಟಿನ ಬಳಿ ಹೋದೆ.ಪ್ರಕೃತಿ ಆಗಷ್ಟೇ ಪವಿತ್ರ  ತೀರ್ಥ ಸ್ನಾನ ಮುಗಿಸಿಕೊಂಡಂತೆ  ಶುಭ್ರ ಚೆಲುವೊಂದಿಗೆ  ಕಂಗೊಳಿಸುತ್ತಿತ್ತು.ರಸ್ತೆಯ ಬದಿಯೇ  ಹರಿದು ಹೋಗುತ್ತಿದ್ದ ಕೆಂಪು ನೀರಿನಲ್ಲಿ ಇನ್ನೇನೂ ಕೈಲಿದ್ದ ದೋಣಿ ಬಿಡಬೇಕೆನ್ನುವಷ್ಟರಲ್ಲಿ ಅಮ್ಮ ಕಿಟಕಿಯಿಂದಲೇ "ಶಾಲೆಯ ಕೊನೆ ದಿನ.ಸೆಂಡ್ ಆಫ್ ಪಾರ್ಟಿಗೆ ಸೀರೆ ಉಟ್ಟು  ಹೋಗಬೇಕಾದವಳು,ಮುಂದೇ  ಕಾಲೇಜ್ ಮೆಟ್ಟಿಲು ಹತ್ತೊಳು ಹೀಗೆ ಎದ್ದವಳೇ ಮಕ್ಕಳಾಟಿಕೆ ಮಾಡ್ಕೊಂಡು ಕೂತಿದ್ಯಲ್ಲ ನಿನಗೆ ಬುದ್ಧಿ ಬೆಳೆದಿದೆ ಅನ್ನೋಕಾಗುತ್ತ?" ಎಂದು ಗದರಿದಳು.ಅದು ಕೇಳಿಸಿದರು ಅರ್ಥವಾಗದಂತೆ  ಅಮ್ಮನೆಡೆ  ಒಮ್ಮೆ ನೋಡಿ ನಕ್ಕು ದೋಣಿಯತ್ತ  ಗಮನ ಹರಿಬಿಟ್ಟೆ.ಅಯ್ಯೋ ಗಡಿಬಿಡಿಯಲ್ಲಿ ಕೈ ಜಾರಿದ ನನ್ನ ದೋಣಿ...ನೀರಿನಲ್ಲಿ ಮುಕ್ಕರಿಸಿ ಪೂರ್ತಿ ಒದ್ದೆಯ ಮುದ್ದೆಯಾಗಿತ್ತು.

ಅಷ್ಟರಲ್ಲೇ ಡ್ರಂಕ್ ಡ್ರಂಕ್ ಎಂಬ ಕೂಗು..ಬಾಡಿದ ಮನಸು ಹಿತಗೊಂಡಿತು.

ಅಲಿಂದ ಹೊರಟವಳೇ ಹಿತ್ತಲಿನ ಪುಟ್ಟ ತೊಟ್ಟಿಯಲ್ಲಿ ನನಗಾಗೆ ಕಾಯುತ್ತಿತ್ತೆಂದು ಭಾವಿಸಿ,ಮುದ್ದುಗರೆದು,ನನ್ನ  ಕಪ್ಪೆಯನ್ನು ಹಸ್ತದ ಮೇಲೆ ಇರಿಸಿಕೊಂಡೆ.ಅದು ಕೂಡ ಗುರುತು ಹಿಡಿದಂತೆ  ಹಪ್ ಎಂದು ಎರಡು ಬಾರಿ ನಿಂತಲ್ಲೇ  ಎಗುರಿತು.ಈ ಕಪ್ಪೆಯ ಹುಚ್ಚು ಹತ್ತಿಸಿದ್ದು ಅಜ್ಜಿ ಮತ್ತವಳ ಕಥೆ.ಆ ದಿನಗಳಲ್ಲಿ ನಾವು ಮಕ್ಕಳೆಲ್ಲ ಸೇರಿ ಅಜ್ಜಿಗೆ ಕತೆ ಹೇಳುವಂತೆ ದಿನ ರಚ್ಚೆ ಹಿಡಿಯುತ್ತಿದ್ದೆವು.ಪಾಪಾ ಅಜ್ಜಿ ಅತ್ಯುತ್ಸಾಹದಿಂದಲೇ ಜಾನಪದ ಕತೆ,ನೀತಿ ಕತೆ,ತನ್ನ ಹುಟ್ಟೂರಿನ ಕಥೆ,ತಾನು ಮೆಟ್ಟಿದೂರಿನ ಕಥೆ,ತರಂಗದಲ್ಲಿನ  ಕತೆ,ದಿನಪತ್ರಿಕೆಯಿಂದ ಆಯ್ದ ಕತೆ ಹೀಗೆ ಒಂದೇ ಎರಡೇ  ಬಗೆ ಬಗೆಯದ್ದು... ನಮಾಗಾಗಿ ಕೆಲವನ್ನು ನೆನಪಿಂದ ಕೆದಕಿ ಇನ್ನು ಕೆಲವಷ್ಟನ್ನ ಪುಸ್ತಕಗಳಿಂದ ಹೆರಕಿ ಹೇಳುತಿದ್ದಳು.

ಅವುಗಳ್ಳಲ್ಲಿ ಒಂದು ಕತೆ ಹೀಗಿತ್ತು, ಹುಡುಗಿಯೊಬ್ಬಳು ಕಪ್ಪೆ ಸ್ನೇಹ ಮಾಡುತ್ತಾಳೆ  ನಂತರ ಅದು ರಾಜಕುಮಾರನಾಗಿ ರೂಪಾಂತರಗೊಂಡು ಕೊನೆಗೆ ಅವರಿಬ್ಬರ ಮದುವೆ..ಅದೇ ಕಪ್ಪೆ ರಾಜಕುಮಾರನ ಕಥೆ..ನನ್ನ ಮತ್ತು ನನ್ನ ಕಪ್ಪೆಯಾ ಸ್ನೇಹಕ್ಕೆ ಮುನ್ನುಡಿ ಬರೆದ ಕಥೆ,ಅಂತ್ಯ ಹಾಡಿದ ಕಥೆ.ಆದರೆ ಅಲ್ಲೊಂದು ಮಜವಿತ್ತು.ನನಗೆ ನಿಜಕ್ಕೂ ಕಪ್ಪೆಯಲ್ಲಿ ಸ್ನೇಹ ಅದಮ್ಯ ಪ್ರೀತಿ ಅಂಕುರಿಸಿದ್ದು  ಕಥೆ ಕೇಳಿಯಲ್ಲ,ಬದಲಿಗೆ  ಅದರಲ್ಲಿನ ಕಪ್ಪೆನಾ ಬೇರೆಯಾರು  ಇಷ್ಟ ಪಡಲಿಲ್ಲವೆಂದು! ನಾಯಿ ಬೆಕ್ಕು ಅಚ್ಚಿಕೊಂಡಿದ್ದ  ಉಳಿದವರಿಗೆ  ಅಜ್ಜಿ ಹೇಳಿದ ವಕ್ರ ಮುಖದ  ಕಪ್ಪೆಯ ಬಗ್ಗೆ ಅಸ್ಸಯ್ಯ ತಾತ್ಸಾರ ಭಾವ.ಎಲ್ಲರೂ  ತೊರೆದಿರುವ ಯಾರಿಗೂ ಬೇಡವಾಗಿರುವದನ್ನ ಅಪ್ತವಾಗಿಸಿಕೊಳ್ಳೋದು ಮೊದಲಿನಿಂದಲೂ ನನಗಂಟಿಕೊಂಡ  ಬುದ್ಧಿ  ಆಗಿತಲ್ಲಾ?? ಹಾಗಾಗಿ ಈ ಕಪ್ಪೆಯೊಂದಿಗಿನ ಸಂಭಂದವು ಬೆಸೆಯಿತು.

ಹಾಗಂತ  ಇದು ಸುಲುಭದ ಸ್ನೇಹವಾಗಿರಲಿಲ್ಲ.ಅದು ಜಿಗಿದಲ್ಲೆಲ್ಲ ನಾನು ಅದರಿಂದಿಂದೆ ಓಡಾಬೇಕಿತ್ತು.ಯಾವ ಹೊತ್ತು ಹಿತ್ತಲ ಯಾವ ಮೂಲೆಯಲ್ಲಿ ಇರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ...ಎಲ್ಲೆಡೆ ತಡಕಾಡಿದರು ಸಿಗುತಿರಲಿಲ್ಲ. ಹಾಗಾಗೆ ಕೆಲವೊಮ್ಮೆ ಅದನ್ನ ಬ್ಯಾಗ್ನಲ್ಲಿ ಇಟ್ಕೊಂಡು ಶಾಲೆಗೆ ಹೋಗೊ ರೂಡಿಯಿತ್ತು.ಆ ದಿನವು ಆಗಿದ್ದು ಅದೇ.ಸೀರೆ ಉಟ್ಟು ಶಾಲೆಗೆ  ಹೊರಡುವ ಸಂಭ್ರಮದಲ್ಲಿ ಮರೆಯಬಹುದೆಂದು ಬೆಳಗೆ ಎದ್ದವಳೇ  ನನ್ನ ಕಪ್ಪೆನ ಬ್ಯಾಗೊಳಗೆ ಹಾಕಿಕೊಂಡಿದ್ದೆ.ಮೊದಲೇ ದೋಣಿ ಕಪ್ಪೆ ಅಂತ ಸಮಯ ಕಳೆದಿದ್ದರಿಂದ ಗಡಿಬಿಡಿಯಲ್ಲೇ  ತಯ್ಯಾರಾಗಿ ಮನೆ ಬಿಟ್ಟವಳಿಗೆ ಅಡ್ಡ ಹಾದಿಯಲ್ಲಿ ಬರುತ್ತಿದ್ದ  ಪೂರ್ಣಿಮಾ ಅಂದ್ರೆ 'ಪೂರ್ಣಿ' ಸಿಕ್ಕಿದಳು.ಸೀರೆಯಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದ  ಪೂರ್ಣಿಮಾ  ಅಗಲ ಕಣ್ಣಿನ ನೀಳಕಾಯದ  ಸುಂದರ ಹುಡುಗಿ.ನನ್ನ ಸಹಾಪಾಟಿಯಾದ ಆಕೆ  ಇಂತಿಪ ಎರಡು ವರ್ಷದ ಕೆಳಗೆ ನಮ್ಮ ಶಾಲೆ ಸೇರಿದವಳು.ಮೊದಲಿದ್ದ ಶಾಲೆ ಅವಳ ತಂದೆ ಮನೆಯ ಬಳಿ ಇತ್ತಂತೆ  ತಾಯಿಯಾ ಅಕಾಲಿಕ ಮರಣದಿಂದಾಗಿ ಅಜ್ಜಿ ಮನೆಗೆ ನಮ್ಮ ಶಾಲೆ ಹತ್ತಿರವಾಗುತ್ತದೆಂದು ಇಲ್ಲಿ ಸೇರಿಸಿದ್ದರು.ಅವಳೋ ಮೌನ ಗೌರಿಯಂತೆ ಯಾರೊಂದಿಗೂ ಹೆಚ್ಚು ಬೆರೆತವಳಲ್ಲ ಸ್ವಲ್ಪ ನಿಗೂಢ ಸ್ವಾಭಾವದವಳೆನಿಸುತ್ತಿದ್ದಳು ನಮಗೆಲ್ಲ.ಆದರೆ ಅಂದು ಹಾದಿಯಲ್ಲಿ  ಸಿಕ್ಕವಳು ನನ್ನ ತಡೆದು ಮಾತಿಗೆಳೆದಳು.

"ಸ್ಕೂಲ್ ಗೆ ಹೋಗ್ತಿದ್ಯ?" ಅವಳ ಕಣ್ಣಲೇನೋ ಅತೀವ ಸಂಕಟ ಅಡಗಿಸಿಕೊಂಡೆ ಕೇಳಿದಳು

"ಹೌದು ಯಾಕೆ  ನೀನು ಅಲ್ಲಿಗೆ ತಾನೇ ಹೊರಟಿರೋದು??"ಎಂದೆ.

"ಇಲ್ಲ,ಹೌದು! ಅಂದ್ರೆ ಸ್ವಲ್ಪ ತಡವಾಗಿ ಬರುತ್ತೇನೆ...ಒಂದು ಸಹಾಯ ಮಾಡೋಕ್ ಆಗುತ್ತ?" ಅಂದು ಎಂಜಲು ನುಂಗಿದಳು.

"ಏನದು ಹೇಳು? ಅಂತ ಕೆಲಸ ಏನು.. ಯಾಕೆ ತಡವಾಗುತ್ತೆ?" ಅಂದೆ.

"ಚಿಕ್ಕಮ್ಮನನ್ನ   ಮಾತಾಡಿಸಿ ಕೊಂಡು ಹೋಗು ಅಂತ ಅಪ್ಪ ಹೇಳಿದ್ದಾರೆ....ಈ ಡೈರಿ ಯಲ್ಲಿ ಅಮ್ಮನ ನೆನಪಿದೆ ಅಲ್ಲಿಗೆ ಎತ್ಕೊಂಡ್ ಹೋಗೋಕೆ ಮನಸೋಪ್ಪುತಿಲ್ಲ ಮನೆಯಲ್ಲೂ ಬಿಡೋಕೆ ಆಗೋಲ್ಲ.ಅರ್ಧ ಗಂಟೇಲಿ  ಬರುತ್ತೇನೆ.ಅಲ್ಲಿ ತನಕ ಹಿಡ್ಕೊಂದಿರು." ಅಂತೇಳಿ ನನ್ನ ಉತ್ತರಕ್ಕೂ ಕಾಯದೆ ಹೊರಟಳು .

" ಪೂರ್ಣಿ..ಲೇಟ್ ಮಾಡಬೇಡ ಸಿಸ್ಟರ್ ಬಯ್ತಾರೆ.ಬೇಗಾ ಬಾ" ಎಂದು ಆಗಲೇ ನಾಲ್ಕು ಹೆಜ್ಜೆ  ದೂರ ಇದ್ದವಳಿಗೆ   ಗಂಟಲ್ಲೆರಿಸಿ ಹೇಳಿದೆ.

"ಪ್ಲೀಸ್ ಡೈರಿ ಯಾರಿಗೂ ಕೊಡಬೇಡ.ನಾನು ಆದಷ್ಟು ಬೇಗ ಬರ್ತೀನಿ"  ಎಂದು ಮಳೆಯಲ್ಲಿ ಮರೆಯಾಗಿ ಹೋದಳು.

ಬೀಳುತ್ತಿದ್ದ  ಮಳೆಯಲ್ಲಿ ನೆನೆದು ಡೈರಿ ಹಾಳಾಗೋದು ಬೇಡವೆಂದು  ಅವಸರದಿಂದ  ಡೈರಿ ಬ್ಯಾಗನಲ್ಲಿ ಇರಿಸಿ ಕೊಂಡು ಶಾಲೆಗೆ ಹೋದೆ.ಆದರೆ ಪೂರ್ಣಿ ಪಾರ್ಟಿಗೆ ಬರಲೇ ಇಲ್ಲ.ಮನೆಗೆ ಬಂದವಳೇ ಬ್ಯಾಗ್ನಲ್ಲಿದ ನನ್ನ ಕಪ್ಪೆ ಆಚೆ ತೆಗೆಯಲು ನೋಡಿದರೆ ಕಪ್ಪೆ ಮಾಯಾ!! ಡೈರಿ ಮಾತ್ರ ಇದೆ.ಅದು ಡೈರಿ ಇಡುವಾಗ ಎಗರಿ ಹೋಗಿತ್ತು.ಆ ದಿನವೆಲ್ಲ ನನಗೆ ನಿದ್ರೇನೆ ಬರಲಿಲ್ಲ.ರಾತ್ರಿಯಿಡೆ ಮಗ್ಗುಲು ಬದಲಾಯಿಸುತ್ತ  ಪೂರ್ಣಿನ ಅವಳ ಡೈರಿನ ಬಯ್ದುಕೊಂಡೇ  ಮಲಗಿದೆ.ಪರೀಕ್ಷೆಗೆ ಇನೇನು ಮೂರು  ವಾರ ಬಾಕಿ ಉಳಿದಿತ್ತು.ಅದರ ಗುಂಗಿನಲ್ಲಿ ಡೈರಿ ಕಪ್ಪೆ ಎಲ್ಲವು ಮರೆತು ಹೋದವು.ನನ್ನದು  ಪೂರ್ಣಿದೂ ಪರೀಕ್ಷಾ  ಸೆಂಟರ್ ಬೇರೆ ಬೇರೆ ಆಗಿದ್ದರಿಂದ  ನಾವಿಬ್ಬರು ಭೇಟಿ ಆಗಲು ಸಾಧ್ಯವಾಗಲಿಲ್ಲ.ಪರೀಕ್ಷೆಯ ನಂತರ ನಾವೆಲ್ಲ ಶಾಲೆಯಲ್ಲಿ ಸೇರಬೇಕು ಅನ್ನೋ  ಪೂರ್ವ ಯೋಜನೆಯಿತ್ತಲ್ಲ ಆಗಾ ಡೈರಿ ಕೊಟ್ಟರಾಯ್ತು ಎಂದು ಸುಮ್ಮನಾದೆ.ಆದರೆ ಅಲ್ಲಿ ಅಂದು ತಿಳಿದದ್ದೇ ಬೇರೆ.ವಾಸ್ತವದಲ್ಲಿ ಪೂರ್ಣಿ ಪರೀಕ್ಷೆಯೇ ಬರೆದಿರಲಿಲ್ಲ! ಹೀಗೆ ಒಂದು ತಿಂಗಳಿಂದೇನೆ  ಅವಳು ಯಾರ ಜೊತೆಗೋ ಹೋಗಿಬಿಟ್ಟಿದ್ದಾಳೆ ಅಂತ  ಕೆಲವರು ಕಿಡ್ನಾಪ್ ಆಗಿದ್ದಾಳೆ ಅಂತ ಕೆಲವರು ಅವಳ ಚಿಕ್ಕಮ್ಮ ಮನೆ ಬಿಟ್ಟು ಓಡಿಸಿದ್ದಾರೆ  ಅಂತ  ಏನೇನೋ  ಸುದ್ದಿ ಹಬ್ಬಿದವು.ಪೂರ್ಣಿಯಾ ಅಜ್ಜಿ ಕಡೆಯವರು ಅವರಪ್ಪ ಎಲ್ಲರು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಾರೆ ಆದ್ರೆ ಪೂರ್ಣಿಯಾ ಪತ್ತೆ ಆಗಿಲ್ಲ.ಇದೆಲ್ಲ ಕೇಳಿ ಒಂದು ಕ್ಷಣ ನನಗೆ ತಲೆ ಗಿರ್ರ್ ಅಂದು ಬಾಯಿ ಒಣಗಿ ಹೋಯಿತು."ಯಾವ ದಿನದಿಂದ ಕಾಣ್ತಿಲ್ಲವಂತೆ? " ಅಂತ ಚೇತರಿಸಿಕೊಂಡು ಕೇಳಿದೆ. 

"ಅದೇ ನಮಗೆ ಜೂನಿಯರ್ಸ್ ಸೆಂಡ್  ಆಫ್ ಪಾರ್ಟಿ ಕೊಟ್ರಲ್ಲ... ಅವತ್ತೇ ಇವಳಿಗೂ ಪೂರ್ತಿ ಸೆಂಡ್ ಆಫ್ ಆದಂತೆ  ಅನಿಸುತ್ತೆ..ಬೆಳಗೆ ಶಾಲೆಗೆ ಅಂತ  ಹೊರಟವಳದು ಇವತ್ತಿನವರೆಗೂ ಸುಳಿವಿಲ್ಲವಂತೆ " ಎಂದು ಪಿಸುಗುಟ್ಟಿದಳು ಸುಧ.
ಮನೆಗೆ ಬಂದು ನೂರೆಂಟು ಆಲೋಚನೆಗಳು.ಎಲ್ಲೋದಳು ಈ ಹುಡುಗಿ? ಯಾವತ್ತು ಮಾತನಾಡಿಸದವಳು ಅಂದೇ ನನಗೆ ಸಿಗಬೇಕಿತ್ತ?ಅವಳ ವಸ್ತುವನ್ನ ನನ್ನ ಕೈಗಿತ್ತು ಹೋಗಬೇಕಿತ್ತ?ಅದ ಕಾಯಲು ನಾನೆ ಸಿಕ್ಕಿದ ಅವಳಿಗೆ?ನಾನಾದರು ಅದನ್ನ ಜೋಪಾನ ಮಾಡುವುದಕ್ಕೆ ಯಾಕೆ ಒಪ್ಪಿಕೊಂಡೆನೋ?ಹೋಗಲಿ...ಅವಳಜ್ಜಿಗೆ ಡೈರಿ ತಲುಪಿಸಿದರಾಯಿತು.....ಇಲ್ಲ..ಯಾರಿಗೂ ಕೊಡಬೇಡ ಅಂದಿದ್ದಾಳೆ.ಅದಿರಲಿ,ನನ್ನ ಅವಳ  ಭೇಟಿ ಬಗೆಗಾದರೂ ಹೇಳಬೇಕು ಅವರಿಗೆ ಅದಕ್ಕೂ  ಮೊದಲು ಅಮ್ಮನಿಗೆ. ಯಾಕೋ ಬೇಡ ಎಂದೆನಿಸಿತು! ಅವಳ ಬಗ್ಗೆ ನನಗೇನು ಗೊತ್ತು ಅಂತ?? ಏನಾದರು ಗೊತ್ತಿದ್ದರಲ್ಲವೆ ಯಾರಿಗಾದರೂ  ಹೇಳೋದು? ಅದ್ದಕಿಂತ ಸುಮ್ಮನಿರೋದು ವಾಸಿ ಎಂದು ನಿರ್ಧರಿಸಿದೆ.ಮನಸು ತಡೆಯಲಿಲ್ಲ ಅಮ್ಮನಿಗೆ ಎಲ್ಲಾ  ವಿಷಯ ಹೇಳಿದೆ  ಡೈರಿಯ ವಿಷಯವೊಂದನ್ನ ಬಿಟ್ಟು!ಕಪ್ಪೆಯೊಂದಿಗೆ ಮರೆಯಾದ ಪೂರ್ಣಿಯ ನೆನಪಿಗಾಗಿ ಅವಳ  ಡೈರಿಯನ್ನ ಕಪ್ಪೆ ಇದ್ದ ಹಿತ್ತಲ ಮೂಲೆಯಲ್ಲಿ ಮುಚ್ಚಿಟ್ಟೆ.ಮರೆತು ಹೋದೆ.
*
ಕಾಲೇಜ್ ದಿನಗಳೆಂದರೆ ಒಂಥರಾ  ಸ್ವತಂತ್ರ ನಂತರದ  ಭಾರತದ ಹಾಗೆ. ಹಳೆ ಮೌಡ್ಯ ಗಳನ್ನ ಉಲಂಘಿಸುತ್ತಲೇ  ಹೊಸದಕ್ಕೆ ಗಂಟು ಬೀಳುವ  ನಾಂದಿ ಹಾಡುವ ಹಾಗೆ.ಶಾಲೆಯಲ್ಲಿ ಸಹಿಸಿಕೊಂಡ ಒಂದಷ್ಟು ನಿರ್ಭಂದನೆಗಳ್ಳನ್ನ ಅಲ್ಲಿಯವರೆಗೂ  ಪಾಲಿಸಿಕೊಂಡು ಬಂದ ಅನಾವಶ್ಯಕವೆನಿಸಿದ  ಮೌಲ್ಯಗಳನ್ನ ಗಾಳಿಗೆ ತೂರಿಸಿ  ಪ್ರಗತಿ ಜಾಗತೀಕರಣದ ಮುಖವಾಡದೊಂದಿಗೆ   ಅವುಗಳೆದುರು ಬಂಡಾಯ ಏಳುವ ದಿನಗಳು.ಕಾಲೇಜ್ ಸೇರಿದ ಒಂದೂವರೆ ವರುಷದ ನಂತರ  ಸುಖಾಸುಮ್ಮನೆ ಹಳೆಯದನ್ನ ಕೆದಕಿಕೊಂಡಾಗ ಕಪ್ಪೆ,ಪೂರ್ಣಿ,ಡೈರಿ ನೆನಪಾದವು.ಬಂಡಾಯದ ಕಿಚ್ಚು ಹೆಚ್ಚಿತ್ತಳವೆ?ಎಲ್ಲದಕ್ಕೂ ಕಾರಣಗಳು ಬೇಕಾದವು! ಆ ಮುಚ್ಚಿಟ್ಟಿದ್ದ  ಡೈರಿ ಓದುವ ಕುತೂಹಲ ದುರಾಲೋಚನೆ ಬಂದಿದ್ದು ಆಗಲೇ.

ಹಿತ್ತಲ ಗೂಡಲ್ಲಿ ಎಲ್ಲಾ  ಋತುಮಾನಗಳನ್ನ ಸಹಿಸಿಕೊಂಡು ನರಳಿದ್ದ ಆ ಡೈರಿ ಓದಲು ಕಷ್ಟವೆನಿಸಿದರು ಅದು ನನ್ನಲ್ಲಿ ಅತ್ತಿಸಿದ ಪಾಪ ಪ್ರಜ್ಞೆಯ ಉರಿ  ಎಡಬಿಡದೆ ಕಾಡಿದ್ದು ಸತತ ನಾಲ್ಕು ವರ್ಷ.ಅದನ್ನ ಪ್ರತಿ ಭಾರಿ ಓದಿದಂತೆ  ಆ ಡೈರಿಯಲ್ಲಿ ದಾಖಲಿಸಿದ್ದ  ಹತಾಶೆ ತುಮುಲ ಸಂಘರ್ಷ ನನ್ನದೆನಿಸತೊಡಗಿತು.ಪೂರ್ಣಿ ಹೇಳಿದ  ಹಾಗೆ ಆ ಡೈರಿ ಯಲ್ಲಿ ಬರಿ ಅವಳ ತಾಯಿಯ ನೆನಪಿರಲಿಲ್ಲ.ಬದಲಿಗೆ ಅವಳ ಪ್ರೀತಿ ಪ್ರೇಮ ಜಗಳ  ಅದು ಮಾಡಿದ  ಆಘಾತ ಅದರ ವಿರುದ್ದದ ಹೋರಾಟಗಳಿಂದಲೇ  ತುಂಬಿಹೋಗಿತ್ತು.ಆ  ವಯಿಸಿನಲಿ ಅಂತ ಭಾವನೆಯನ್ನ ಹೇಗೆ ತಂದುಕೊಂಡಳು?ಯಾವಾಗಲು ಮೌನಿಯಾಗಿರುತ್ತಿದ್ದವಳ ಹೃದಯದಲ್ಲಿ ಇಷ್ಟೊಂದು ಮಾತುಗಳಿದ್ದವೇ?? ಎಳೆ ವಯಸಿನಲ್ಲಿ ಪ್ರೀತಿ ಪಾತ್ರರನ್ನ  ಅದರಲ್ಲೂ ತಾಯಿ ತಂದೆಯನ್ನ  ಕಳೆದುಕೊಂಡ ಮನುಷ್ಯ ಯಾವ ಮಟ್ಟಿಗೆ ದುರ್ಬಲನಾಗುತ್ತಾನೆ ಏಕಾಂಗಿಯಾಗುತ್ತಾನೆ ಪ್ರೀತಿಗಾಗಿ ಹಂಬಲಿಸುತ್ತಾನೆ  ಸುಲಭವಾಗಿ ಜಾಲಕ್ಕೆ ಬೀಳುತ್ತಾನೆ ಮೊಸಕ್ಕೊಳಗಾಗುತ್ತಾನೆ   ಹೇಗೆ ಕುಸಿಯುತ್ತಾನೆ ಎಂಬುದೆಲ್ಲ ಸಾರಿ ಸಾರಿ ಹೇಳುತಿತ್ತು ಅವಳ ಡೈರಿ.ಪೂರ್ಣಿನ ಆ ಹುಡುಗ ಬಲವಂತವಾಗಿ ಕರೆದೊಯ್ದನೆ? ಡೈರಿ ನನಗೆ ಕೊಟ್ಟಿದ್ದು... ಅದನ್ನ  ಅವಳಜ್ಜಿಗೆ  ತಲುಪಿಸಿ ಅವಳನ್ನ ಪಾರುಮಾಡಲಿರಬಹುದೇ? ಹಾಗಿದ್ದರೆ ಪ್ಲೀಸ್ ಯಾರಿಗೂ ಕೊಡಬೇಡ ಅಂತ ಹೇಳಿದ್ಯಾಕೆ? ಅವಳು ಇಷ್ಟ ಪಟ್ಟೆ  ಹೋದಳೆ ಅವಳೇ ಬಣ್ಣಿಸಿದ  ಆ ದ್ರೋಹಿಯೊಂದಿಗೆ?

 ಯಾವುದರ ಮಾಹಿತಿ ಪಡೆಯೋಕು ಅವಳ ಮನೆಯವರ ವಿಳಾಸ ನನ್ನ ಬಳಿ  ಇರಲಿಲ್ಲ .ಪೂರ್ಣಿ ಅನಂತರ ಏನಾದಳು ಎಂಬುದ ತಿಳಿಯದೆ  ಮನಸು ಆಗಾಗ ಪಶ್ಚ್ಯತಾಪದ ಬೇಗೆಯಲ್ಲಿ ಬಳಲುತಿತ್ತು  ಪೂರ್ಣಿಯ ತಂಗಿ  ಆಶ್ಚರ್ಯವೆಂಬಂತೆ ಆ ಭಾನುವಾರದ  ಬೆಳಗ್ಗೆ   ಮಾಲ್ ನಲ್ಲಿ  ಸಿಗುವವರೆಗೂ.

ಪೂರ್ಣಿ ತಂಗಿ ವಾಣಿ ನಮಗಿಂತಲೂ ೪ ವರ್ಷ ಕಿರಿಯವಳು ನೋಡೋಕೆ  ಪೂರ್ಣಿಯ  ಅಚ್ಚು . "ಪೂರ್ಣಿ ಮನೆಗೆ ಬಂದ್ಲ" ಎಂದು ಆಕೆಯನ್ನು  ವಿಚಾರಿಸಿದಾಗ ಇಗಾ ಮೂರು ತಿಂಗಳ ಹಿಂದಷ್ಟೇ ಬಂದು ಹೋದಳಕ್ಕ ಅಂದಳು!ಶಾಲೆಯಲ್ಲಿದ್ದಾಗ ನಡೆದ ಈ  ಸಂಗತಿ  ಆಗಿನ್ನೂ ೬ನೆ ತರಗತಿಯಲ್ಲಿದ್ದ ವಾಣಿಗೆ ತಿಳಿದಂತಿರಲಿಲ್ಲ.ಪೂರ್ಣಿ  ಕ್ಷೇಮವಾಗಿ ಇದ್ದಾಳೆ ಎಂದು ತಿಳಿದೇ ಯಾವುದೊ ಹೊರೆ ಭುಜದಿಂದ ಇಳಿದಂತ  ಅನುಭವವಾಯಿತು.ನನಗೆ ಪೂರ್ಣಿನ ನೋಡಬೇಕಿತ್ತು ಅವಳಲ್ಲಿ ಡೈರಿ ಓದಿದಕ್ಕೆ  ಕ್ಷಮೆ ಕೇಳಬೇಕಿತ್ತು. ಅವಳ ನಂಬರ್ ಅಡ್ರೆಸ್ ಪಡೆದ್ದಿದ್ದೆ ನೇರ ಬಸ್ ಹತ್ತಿ ಎಡೆಯೂರಿಗೆ ಬಂದಿಳಿದು ಪೂರ್ಣಿ ಫೋನಿನಲ್ಲಿ  ಸೂಚಿಸಿದಂತೆ  ಆಟೋ ಹತ್ತಿ ಅವಳ ಮನೆ ತಲುಪಿದೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


ವಿಶಾಲವಾಗಿ ಕಟ್ಟಿದ್ದ ಮನೆಯ ಬಾಗಿಲಲ್ಲೇ ನಿಂತ್ತಿದ್ದಳು ಪೂರ್ಣಿ.ಬಂದವಳೇ ಪಟ ಪಟ ಯೋಗಕ್ಷೇಮ ವಿಚಾರಿಸಿದಳು ಇವಳು ಅದೇ ಪೂರ್ಣಿನ ಮಾತಿನಲ್ಲೂ ಮುಖದಲ್ಲೂ ಎಷ್ಟೊಂದು ಬದಲಾವಣೆ.ಇವಳಿಗೆ ಹಳೆ ವಿಷಯ ಹೇಗೆ ಕೇಳೋದು ಡೈರಿ ಬಗ್ಗೆ ಆ ಹುಡುಗನ ಬಗ್ಗೆ ಮರೆತಿರ ಬಹುದು ಮತ್ತೆ ನೆನಪಿಸಿ ಘಾಸಿ ಯಾದರೆ ಅನ್ನೋ ಆಲೋಚನೆ ನನ್ನನ ಸುಮ್ಮನಾಗಿಸಿತು.

"ನಿನ್ನನ್ನ ಅವತ್ತೇ ಕೊನೆ ನೋಡಿದ್ದು..ಆಮೇಲೆ ನಾವಿಬ್ಬರು ಭೇಟಿ ಮಾಡೋಕೆ ಆಗಲೇ ಇಲ್ಲ ಅಲ್ವಾ?"ಎಂದು ಅವಳೇ ಹಳೆ ಪುಟಗಳಿಗೆ ಇಳಿದಳು.

"ಹೌದು ಪೂರ್ಣಿ ನಂಗೆ ನಿನ್ ಬಗ್ಗೆ ತಿಳಿದು ಬೇಸರವಾಗಿತ್ತು.ಆಮೇಲೆ ನಿನ್ನ ಮನೆಯ ವಿಳಾಸವು  ಗೊತ್ತಿರಲಿಲ್ಲ ನಮಗ್ಯಾರಿಗೂ ನಂತರದ  ಮಾಹಿತಿ ಸಿಗಲಿಲ್ಲ.ನಿಜ ಹೇಳು ಹೇಗಿದ್ದೀಯ?" ಅಂದೆ.

 "ಖುಷಿಯಾಗಿದ್ದೀನಿ ಕಣೆ,ಯಾಕೆ ಈ ಗಾಬರಿ.ನೀನು ನನ್ನ ಡೈರಿ ಓದಿದ್ಯ?"ಎಂದು ನಗುತ್ತ ಕೇಳಿದಳು.

"ಅದನ್ನ ನನ್ನ ಬಳಿ ಯಾಕೆ ಬಿಟ್ಟೆ?ಎಲ್ಲಿ ಹೋದೆ ಆ ದಿನ?

"ಅಪ್ಪನನ್ನ  ಹೋಗೋ ಮುಂಚೆ ನೋಡೋ ಆಸೆಯಾಗಿತ್ತು .ಮತ್ತೆ ಬಂದು ತೊಗೊಳೋ ಉದ್ದೇಶದಿಂದ ಕೊಟ್ಟೆ.ಆದರೆ ಇವರು ಸಂಶಯ ಬರಬಹುದು ಬೇಗ ಹೊರೋಡೋಣ ಅಂದ್ರು"

"...................." ಅವನೊಟ್ಟಿಗೆ ಹೋದಳ....ನಂಬಲಾಗಲಿಲ್ಲ... ಮಾತು ನುಂಗಿದೆ.


"ಅಂದ ಹಾಗೆ ಆ ಡೈರಿಯಾ ಮಾತುಗಳು ನನ್ನದಲ್ಲ" ಅಂದಳು.

 "ಹಾಗಂದ್ರೆ ?" ದಿಗ್ಬ್ರಂತಳಾದೆ.

"ಈಗ ಅದು ನನ್ನದಲ್ಲ ಕಣೆ ಹುಚ್ಚಿ" ಎಂದು ನಕ್ಕಳು."ಆಗ ಅದೆಲ್ಲಾ ನಡೆದದ್ದು ನಿಜ.ಅವರು ಹಾಗೆ ಇದ್ದರು ಈಗಲೂ ಸ್ವಲ್ಪ ಹಾಗೆ ಇದ್ದಾರೆ.ಆದರೆ...ನಾನು ನನ್ನನೆ ಬದಲಾಯಿಸಿಕೊಂಡಿದ್ದೀನಿ"

"ಓ ನಾಟಕೀಯ ಆದರ್ಶಗಳ ಬೆನ್ನೇರಿ ಜೀವನದೊಂದಿಗೆ ಒಪ್ಪಂದ ಮಾಡಿಕೊಂಡೆ ಅನ್ನು"

" ಇಲ್ಲ ಜೀವನವು ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ"

ಅಷ್ಟರಲ್ಲಿ ಯಾರೋ ಮೇಲಿಂದ  ಕೂಗಿದಂತಾಯಿತು ಪೂರ್ಣಿ ಟೆರೇಸ್ ಮೆಟ್ಟಲೇರುತ್ತಾ ನನ್ನನು ಅವಳಿಂದೆ ಬರುವಂತೆ ಕಣ್ಣಲ್ಲೇ ಸೂಚಿಸಿದಳು. ಅವಳು ಏರುತಿದ್ದ ಒಂದೊಂದು ಮೆಟ್ಟಿಲು ಅದರಲ್ಲಿನ ಅವಳ ನಡಿಗೆ,ಅದಾಗಲೇ ಜೀವನದ ಮೆಟ್ಟಿಲುಗಳನ್ನೇರಿ ದಿಗಂತ ತಲುಪಿದಂಗಿತ್ತು.
ಆ ದ್ವನಿ ಪುಟ್ಟ ಕಿಶೋರನದು.ಪೂರ್ಣಿಯ ಮಗ.ಚಿತ್ರ ಬಿಡಿಸುತ್ತ ಕುಳಿತಿದ್ದ.

"ಇಲ್ಲಿಂದ ಅಲ್ಲಿರೋ ಪುಟ್ಟ ಮನೆ ಹೇಗೆ ಕಾಣುತ್ತಿದೆ ನಿನಗೆ" ಅಂದಳು

"ಪುಟ್ಟ ಮನೆ ತರ" ಅಂದೆ

"ಆ ಮನೆಯನ್ನು,ನನ್ನ ಮನೆಯನ್ನು,ಬಹು ಮಾಡಿಯ ಕಟ್ಟಡಗಳನ್ನು   ಮೋಡಗಳ ಮೇಲೆ ನಿಂತು ನೋಡಿದರೆ ಹೇಗೆ ಕಾಣುತ್ತೆ" ಅಂದಳು.

"ಎಲ್ಲವು ಚಿಕ್ಕದಾಗಿ..ಒಂದೇ ರೀತಿ"ಅಂದೆ

"ಹಾಗೆ ನಾನು ಜೀವನವನ್ನ ನೋಡುತ್ತಿರೋದು.ಹತ್ತಿರವಿದ್ದರೂ ದೂರದಿಂದ.ಎಲ್ಲರೂ ಒಂದೇ ರೀತಿ ಅನಿಸುತ್ತಾರೆ.ಎಲ್ಲವು ಸುಂದರವಾಗಿದೆ ಅನ್ನಿಸುತ್ತದೆ"

"ಅದು ಸುಳ್ಳಲ್ಲವ?"

"ಚಂದ್ರ ಸುಂದರವಾಗಿದ್ದಾನೆ ಅನ್ನೋದು ಸುಳ್ಳಲ್ಲವ? ನಕ್ಷತ್ರಗಳು ರಾತ್ರಿ ಮಾತ್ರ ಮಿನುಗುತ್ತಾವೆ ಅನ್ನೋದು ಸುಳ್ಳಲ್ಲವ?ನೀನು ನಿನ್ನ ಮೇಲೆ  ಬರಬಹುದಾದಂತಹ ಆರೋಪ್ಪಕ್ಕೆ ಹೆದರಿ ಡೈರಿ ಮುಚ್ಚಿಟ್ಟೆ ಹೊರತು ನನಗೆ ಕೊಟ್ಟ ಮಾತಿಗೆ ಬದ್ದಳಾಗಿ ಅಲ್ಲ ಅಂದರೆ ಅದು ನಿಜವ? ಎಲ್ಲವ ನೋಡುವುದಕ್ಕೂ ಎರಡು ಕೋನಗಳಿರುತ್ತಾವಲ್ಲವೇ  ಆ ಆಯ್ಕೆ ನಮಗೆ ಬಿಟ್ಟದು.ಅದರಲ್ಲಿ ಸಂತಸ ತರುವುದನ್ನೇ  ಆಯ್ಕೆ ಮಾಡಿಕೊಂಡರೆ ಒಳಿತಲ್ಲವೇ? " ಅಂದಳು. 

"ಪೂರ್ಣಿ ನೀನು ತುಂಬಾ ಬದಲಾಗಿದ್ದೀಯ ಡೈರಿ ಯಲ್ಲಿ ನಾ ಕಂಡ ಪೂರ್ಣಿನೆ ಬೇರೆ.ಅಯ್ಯೋ ಅದ ಓದಿದಾಗಲೆಲ್ಲ ಅವಳಿಗೆ ಸಮಾಧಾನ ಮಾಡಲು ಎಷ್ಟು ಪ್ರಯತ್ನಿಸುತಿದ್ದೆ ಗೊತ್ತ?" ಎಂದು ನಕ್ಕೆ...ನಾನಿಷ್ಟು ದಿನ ನಂಬಿಕೊಂಡಿದ್ದ ಕೆಟ್ಟ ಸತ್ಯಗಳು ಸುಳ್ಳಾಗಿದ್ದವು.

"ನಾನು ಬದಲಾದ ದಿನವೇ ಮನೆ ಬಿಟ್ಟೆ.ಇಗಾ ಬದಲಾಗುತ್ತಿರೋದು ನೀನು!" ಎಂದವಳೇ  ಕಾಫಿ  ತರಲು  ಹೋದಳು.

ಹೊರಡುವಾಗ ಅವಳಿಗಿಂತಲೂ  ನನ್ನ ಬಳಿಯೇ ಹೆಚ್ಚು ಕಾಲ ಇದ್ದ ಡೈರಿಯನ್ನು ಪೂರ್ಣಿಯ ಕುರುಹಾಗೆ  ನನ್ನ ಜೊತೆ  ಕೊಂಡೊಯ್ಯುವ  ಮನಸಾಯಿತು.ಕೊನೆಗೂ ನನಗೆ ಅದನ್ನ ಬಿಟ್ಟು ಕೊಡುವ ಪ್ರಮಾದ ಬರಲಿಲ್ಲ ಯಾಕಂದರೆ ಅವಳಿಗೆ  ಅದನ್ನ ಇಟ್ಟುಕೊಳ್ಳುವ  ಇರಾದೆಯೇ ಇರಲಿಲ್ಲ.ಅದರ ಕೊನೆಯ ಪುಟದಲ್ಲಿ  ಕಿಶೋರನಿಂದ  "ಗುಲಾಬಿ ಕಣ್ನಿನ ಸುಂದರ ಬದುಕು ಕಟ್ಟಿಕೊಂಡ ಅಮ್ಮನ, ಪ್ರೀತಿಯ ಮಗು-ಕಿಶೋರ್" ಎಂದು ಕೈ ಹಿಡಿದು ಬರೆಸಿದೆ.    
*
ಮಳೆ ನಿಂತಿತು.ಬಸ್ ನಿಲ್ದಾಣದಲ್ಲಿ ಹರಿದು ಹೋಗುತಿದ್ದ ನೀರು ಎಂದಿನಂತೆ  ಸೆಳೆಯಿತು.ಬ್ಯಾಗ್ ನಿಂದ ಡೈರಿ ತೆಗೆದು ಮೊದಲ  ಪುಟಗಳಿಂದ ದೋಣಿ ಮಾಡಿದೆ...ನೀರಿನಲ್ಲಿ ಒಂದೊಂದೆ ದೋಣಿ ಬಿಟ್ಟೆ.ಅದರಲ್ಲಿ ಪೂರ್ಣಿ ಅವಳ ಗಂಡ ಮಗು  ಎಲ್ಲರು ಸುಖ ಪ್ರಯಾಣ ಹೊರಟಂತೆ ಅನಿಸಿತು.ಮನಸು ಸಂತೋಷದಿಂದ  ನೆನೆಯಿತು.

ಅಷ್ಟರಲ್ಲೇ ಡ್ರಂಕ್ ಡ್ರಂಕ ಸದ್ದು.......

ಹಿಂದಿನಿಂದ ಬಸ್ಸಿನ ಹೆಡ್ ಲೈಟ್ ಮಿಂಚಿತು.ಬೆಳಕಿಗೆ ಬೆಳಕು ಚೆಲ್ಲಿದಂತಾಯಿತು.ನಾನು ಅದರೊಳಗೊಂದಾಗಿ  ಮಿಂಚಿದೆ.

*

ನಿಜ ಪೂರ್ಣಿ ಹೇಳಿದ ಹಾಗೆ ನಾನು ಅಂದು ಬದಲಾದೆ .........ಹಾಗಂತ ಎಲ್ಲವೂ ಬದಲಾಗೋದಿಲ್ಲ ಕೊನೆಗಾನೋದಿಲ್ಲ.ಕೆಲವೊಂದು ದಾಖಲಿಸುತ್ತ ಹೋದಷ್ಟು  ಪುನರ್ ಲಿಖಿತ..... ಜೀವನದ ಕೊನೆ ಸ್ಟಾಪ್ ಬರುವವರೆಗೂ ಸಮಯದೊಳಗೆ  ಚಿರಂತನವಾಗಿ  ಬಂಧಿತ.....ನನ್ನ ರಚ್ಚೆ,ಹಠ ಸ್ವಭಾವದಂತೆ.....ಎಂಬತ್ತರ ಹೊಸ್ತಿಲ್ಲಲ್ಲೂ  ಅದಕ್ಕೆ ಮಣಿದು ಕತೆ ಹೇಳುವ ನನ್ನಜ್ಜಿಯ ಉತ್ಸಾಹದಂತೆ...ಮಕ್ಕಳಾಟಿಕೆ ಮಾಡೋ ನಿನಗೆ ಬುದ್ಧಿ ಬೆಳೆದಿದೆ  ಅನ್ನೋಕಾಗುತ್ತ ಅನ್ನೋ ಅಮ್ಮನ ಉವಾಚದಂತೆ.....

25 comments:

  1. ಚೆನಾಗಿದೆ...ಆಪ್ತವಾದ ಶೈಲಿ ಇಷ್ಟವಾಯ್ತು...ಇನ್ನಷ್ಟು ಬರೆಯಿರಿ ....ಹಾಂ ಕಪ್ಪೆಯ ಕಥೆ ಇಷ್ಟವಾಯ್ತು..ಕಣ್ಣಿನ ಚಿತ್ರವೂ ಸುಂದರ..ಮುಂದುವರೆಸಿ
    ನಮಸ್ತೆ

    ReplyDelete
    Replies
    1. ಚಿನ್ಮಯ್ ಮೆಚ್ಚಿದಕ್ಕೆ ಧನ್ಯವಾದಗಳು. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ.ಬರುತ್ತಿರಿ :-)

      Delete
  2. ಕತೆಯನ್ನು ಸ್ವಾರಸ್ಯಕರ ಶೈಲಿಯಲ್ಲಿ ಬರೆದಿದ್ದೀರಿ. ಇಷ್ಟವಾಯ್ತು.

    ReplyDelete
    Replies
    1. ಸುನಾತ್ ಭೈಯ್ಯ ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು.ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ.ಬರುತ್ತಿರಿ :-)

      Delete
  3. ಕಥೆ ತುಂಬಾ ಚೆನ್ನಾಗಿದೆ.... ಈಗೆ ಮುಂದುವರೆಸಿ

    ReplyDelete
    Replies
    1. ಕಿರಣ್ ಮೆಚುಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.:-)

      Delete
  4. ಓಡಿ ಹೋಗಿ ಮದುವೆಯಾಗಿ ಸೆಟಲ್ ಆಗೋದು ಅಷ್ಟು ಸುಲಭದ ಮಾತಲ್ಲ..

    ಅದೂ ಅಪ್ರಾಪ್ತ ವಯಸ್ಸಲ್ಲಿ.. ನೀ ಹೇಳಿದಂತೆ ಅದೂ ಶಾಲಾ ದಿನಗಳಲ್ಲಿ..!!

    ಅಪ್ಪ ಅಮ್ಮನ್ನನ್ನ ಕಳೆದು ಕೊಂಡ ಹುಡುಗಿ ಚಿಕ್ಕಿಯ ಕೈಲಿ ಅನುಭವಿಸಿದ ಯಾತನೆಗಳಿಂದ ಬೇಸತ್ತು.. ಈ ಪರಿಧಿಯಿಂದ ನಾ ತಪ್ಪಿಸಿ ಕೊಂಡರೆ ಸಾಕಪ್ಪ ಅನ್ನೋ ತುಡಿತದೊಂದಿಗೆ ಕಾಯುವ ಆ ಹುಡುಗಿಯಂಥಾ ಅದೆಷ್ಟೋ ಜೀವಗಳಿಗೆ ಈಗಲೂ ವಯೋಮಿತಿಗನುಗುಣವಾಗಿ ನಡೆಯುವ ಪ್ರೇಮ ಪ್ರಕರಣ.. ಓಡಿ ಹೋಗುವ ಪ್ರಕರಣ ಅವರ ಬದುಕಿನೊಳಗೆ ಯಾವತ್ತಿಗೂ ಮಹತ್ತರ ಬದಲಾವಣೆಗೆ ಕಾರಣವಾಗಬಹುದು..

    ಆ ಮಹತ್ತರ ಬದಲಾವಣೆ ಒಳಿತೂ ಆಗಿರಬಹುದು.. ಅಥವಾ ಕೆಡುಕು ಕೂಡ..!!

    ನಿನ್ನ ಕಥಾ ನಾಯಕಿ.. (ಕಥಾ ನಾಯಾಕಿ ನೀನಾ [ನಿರೂಪಕಿ] ಅಥವ ಪೂರ್ಣಿಮಾ ನಾ ಅನ್ನೋದು ಪ್ರಶ್ನೆಗೀಡು ಮಾಡೋ ವಿಚಾರ).. ಪೂರ್ಣಿಮಾ ವಿಚಾರದಲ್ಲಿ ಆದ ಬದಲಾವಣೆ ನಿಜಕ್ಕೂ ತುಂಬಾ ಖುಷಿ ಕೊಡೊ ವಿಚಾರ.. :)

    ಓಡಿ ಹೋಗಿದ್ದರಾಚೆಗೆ ಮತ್ತೆ ಬದುಕು ಕಟ್ಟಿಕೊಂಡು ಜಗತ್ತಿನೆದುರು ಅಷ್ಟು ಆತ್ಮ ವಿಶ್ವಾಸದಿಂದ ಬದುಕಿ ತೋರಿಸುವುದು ಸುಲಭದ ಮಾತಲ್ಲ..

    ಅವಳ ಅನುಭವ ಅವಳನ್ನ ಬದಲಾಯಿಸಿದ್ದು.. ಮುಗ್ಧತೆ ಮಾಸಿದ್ದು.. ಅವನ ಮೇಲಿಟ್ಟ ನಂಬಿಕೆ ಆತ್ಮವಿಶ್ವಾಸ ದೊರಕಿಸಿ ಕೊಟ್ಟದ್ದು.. ಹೌದು ಅವಳು ಬದಲಾದದ್ದು ಕಾಲಘಟ್ಟಕ್ಕೆ ಆಗಲೇ ಬೇಕಾದ ಮಾರ್ಪಾಡು..

    ಕಥೆ ನಿಜವೇ ಆಗಿದ್ದಲ್ಲಿ.. ಪೂರ್ಣಿ ನಿನ್ನ ಸಂಪರ್ಕದಲ್ಲಿ ಈಗಲೂ ಇರೋದೇ ಆದಲ್ಲಿ ನನ್ನದೊಂದು ಶುಭ ಹಾರೈಕೆ ತಿಳಿಸಿಬಿಡು.. :) :)

    ಮತ್ತೊಮ್ಮೆ ನಿನ್ನ ಬರಹದ ಮೇಲೆ ಅನುಮಾನ ಮೂಡಿಸುವಂತೆ ಬರೆದಿದ್ದೀಯ..!! ನೀನು ಹಾಗೆ ಬರೆಯುತ್ತಲೇ ಇರಬೇಕು..

    ಚೆಂದದ ನಿರೂಪಣೆ.. ಭಾವ ಭಾಷೆಯ ಸಮ್ಮಿಳಿತ.. ಸಕಾಲದ ನೆನಪುಗಳ ಕಾಲಾನುಕ್ರಮ ಜೋಡಣೆ ಎಲ್ಲವೂ ಅತಿ ಸುಂದರ..

    ತುಂಬಾ ಇಷ್ಟ ಆಯ್ತು ಜೆರ್ರಿ.. ಹಾಗೆ ಹೊಟ್ಟೆ ಕಿಚ್ಚಿನ ಮತ್ತೊಂದು ಮೆಟ್ಟಿಲೇರಿ ಈಗ ನಮ್ ದೃಷ್ಟೀಲಿ ಮತ್ತೂ ಅಗಾಧವಾಗಿ ಶೋಭಿಸ್ತಾ ಇದ್ದೀಯ.. :) :)

    ಅದು ನಿರಂತರವಾಗಿರಲಿ ಅಷ್ಟೆಯಾ.. :) :)

    ReplyDelete
    Replies
    1. ಬದುಕನ್ನೇ ಬದುಕಿಸುವ ರೀತಿ ಬದುಕನ್ನು ನೋಡುವ ದೃಷ್ಟಿಕೋನ ಹಲವರದ್ದು.ಎಲ್ಲಾ ವಕ್ರತೆಯ ನಡುವೆಯೂ ಸರ್ವರನ್ನು ಸಮಾನರನ್ನಾಗಿ ಕಾಣುವ ಮಮತೆಯ ಮಳೆಗರೆಯುವ ಮೇಲಿರುವ ಪರಮಾತ್ಮನ ಕೋನವನ್ನು ತಮ್ಮ ಕಣ್ಣಿನೊಳಗೆ ಇಳಿಸಿಕೊಂಡವರು.ಪೂರ್ಣಿ, ಪೂರ್ಣಿಯಂತೆ, ಮುಳ್ಳನ್ನ ಮೆದುವಾಗಿಸಿ ಮರೆಯಾಗಿಸಿ ಬರಿ ಗುಲಾಬಿಯನ್ನ ಮಾತ್ರ ತಮ್ಮದಾಗಿಸಿಕೊಳ್ಳುವವರು, ಗುಲಾಬಿ ಕಣ್ಣಿನವರು.ನಿನ್ನ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಟಾಮ್.ನಿನ್ನ ಪ್ರೋತ್ಸಾಹ ಅಭಿಮಾನ ಹೀಗೆ ಇರಲಿ.:-)

      Delete
  5. ಹೇಳೋದು ಮರ್ತಿದ್ದೆ.. ನಿನ್ ಚತ್ರ ಸೂಪರ್.. :) :)

    ReplyDelete
    Replies
    1. ನಾನು ಹೇಳೋದಾ ಮರೆತಿದ್ದೆ ಚಿತ್ರ-ಕತೆ ಮೆಚ್ಚಿದಕ್ಕೆ ಧನ್ಯವಾದಗಳು.:-)

      Delete
  6. This comment has been removed by the author.

    ReplyDelete
  7. ತುಂಬ ಚೆನ್ನಾಗಿದೆ , ಕಥೆ ಇಷ್ಟ ಆಯ್ತು. ಕಥೆಗಿಂತ ಅದನ್ನು ಬರೆದಿರುವ ರೀತಿ ಇಷ್ಟ ಆಯ್ತು. ಬರಹದ ಶೈಲಿ ಅಂತಾರಲ್ಲ ಅದು ದೊಡ್ಡ ಕಥೆಯ ಉದ್ದ ಗೊತ್ತಾಗದಂತೆ ಓದಿಸಿಕೊಂಡು ಹೋಗುತ್ತದೆ. ಹಾಗೆಯೇ ಚಿತ್ರಗಳೂ ತುಂಬಾನೇ ಚೆನ್ನಾಗಿ ಬಿಡಿಸ್ತೀರಾ. ಬರೀತಾ ಇರಿ.

    ReplyDelete
    Replies
    1. ಸುಬ್ರಮಣ್ಯ ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ.. ಮೆಚುಗೆಗೆ ಧನ್ಯವಾದಗಳು.:-)

      Delete
  8. Estu odhidharu mathe odhabeku anno astu chendha idhe.. Sheshuma..!! :)

    ReplyDelete
    Replies
    1. ಮದನ್ ನಿಮ್ಮ ಮೆಚುಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.:-)

      Delete
  9. "ಅಸಲಿಗೆ ಗಾಡಿಗೂ ಜೀವನದ ಬಂಡಿಗೂ ಇರುವ ಸಾಮ್ಯತೆ ಕಂಡು ಬೆಚ್ಚುತ್ತಿದ್ದೆ.ಅಪ್ಪನ ಮಾತಿನಲ್ಲೂ ಅಣ್ಣನ ಮಾತಿನಲ್ಲೂ ಅವೇ ಸಾಮತ್ಯೆ ಮೇಲೈಸಿದ್ದಂತೆ ಯಾವುದೊ ಪಾಠ ಬೋಧಿಸುತ್ತಿರುವಂತೆ ಭಾಸವಾಗುತಿತ್ತು!!" ee salugala arthavannu swalpa bidisi heli... :)

    ReplyDelete
    Replies
    1. ಮದನ್

      ಜೀವನದ ಬಂಡಿಯೂ ಕೂಡ ಗಾಡಿಯಂತೆ ಮುಖ್ಯವಾಹಿನಿಯಲ್ಲಿ ಚಲಿಸತಕ್ಕದು..
      ಉಸಿರಿದೆಯೆಂದು ಬದುಕನ್ನ ಹೇಗೇಗೋ ಬದುಕಿದರೆ ಅರ್ಥವಿರುವುದಿಲ್ಲ ಉತ್ತಮ ಜೀವನ ಕಟ್ಟಿಕೊಳ್ಳೋದು ನಮ್ಮ ಗುರಿಯಾಗಬೇಕು.ಅಂತ ಜೀವನವೇ ನಾವು ಬದುಕಿರುವುದಕ್ಕೆ ಸಾಕ್ಷಿಯಾಗಬೇಕು.
      ಜನನಿಬಿಡ ಜಾಗದಲ್ಲಿ ಗಾಡಿ ಪಾರ್ಕ ಮಾಡುವ ಹಾಗೆ ಎಲ್ಲರ ಮನಿಸಿನಲ್ಲೂ ನೆಲೆ ಉರುವಂತ ನಡತೆ ಸನ್ಮರ್ಗದ ಪಥ ನಮ್ಮದಾಗಬೇಕು.ಗಲ್ಲಿಗಳಲ್ಲಿ ಗಾಡಿ ಚಲಾಯಿಸುವ ಅನುಭವದಂತೆ ಎಲ್ಲ ತರನಾದ ಕಷ್ಟನಷ್ಟಗಳ ನೋವು ಬಡತನಗಳ ಪರಿಚಯವಿರಬೇಕು ಅವನ್ನ ಜಯಿಸಿ ಮುನ್ನುಗುವ ಅಚಲತೆ ಮೈಗೂಡಿಸಿಕೊಳ್ಳಬೇಕು.ಹೀಗೆ ಪರಿಪೂರ್ಣ ಬದುಕಿನ ಸೂತ್ರಗಳನೆಲ್ಲಾ ಬಿತ್ತರಿಸುತ್ತಾವಲ್ಲವೇ ಗಾಡಿಚಾಲನೆಯ ಪಾಠಗಳು?:-)

      Delete
  10. ನಿರೂಪಣೆಯ ಶೈಲಿಯಲ್ಲಿ ನಮ್ಮ ಮನಸ್ಸು ಗೆಲ್ಲುತ್ತೀರಿ.

    ಉತ್ತಮ ಬರಹದ ಲಕ್ಷಣಗಳುಳ್ಳ ಕಥನ.

    ReplyDelete
    Replies
    1. ಬದರಿ ಸರ್ ನನ್ನ ಬ್ಲಾಗಿಗೆ ಸ್ವಾಗತ.ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ.ತಪ್ಪಿದ್ದರೆ ತಿದ್ದುತಿರಿ.ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.:-)

      Delete
  11. ಚೆನ್ನಾಗಿದೆ ತಮ್ಮ ಅರ್ಥಪೂರ್ಣವಾದ ಬರಹದ ಯಾನ ಹೀಗೆ ಮುಂದುವರೆಯಲಿ..

    ReplyDelete
  12. ಕಾಗದದ ನಾವೆಯನ್ನು ರಸ್ತೆ ಬದಿಯಲ್ಲಿ ಹರಿಯು ಮಳೆಯ ನೀರಿನಲ್ಲಿ ಬಿಟ್ಟಾಗ...ನೀರಿನ ಹರವಿನುದ್ದಕ್ಕು ಅದು ತನ್ನ ತಾನೇ ಸಂಭಾಳಿಸಿಕೊಂಡು ತೇಲುತ್ತ ಹೋಗುತ್ತದೆ..ಅಂತಹ ಒಂದು ಸಾರಾಂಶ ನಿಮ್ಮ ಕತೆಯುದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ..ಸಮಸ್ಯೆಯನ್ನು ಹತ್ತಿರದಿಂದ ನೋಡಿದಾಗ ಕಾಣುವ ಆತಂಕ...ದೂರದಿಂದ ನೋಡಿದಾಗ ಸಿಗುವ ಸಮಾಧಾನ ಹೆಚ್ಚು ಸೂಕ್ತ..
    ಸುಂದರ ಕತೆ...ಭಾವನೆಗಳು ಕೂಡ ಕಾಗದದ ನಾವೆಯಂತೆ ತೇಲುತ್ತ ಮುಳುಗುತ್ತಾ ಸಾಗಿ ಕ್ಷೇಮದ ದಡ ಸೇರಿಕೊಳ್ಳುವ ಆಶಾಭಾವನೆಯೊಂದಿಗೆ ಮುಕ್ತಾಯ..ಸುಂದರ ಲೇಖನ..

    ReplyDelete
  13. ಹ್ಮ್ , ನಿಮ್ ಹೊಲಿಕೆಗಳೇ ಹೊಲಿಕೆಗಳು
    "ಸ್ವಂತಂತ್ರ ಭಾರತ , ತೀರ್ಥ ಸ್ನಾನ ಮಾಡಿದ ಪ್ರಕೃತಿ ..."
    ಸುಂದರ ಕಥೆ ಮತ್ತು ಅಷ್ಟೇ ಸುಂದರವಾದ ಸುನಯನೆಯ ಚಿತ್ರ .
    You can not change the world but you can always change the way you look at it.
    how true. Keep writing.

    ReplyDelete
    Replies
    1. ಇಡೀ ಬರಹದ ಮೇಲೆ ಹಾಗೆ ಕಣ್ಣಾಡಿಸಿದಾಗ ನಂ ಇನ್ ಸ್ಟಂಟ್ ರಿಯಾಕ್ಷನ್ "ಯಪ್ಪಾ... ಇಷ್ಟುದ್ಧ ಪೋಸ್ಟ್ ನ ಯಾರ್ ಓದ್ತಾರ್ ಹೋಗಪ್ಪಾ :P

      ಓದಾದ್ ಮೇಲೆ......"ಬುಳುಕ್, ಬುಳುಕ್, ದುಬುಲ್, ದುಬುಲ್ ವೈಶೂ, ನಾನ್ ಏನ್ ಹೇಳಲಿ...? ನಿನ್ನ ನಿರೂಪಣೆ, ಬರವಣಿಗೆಯ ರೀತಿ, ಸಗಣಿ ಮೇಲೆ ಕಲ್ ಒಗಿದ್ ಹಾಗಿದೆ ಭಾವಾರ್ಥ" :D

      Delete
  14. ಪರಿಸ್ಥಿತಿ ಎಲ್ಲವನ್ನೂ ಬದಲಾಯಿಸುತ್ತದೆ ಎನ್ನುವುದಕ್ಕೆ ಪೂರ್ಣಿಮಳೇ ಸಾಕ್ಷಿ.... ....ಜೀವನದಲ್ಲಿ ನಾವು ಬಯಸಿದ್ದೆಲ್ಲಾ ಸಿಗುವುದಿಲ್ಲ...ಕೆಲವೆಡೆ ಒಪ್ಪಂದ, ಹೊಂದಾಣಿಕೆ ಮಾಡಿಕೊಳ್ಳುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ.....ಸ್ವಾರಸ್ಯಕರವಾಗಿ ಮೂಡಿ ಬಂದಿದೆ.....ಬರಹದಿಂದ ಬರಹಕ್ಕೆ ನಿನ್ನ ಬರವಣಿಗೆಯ ಸೌಂದರ್ಯ ಹೆಚ್ಚುತ್ತಿದೆ ಎನ್ನುವುದು ನನ್ನು ಕಂಡುಕೊಂಡ ಸತ್ಯ....ಹೀಗೆಯೇ ನಿನ್ನ ಬರವಣಿಗೆಯ ಹಡಗು ಮುಂದುವರಿಯಲಿ....Happy for you sis...

    ಅಭಿನಂದನೆಗಳೊಂದಿಗೆ .

    ...ನಿನ್ನ ಸಹೋದರ.

    ReplyDelete
  15. P.S : Yessssssssssss ...chitra sooper.............

    ReplyDelete