Thursday, March 21, 2013

ಮೋಹಿನಿ ಗಾನ :

ಚಿತ್ರಕೃಪೆ : ಅಂತರ್ಜಾಲ


ದೇಹದೊಳಗೊಂದು ಮನಸ
ಮನಸಿನೊಳಗೊಂದು ದೇಹವ
ಹೊತ್ತು ನಡೆಯುವ ಹರಿಣಿ
ಸಂತೆ ಹಾದಿಯಲಿ ಸಿಕ್ಕಲೊಬ್ಬಳು
ಅಲಂಕಾರಿಣಿ

ಸುಕೋಮಲ ಚರ್ಮದವಳಲ್ಲ
ನುನುಪಿನ ಗಲ್ಲ ಅವಳಿಗಿಲ್ಲ
ಗುನುಗುವ ಕಂಠವೋ ಬಲು ಗಡಸು
ಆದರೇನು ಮನದೊಳಗೆ ಸ್ಪುರಿಸುವುದು
ಮೃದು ಭಾವದ ಮೋಹಿನಿ ಗಾನ!

ಅವಳಂದಳು,
ಮುಚ್ಚಿಡಲಾರದೆ ತೆರೆದಿಟ್ಟೆ
ಬಿಕ್ಕಲ್ಲಾರದೆ ಅರಚಿ ನಿಟ್ಟುಸಿರಬಿಟ್ಟೆ
ಹುಟ್ಟ ಮನೆಗೆ ಕಳ್ಳ ಅತಿಥಿಯಾದೆ
ನೆರಳಿಲ್ಲದೆ ಫಲವಿಲ್ಲದೆ
ಊರಿಗೆ ದಂಧೆಯ ಸರಕಾದೆ
ಬೇಡುತ ಸೆರಗೊಡ್ದುವೆ
ಧರ್ಮವಿದ್ದರೆ ಕೊಟ್ಟುಬಿಡು,
ಹಿಡಿಗಾಸ


ಬರಿ ಬೀಜ ಹೊತ್ತರೆ ಮಾತ್ರ ಮರವೇನೆ?
ಮರವೆಂದರೆ ನೂರು ಬೇರು ಹತ್ತು ರೆಂಬೆ
ಬಳ್ಳಿಗೆ ಆಶ್ರಯ ನೀಡಬಲ್ಲ ಕರುಳು
ಜೀವಿಗೆ ತಂಪನುಣಿಸುವ ನೆರಳು

ಬಿಟ್ಟುಬಿಡು,
ಧರ್ಮ ದೂರವಿಟ್ಟ ಋತು
ಮರ ಬೇಡದ ನೆರಳು
ನಿನಗೇಕೆ,ಅದಕೆ ಕೊರಗೇಕೆ?

ಅವಳಂದಳು ,
ಬೆಳಕಿನ ಮದುಮಗಳ ನಿಶೆಯ ಹವಣಿಕೆಗೆ
ಅಂದು ಸುತ್ತಲು ಬೆಂಕಿ
ಹೃದಯದ ಮುದ್ದಣಕೆ ಹೊರಗಿನ ಕಾವು
ಕತ್ತಲ ವಿಧವೆಯ ಗೆಜ್ಜೆಯ ಕಂಪನಕೆ
ನೆಲವದು ಸಡಿಲು
ನೃತ್ಯದ ಅಮಲಿಗೆ ಕೆಂಪಿನ ಹೊನಲು

ಬಲ್ಲೆಯಾ ಇಂತಹ ಅನುರಾಗವಾ?
ಕಂಡೆಯ ಈ ಪರಿ ಆರ್ತನಾದವಾ?

ಎರಡು ಜೀವಗಳ ಒಂದಾಗಿಸಿ
ಹುಟ್ಟಿದೆವು ನಾವೆಲ್ಲ
ಎರಡು ಜನ್ಮವ ಒಂದಾಗಿಸಿ
ಅವತರಿಸಿರುವೆ ನೀ
ಪಡೆದಿದ್ದಕಲ್ಲ ಶಾಪವ
ಹರಸುವ ದಿವ್ಯ ಕರ್ಮಕ್ಕಾಗಿ
ಕಳೆಯಲಿಕ್ಕಲ್ಲ ಪಾಪವ
ಗಳಿಸುವ ಸೆರಗಿನ ಪುಣ್ಯಕ್ಕಾಗಿ

ಅವಳ ಸೆರಗಿಗೆ ಕೈಗೆ ಸಿಕ್ಕಿದಷ್ಟು ತುರುಕಿ
ಪಿಸುಗುಟ್ಟಿದೆ
ಕೇಳು,ಅರಿವಿದೆ ಹೆಣ್ಣು ಜನ್ಮಕೆಲ್ಲಾ
ನಮ್ಮಯ ಮನದ ದೀಪವು ಒಂದೇ
ಅದರ ಜ್ವಾಲೆಯ ಮೂಲವು ಒಂದೇ.

Sunday, March 10, 2013

ಹೊಸ ನೀರು : ಹಳೆ ನೀರ ರಭಸಕ್ಕೆ ಮಡಿದವರೆಷ್ಟೋ,ಹೊಸ ನೀರ ಸುಳಿಗೆ ಸಿಲುಕುವವರೆಷ್ಟೋ!

(ಹೊಸದೇನು ಬರೆಯಲಾಗಲಿಲ್ಲ ಹಾಗಾಗಿ ಹಳೆದೊಂದು ಕಥೆ )

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ.


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು.

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು.


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ.

Wednesday, February 20, 2013

ಅರಿಶಿನವಲ್ಲದ ಹಳದಿ....ಕುಂಕುಮವಿಲ್ಲದ ಕೆಂಪು!


ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ      

ನಿಮ್ಮದೋ ಹಳದಿ ಕೆಂಪು ನಾನಾ ಬಣ್ಣಗಳು 
ನಡುಮಧ್ಯೆ ಗಾಜಿನ ಸೂರುಗಳು,
ಕಾವಲಿಗೆ ಬೆದರು ಗೊಂಬೆಗಳ ಸಾಲುಗಳು
ಗುಮ್ಮನೆ ಕೂತ ಅವನಿಗೂ ಕಳ್ಳರ ಭಯ ನಿಮ್ಮಲ್ಲಿ 
ಚಿಲಕವಿರುವ ಗುಡಿಯೊಳಗೂ ತೀರದ ಬವಣೆಗಳು  

ನಿಮ್ಮಯ ಒಂದು ಊಟಕ್ಕೋ,
ಕುದುರೆ ಓಟಕ್ಕೋ,ಆಳುವ ಚಟಕ್ಕೋ
ಅವನು ನುಚ್ಚಾದ,ಮಿನುಗುವ ನೂರಾದ  
ಇಂಚಿಂಚು ಬಿಂಬದೊಳು ಕತ್ತರಿಸಿದ ಕೈಯಾದ,
ಬರಿಯ ಕಣ್ಣು ಕುಕ್ಕುವ ಮೆರಗಾದ.

ಅಲ್ಲೊಬ್ಬ ಕುಂಟ ಅಜ್ಜ,
ಕೂರುತ್ತಾನೆ ಅವನ ಕಾಯುತ್ತಾನೆ
ಹಸ್ತವ ಚಾಚುತ್ತಾನೆ ಕೇಳಿದರೆ ಹುಡುಕುತ್ತಾನೆ 
ಕಡೆಗೆ ದೇವರೆಂದು ನಿಮಗೆ ತಲೆ ಬಾಗುತ್ತಾನೆ

ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ!   

Saturday, February 2, 2013

ಕಾಳಿ(ಕಲಿ)ಯುಗ

ಚಿತ್ರಕೃಪೆ:- ಅಂತರ್ಜಾಲ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ

ಮುಖಕ್ಕೊಂದು  ಬೆನ್ನು
ಬೆನ್ನಿಗೆ ಸಾವಿರ ಮುಖ
ಬೆನ್ನಿಗೇ ಬೆನ್ನಚ್ಚಿ ಕೂತೆವಲ್ಲಾ 

ಕಣ್ಣುಗಳು ಕಣ್ಣನ್ನೇ 
ಕುಕ್ಕದೇ  ಬಿಡುವುದೆನಯ್ಯ?    

ಊರಿಗೆ  ಕೇರಿಗೆ
ಝಗಮಗಿಸೋ ನಸುಕಿನ ನಾಡಿಗೆ 
ಪ್ರವಾಹವದು ಬಡಿದಿಹುದು
ಸೊಂಕೊಂದ  ತಂದಿಹುದು
ಕಂಗೆಟ್ಟ ದಾರಿಯಿದು
ಮುಸುಕಿನಲಿ ಸಾಗಿಹುದು,ಹಿತ್ತಲ ಗಿಡದಾಶ್ರಯಕೆ
  
ಇಲ್ಲಿಯ ರೋಗಗ್ರಸ್ತ ಹಿತ್ತಲಿಗೆ 
ಯಾವ ಬೇರಿನ ಮದ್ದಯ್ಯ?

ಪ್ರಕೃತಿಯ ಸೆರಗಿನಲಿ 
ವಿಕೃತಿಯು ಅವಿತಿಹುದು
ಭೇದಕ್ಕೆ ಏನಿಹುದು ಮಾನದಂಡ
ಕಡೆಯಿಲ್ಲದ ಪಂಚೀಗಳು
ಬಾಯಿಲ್ಲದ ಹಂಸಗಳು
ಅಳೆಯಲಿಕೆ ಎಲ್ಲಿಹುದು ನ್ಯಾಯದಂಡ

ನಂಬಿದ ವಿಹಂಗಮ ಧೂತರೆಲ್ಲಾ  
ಯಾರ ದನಿಗೆ ಕಾದಿಹರಯ್ಯ?

ದ್ವಾಪರ ತ್ರೇತಗಳೆಲ್ಲ  ಅವನದೆಂದು  ಬೀಗದಿರಿ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
ಲೋಕದ ಕಾಳಿ ಕಲಿಗಳೇ ಅಂತ್ಯಕ್ಕೆ ಕೂಡುವರು 
ದಿಕ್ಕಿಲ್ಲದ  ಕೋಣೆ  ಕೋಣೆಗಳ  ಕತ್ತಲಿಂದಲೇ
ಉದ್ಭವಿಸುವಳು  ಅವಳು

ಸದೆಬಡೆದು ಪಳಗಿಸುವಳು ನಿಮ್ಮಯ ಪೌರುಷವ
ಪ್ರದರ್ಶನಕಿಟ್ಟೀರಿ ಜೋಕೆ  ಅಮಾನುಷ 
ಪುರುಷತ್ವವ.

 ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
 

Thursday, January 31, 2013

ಸೋಕದ ಸೂರ್ಯನ ಪ್ರೀತಿ,ಸಂಬಂಧವೆಂಬ ಮರ ಮಾತಾಡಿದಾಗ...

ಚಿತ್ರಕಲೆ : ಮದನ್ ಕುಮಾರ್
ಮಾಗಿಯ ಚಳಿಗೆ ಅವಳು ಕಂಗಾಲು.ತುಟಿಗಳು ಕೆನೆ ವ್ಯಸ್ಲಿನ್ ನೋಡದ ದಿನವೇ ಇಲ್ಲ.ಈಗೀಗ ಚರ್ಮವು ಬಿರುಕು ಬಿಡುತಿದೆ.ಅದಾಗಲೇ ಸಮಯವೂ ಜಾರಿ ಸೂರ್ಯ ನೆತ್ತಿಗೆ ಬಂದು ನಿಂತಿದ್ದಾನೆ.ಹರುಷದಿ ಇವಳು ಜಿಗಿಯುತ್ತಾ ಬಂದು ಅಂಗಳದಲ್ಲಿ ಸೂರ್ಯನಿಗೆ ಮೈವೊಡ್ಡಿ ಬಿಸಿಲ ನಿರೀಕ್ಷೆಯಲ್ಲಿ ಕುಳಿತು ಕೊಂಡಳು.ಮನೆಯ ಸುತ್ತಿದ್ದ ಮರಗಳು ಬೀಸುತ್ತಿದ್ದ ಗಾಳಿಗೆ ತಲೆದೂಗುತ್ತಿವೆ ಸೂರ್ಯ ಅವುಗಳ ಮಧ್ಯೆ ನುಸುಳಿ ಇವಳ ಮೈ ಸ್ಪರ್ಶಿಸುವಲ್ಲಿ ಎಡವುತ್ತಿದ್ದಾನೆ.ಇವಳು ಆ ಗೋಡೆಗಳೇ ಎಷ್ಟೋ ಬೆಚ್ಚನೆಯ ಭಾವ ನೀಡಿದ್ದವು ಅಂತ ಸಿಟ್ಟಾದಳು.ಅಂಗಳದೆಲ್ಲೆಡೆ ಎಡತಾಕಿದರು ಉಪಯೋಗವಾಗಲಿಲ್ಲ.ಬೀದಿಗೆ ನಿಲ್ಲಲ್ಲು ಸಾಧ್ಯವಿಲ್ಲದ ಮಾತು,ಮನೆಯ ಬೇಲಿಯು ಬಲಿಷ್ಟವೆ,ಏನಿದ್ದರು ತನ್ನ ಪರಿಮಿತಿಯಲ್ಲೇ ಎಲ್ಲವ ದಕ್ಕಿಸಿಕೊಳ್ಳಬೇಕು.ಕೋಪ ನೆತ್ತಿಗೆರುತ್ತಿದಂಗೆ ಕಣ್ಣು ಕೆಂಪಾಗಿಸಿಕೊಂಡು ಮರದ ಬಳಿ ಬಂದು ನಿಂತಳು.ಸಿಹಿ ಸಿಹಿ ನೆನಪುಗಳು ಅವಳ ಆವರಿಸಿತು.ಆಗಿನ್ನೂ ಪುಟ್ಟವಳು ಅಪ್ಪ ಗಿಡಗಳ ಅದೆಲ್ಲಿಂದಲೋ ತಂದು ನೆಟ್ಟಿದ್ದ,ದಿನ ನೀರು  ಹುಯ್ಯುತ್ತ ಅದರ ಆರೈಕೆ ಮಾಡುತ್ತಿದ್ದ.ಇವಳೋ ಅಪ್ಪನ ಮಗಳು,ಅವನು ಬಿಂದಿಗೆ ನೀರು ಸುರಿದರೆ ಇವಳು ತನ್ನ ಪುಟ್ಟ ಕೈಗಳ ತುಂಬಾ ತಂಬಿಗೆ ಹಿಡಿದು ನೀರೆರೆಯುತ್ತಿದ್ದಳು.ಆ ಗಿಡಗಳೇನು ಬೇಡಿಕೊಂಡಿರಲಿಲ್ಲ,ಅವುಗಳು ಅವಳಂತೆ ಆಗಿನ್ನೂ ಮಾತು ಕಲಿತಿರಲಿಲ್ಲ.ಅವಳು ದೊಡ್ಡವಳಾದಾಗ ಅಜ್ಜಿ ಪೂಜೆಗೆ ಮೂಲೆಯಲ್ಲಿದ್ದ ಅಲಸಿನ ಮರ ಆಯ್ದು ಕೊಂಡಿದ್ದರು.ಇವಳು ಪೂಜೆ ಮಾಡಿ ಮುಗಿಸಿದಳು.ಇವಳಿಗೆ ಮಾತು ಚೆನ್ನಾಗಿಯೇ ಹೊರುಳುತ್ತಿತ್ತು ಆದರೆ ಆಯ್ಕೆಯ ಸ್ವತಂತ್ರವಿರಲಿಲ್ಲ.ಆ ಮರವೇನು ಕೇಳಿಕೊಂಡಿರಲಿಲ್ಲ,ಅದಿನ್ನೂ ಮಾತು ಕಲಿತಿರಲಿಲ್ಲ.ತದನಂತರ ಆ ಮರ ಫಲವತ್ತಾಗಿ ಬೆಳೆದು ಅದರಲ್ಲಿ ರುಚಿಕರ ಹಣ್ಣುಗಳು ಬಿಡಲಾರಂಬಿಸಿತು.ನೋಡಿದೀರ  ನನ್ನ ಮೊಮ್ಮಗಳು ಪೂಜೆ ಮಾಡಿದ ಮರ ಅದಕ್ಕೆ ಇಷ್ಟೊಂದು ರುಚಿ ಅದರ ಹಣ್ಣುಗಳು ಎಂದು ಅಜ್ಜಿ ಹಣ್ಣು ಚಪ್ಪರಿಸಿದ್ದಾಗಲೆಲ್ಲ ಸಿಕ್ಕ ಸಿಕ್ಕವರಿಗೆ ಹೇಳಲು ಮರೆಯಲಿಲ್ಲ.ಇವಳಿಗೂ ಹಾಗೇ ಅನಿಸ ತೊಡಗಿತು ಆ ಮರ ತನ್ನ ಋಣದಲ್ಲಿದೆ ಅನ್ನೋ ದರ್ಪ ಮನೆ ಕಟ್ಟಿತ್ತು.ಚಳಿಗೆ ರೋಮ ಸೆಟೆದು ನಿಂತವು,ಸಿಟ್ಟೇರಿ ಈ ಮರವ ಇಂದು ಕಡಿದೆ ಬಿಡಬೇಕೆಂದು ಕೊಡಲಿ ಕೈಗೆತ್ತಿಕೊಂಡಳು.ಸುಡುವ ಬೇಸಿಗೆಯ ನೆನಪಾಯ್ತು,ಮರದ ತಂಗಾಳಿ ಆಗವಳಿಗೆ ಹಿತ ನೀಡುತ್ತಿದ್ದವು.ಕೊಡಲಿ ಜಾರಿತು.ಮರ ತನ್ನನ್ನು ತನಗಾಗಿ ಯಾರು ಬೆಳೆಸಲಿಲ್ಲ ಪ್ರೀತಿಸಲಿಲ್ಲವೆಂದು ಕೊನೆಗೂ ಮೌನವ ಮುರಿದು ಜೋರು ಅಳತೊಡಗಿತು.ಪರಿತಪನೆಯೋ.. ಪಶ್ಚ್ಯತಾಪವೋ...ಗೊತ್ತಾಗದಂತೆ,ಇವಳೂ  ಅಳ ತೊಡಗಿದಳು.ಸುತ್ತಲಿದ್ದ ಮರಗಳು ಸ್ಪಂದಿಸುವಂತೆ ಅಳ ತೊಡಗಿದವು.ಊರಿನೆಲ್ಲಾ ಮರಗಳು ಜೋರು ಕೂಗಲಾರಂಬಿಸಿದವು.ಅಳು ಕೂಗಾಯಿತು.ವಿವಿಧ ಭಾವಗಳು ಸೇರಿ  ಕೂಗನ್ನು ಇಂಪಾಗಿಸಿದವು.
*
ಜನರೆಲ್ಲಾ ಆ ಸಮೂಹ ಆಲಾಪನೆಯ ಆಲಿಸುವಲ್ಲಿ ಮಗ್ನರಾದರು.ಮುಂದೊಂದು ದಿನ  ಕೂಗು ಸತ್ತೊಯ್ತು.ಅವಳ,ಮರದ, ಗೋಳು ಯಾರ ಕಿವಿಗೂ ಬೀಳಲೇ ಇಲ್ಲ.

Friday, January 25, 2013

ಸಿದ್ಧಾರ್ಥನ ಮಡದಿ ಯಶೋಧರೆ!

ಚಳಿಗಾಲದ ಸಂಜೆ ಅದು.ಜನನಿಬಿಡವಿಲ್ಲದೆ  ನೀರವ ಮೌನ ಆವರಿಸಿದ ಪಾರ್ಕಿನ ಒಂದು ಕಲ್ಲು ಬೆಂಚು ಅವಳ ಉಪಸ್ಥಿತಿಯಿಂದ ಬೆಚ್ಚಗಾಗಿದೆ.ಹಳದಿ ಹೂವಿನ ರಾಶಿ ಹರಡಿಕೊಂಡು ಕೈಲಿದ್ದ ಸೆವಂತಿಯ ಪಕಳೆಗಳ ಒಂದೊಂದೇ  ಕೀಳುತ್ತ  ಮೆಲ್ಲಗೆ ಮನಸಿನಲ್ಲಿ ಹೇಳಿಕೊಳ್ಳುವಂತೆ ಮಾತುಗಳ ಉಸುರುತ್ತ ಕುಳಿತ್ತಿದ್ದಾಳೆ ಆಕೆ.ಮೃದು ಹಸಿರು ಬಣ್ಣದ ಸೀರೆ,ಅಲ್ಲಲ್ಲಿ ಸೇವಂತಿ ಹೂವಿನ ಚಿತ್ತಾರವಿರುವ ಕಪ್ಪನೆಯ ಸ್ವೆಟರ್,ಹಸ್ತಗಳಿಗೆ ಅದೇ ಬಣ್ಣದ ಮ್ಯಾಚಿಂಗ್ ವುಲನ್ ಗ್ಲೌಸ್,ಪಾದಗಳಿಗೆ  ಸಾಕ್ಸ್ ತೊಟ್ಟು ಕೊಳದಲ್ಲಿ ಹಲ್ಲು ಕಿರಿಯುತ್ತಿದ್ದ  ಸೂರ್ಯನ ಬಂಗಾರದ ರೂಪವ ನೋಡುತ್ತಿದ್ದ  ಅವಳ ಕಳೆಗುಂದಿದ ಕಣ್ಣುಗಳಲ್ಲಿ  ವಿಶ್ವಾಸವಿಲ್ಲ.ಆದರೆ ಬೆರಳುಗಳಿಗಿವೆ! ಅದರಿಂದಲೇ ಅವುಗಳು ಆ ಸೇವಂತಿ ದಳಗಳನ್ನು  ಹವಿಸಾಗಿ ಅರ್ಪಿಸುತ್ತಿದ್ದಾವೆ.

ಬೆಳಗೆ ನಡೆದ ಜಗಳ ಅವನ ಮೇಲಿದ್ದ ಅಷ್ಟು ವರ್ಷದ  ಪ್ರೀತಿಯನ್ನು ಕಿತ್ತುತಿಂದಿತ್ತು.ಎಷ್ಟು ದಿನ ಅಂತ ನೋವನ್ನು ಸಹಿಸಿಕೊಳ್ಳೋದು ಅತ್ತೆಯ ಚುಚ್ಚು ಮಾತುಗಳು,ಅವನ ನಿರ್ಲಕ್ಷತೆ.ನಾನೇ  ಎಲ್ಲಾದರು   ದೂರ ಮರೆಯಾಗಿ ಹೊರಟುಬಿಡಬೇಕು ಅನ್ನೋ ಆಲೋಚನೆಯಲ್ಲಿ  ಮುಳುಗಿತ್ತು ಅವಳ ಮನಸು.

ಮತ್ತೊಮ್ಮೆ, ಬೆರಳುಗಳು  "ಹೋಗುವುದಾ? ಬೇಡವ?... ಹೋಗುವುದಾ? ಬೇಡವ?... ಹೋಗುವುದಾ? ಬೇಡವ?......"ಎಂದು  ಒಂದೊಂದಾಗೆ ಹೂವುಗಳ ಬಲಿಕೊಡುವ ಆಟ ಶುರು ಮಾಡಿದ್ದವು.

 'ಇಲ್ಲ!!' ಬೆರಳುಗಳು  ಸ್ಥಬ್ದವಾದವು.ನನ್ನ ಹುಚ್ಚು ಮನಸಿನ ಚಂಚಲತೆಗೆ ಇವುಗಳಾದರು ಯಾಕೆ ಬಲಿಯಾಗಬೇಕು? 'ನನ್ನ ಅವನ  ಪ್ರೀತಿಯ  ಭಾರಿ ಮೊತ್ತವ  ನಾವೇ ತೆತ್ತುತ್ತೇವೆ' ಅನ್ನುತ್ತಾ  ಛಿದ್ರವಾಗದೆ ಉಳಿದ ಹೂವಗಳ  ಹೆಕ್ಕಿಕೊಂಡು ಕೊಳಕ್ಕೆ ಹಾಕುವ ಇರಾದೆಯಿಂದ ಅಲ್ಲಿಂದ ಏಳಲು ಹೊರಟ ಅವಳನ್ನು ಹಿಂದಿನಿಂದ  ಯಾರೋ ಕೈ ಹಿಡಿದು ಎಳೆದರು.

ಅವಳು ಬೆಂಚಿನಿಂದ ಅಲುಗಾಡಲಿಲ್ಲ.'ಈ ನಿರ್ಜನ ಸ್ಥಳದಲ್ಲಿ ಇದ್ಯಾರು ನನ್ನ ಕೈ ಹಿಡಿದವರು'ಒಳಗಿಂದ ಬಂದ ಆ ಮಾತು ತಾನಿಲ್ಲಿ ಒಂಟಿ ಹೆಂಗಸು ಎಂಬುದ ನೆನಪಿಸಿದ ಅರೆಕ್ಷಣದಲ್ಲಿ ಆ  ಭೀಕರ ಚಳಿಯಲ್ಲೂ  ಬೆವರ ತೊಡಗಿದಳು.ಕೂತ್ತಲ್ಲೇ ನಡುಗಿದಳು,ಗಾಬರಿಗೆ  ಹೃದಯದ ಬಡಿತವು  ಹೆಚ್ಚಾಯಿತು.

ಕಳ್ಳನಿರಬಹುದು?ಕಟುಕನ?ಅಥವಾ ದುಷ್ಟನ? ತಿರುಗಿ ನೋಡೇ ಬಿಡೋಣ ಅನಿಸಿತು.ಆದರೆ ಧೈರ್ಯ ಸಾಲದೇ ಮೆಲ್ಲಗೆ ಕಣ್ಣಂಚನ್ನು  ಓರೆ ಮಾಡಿ ನೋಡಲು ಪ್ರಯತ್ನಿಸಿದಳು,ಏನು ಕಾಣಲಿಲ್ಲ.ಅತ್ತಿದ್ದರ ಪ್ರಭಾವವೋ ಏನೋ  ಕಣ್ಣುಗಳೆಲ್ಲ ಪದರು ಪದರು ಅಂದುಕೊಳ್ಳುತ್ತಾ,ನೆಲಕ್ಕೆ ಕಣ್ಣು ನೆಟ್ಟಳು,ಅವಕ್ಕೆ ಚರ್ಮದ ಚಪ್ಪಲಿ ಧರಿಸಿದ  ಪಾದಗಳು ಸೆರೆಯಾದವು.ಓ ಗಂಡಸೆ! ಎದೆ ಧಗ್ ಎಂದಿತು.ಸಾವರಿಸಿಕೊಂಡು ಇನ್ನೊಮ್ಮೆ ಕಣ್ಣು ಚಿಕ್ಕ ಮಾಡಿ ಸೂಕ್ಷ್ಮಾವಾಗಿ ಪಾದಗಳನ್ನು ಗಮನಿಸಿದಳು.ಸುಕ್ಕಾದ ಮೈ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ ಉಗುರು ಸುತ್ತು,ಏನಿದ್ದರು ಎಪ್ಪತ್ತರ ಆಸು ಪಾಸಿನ ಮುದುಕ,ಸಧ್ಯ ನಿರುಪದ್ರವಿ ಎಂದು ಅವನೆಡೆಗೆ ಮುಖ ತಿರುಗಿಸಿದಳು.
 
"ಯಾರು ನೀವು?ನನ್ನ ಕೈ ಯಾಕೆ ಹಿಡಿದಿರಿ?" ಸಿಟ್ಟು ತಂದುಕೊಂಡು ಕೇಳಿದಳು ಅವಳು.
 "ನಾನು ಇಲ್ಲೇ ಆಚೆ ಬೀದಿಯಲ್ಲಿ ಮನೆ.ನೀವ್ಯಾರು? ಹೀಗ್ಯಾಕೆ ಒಬ್ಬರೇ ಈ ಮರದಡಿ ಕೂತಿದ್ದೀರ?" ಗಂಭೀರವಾಗಿ ಪ್ರಶ್ನಿಸಿದ ಮುದುಕ.

"ನಿಮಗ್ಯಾಕೆ ಅದೆಲ್ಲ? ನೀವೇನು ನನ್ನ ನೆಂಟರೆ? ಈ ಪಾರ್ಕ್ ನಿಮ್ಮದೇ?ಅಥವಾ ಈ ಮರ ನಿಮ್ಮದೇ?" ಅಂದಳು.ಅಷ್ಟಕ್ಕೂ ಯಾರು ಈ  ಮುದುಕ? ತುಂಬಾ ಹೊತ್ತಿನಿಂದ ನನ್ನ ಚಲನವಲನಗಳ  ಗಮನಿಸಿರಬೇಕು,ನಾನೆಲ್ಲಿ ಕೊಳ್ಳಕ್ಕೆ ಹಾರಿಕೊಳ್ಳುತ್ತೇನೋ ಅನ್ನೋ ಭಯದಿಂದ ಕೈ ಹಿಡಿದಿದ್ದಾನೆ ಅನಿಸುತ್ತೆ.

"ಹಾಗಲ್ಲ ಈ ಜಾಗ ಅಷ್ಟು ಸುರಿಕ್ಷಿತವಾಗಿಲ್ಲ,ಒಂಟಿಯಾಗಿ ಇಲ್ಲೆಲ್ಲಾ ಬರಬಾರದು ಕಣಮ್ಮ"  ಕೈಯಿಂದಲೇ ಸ್ವಲ್ಪ ಜರಗಿ ಅಂತ ಸೂಚಿಸಿ ಬೆಂಚಿನ ಮೇಲೆ ಅವಳ ಬಲಕ್ಕೆ ಕುಳಿತ.

"ನೋಡಿ ಇವ್ರೆ...ನನಗೆ ಬುದ್ಧಿ ಹೇಳೋ ಅಗತ್ಯ ಇಲ್ಲ ಅದೇನಿದ್ದರು ನನ್ನ ಗಂಡನಿಗೆ ಹೇಳಿ.ಅವನಿಂದಲೇ ಈ  ಸ್ಥಿತಿ ಬಂದಿರೋದು"

"ಓ ಹಾಗ,ಸರಿ ಅವನ ಹೆಸರೇನು?ಎಲ್ಲಿಯವನು? ನಿಮ್ಮಿಬ್ಬರ ಮಧ್ಯ ಬಂದಿರುವ ಸಮಸ್ಯೆಯಾದರೂ ಏನಮ್ಮ?"

 "ಅವನ ಹೆಸರು ಸಿದ್ಧಾರ್ಥ.ನೋಡಿ ಇವ್ರೆ...ನಿಜ ಹೇಳ್ತೀನಿ,ನನ್ನ ಗಂಡನಿಗೆ ಸ್ವಲ್ಪವು ಜವಾಬ್ದಾರಿ ಇಲ್ಲ.ತುಂಬಾ ನಿರ್ಲಕ್ಷೆತೆವುಳ್ಳ  ಮನುಷ್ಯ ಅವನ ಕಾಯಕವೇ ಅವನಿಗೆ ದೊಡ್ಡದು. ಕೆಲಸದ ನೆಪ ಹೇಳಿ ಮುಂಬೈಗೆ ಹೋಗಿದ್ದಾನೆ.ಹೋದವನು ಈ ಕಡೆ ಮುಖ ಹಾಕಿಲ್ಲ.ಮತ್ತೆ ಮನೇಲಿ ಅತ್ತೆಯ ಪಿರಿಪಿರಿ ಬೇರೆ ಹಾಗಾಗೆ ಎಲ್ಲರನ್ನು ಬಿಟ್ಟು ತೆರಳುವ ಯೋಚನೆ ಮಾಡಿದ್ದೀನಿ ಅಂದಾಗೆ ನಿಮ್ಮ ಹೆಸರು?" ಒಂದೇ ಉಸಿರಿನಲ್ಲಿ ಉತ್ತರ ಹೇಳಿ ಪ್ರಶ್ನೆಯು ಹಾಕಿದಳು.

"ಹೌದೌದು ಗಂಡ ಹೆಂಡಿರ ನಡುವೆ ಅತ್ತೆ ಮಾವಂದಿರು ಮೂಗು ತೂರಿಸಬಾರದು.ವಯಸ್ಸಾದ ಮೇಲೆ ಮಕ್ಕಳನ್ನು ದೂರದಿಂದಲೇ ನೋಡಿ ಸಂತೋಷಿಸಬೇಕು.ಗಂಡನಾಗಿ ಅವನು ನಿನ್ನನ್ನು ತನ್ನೊಂದಿಗೆ ಕರೆದುಕೊಂಡು  ಹೋಗಬೇಕಿತ್ತು ಅದುವೇ  ಧರ್ಮ,ಸರಿಯಾಗಿದೆ ನಿನ್ನ ಹಂಬಲ.ನನಗ್ಯಾಕೋ ನಿನ್ನ ಗಂಡ ಸರಿಯಿಲ್ಲ ಅನಿಸುತ್ತಿದೆ.",

"ನೋಡಿದ್ರ ಇವ್ರೆ, ನಿಮಗೂ ಹಾಗೆ ಅನಿಸಿದೆ.ಮದುವೆಯಾದ ಹೊಸತರಲ್ಲಿ ಎಷ್ಟು ಖುಷಿಯಿತ್ತು ಗೊತ್ತ? ದಿನ ಗುಲಾಬಿ ಹೂವು ತಂದು ಮೂಡಿಸುತ್ತಿದ್ದ ತುಂಬಾ ಪ್ರೀತಿಸುತ್ತಿದ್ದ.ನೀ ದಾರಿ ತಪ್ಪಿದರೆ  ಆ ದಾರಿಗೆ ಸವಾಲಾಕುತ್ತೇನೆ ಹೊರತು ನಿನ್ನನೆಂದು  ದುಷಿಸೋಲ್ಲ ಎಂದಿಗೂ ಮನಸ ನೋವಿಸಲ್ಲ.ಯಾವುದೇ ವಿಷ ಗಳಿಗೆ ಎದುರಾದರು ನಿನ್ನ  ಕೈ ಮಾತ್ರ ಬಿಡೋಲ್ಲ ಅನ್ನುತ್ತಿದ್ದ.ಆಮೇಲೆ ಏನಾಯ್ತು ಅಂದ್ರೆ... ಎಲ್ಲಂದರಲ್ಲಿ ಯಾರ ಯಾರ ಮನೆಯಲ್ಲೋ ಅಪರಿಚಿತರ ನಡುವೆ ಇರಲು ಬಿಟ್ಟು ಮರೆಯಾಗಿದ್ದಾನೆ ನನಗೂ ಸಾಕಾಗಿದೆ.ಅಷ್ಟಿಷ್ಟು ಪಾಡು ಪಟ್ಟಿಲ್ಲ ನಾನು ಮಗುವ ಕಟ್ಟಿಕೊಂಡು.ಮೊದಲೆಲ್ಲ ಗುಲಾಬಿ ಹೂವಿನ ದಳಗಳ ಕಿಳುತ್ತ ಅವನಿಗಾಗಿ ಕಾಯುತ್ತಿದ್ದೆ.ಇಗಾ  ಸೇವಂತಿಗೆಗೆ ಬಂದಿದ್ದೇನೆ.ಅಂದಾಗೆ ನಿಮ್ಮ ಹೆಸರು?" ಕಣ್ಣೀರಾಡಿದಳು.

"ನನ್ನ ಹೆಸರ........?? ನೆನಪಿಲ್ಲ.....ವಯಸ್ಸಾಯ್ತು ಒಂದೂ ನೆನಪಿರೋಲ್ಲ....ನನ್ನ ಹೆಸರು ಬಂದು...ಅದಿರಲಿ ನೀನು ಕಣ್ನೀರಿಡೊದನ್ನ ಮೊದಲು ನಿಲ್ಲಿಸು.ನೀನೆಳುವುದ ನೋಡಿದರೆ ನಿನ್ನ ಗಂಡ ನೀಚನೆ ಇರಬೇಕು,ಎಷ್ಟೊಂದು ಮಾನಸಿಕ ಉಪಟಳ ನೀಡಿದ್ದಾನೆ.ಅಂತವನನ್ನ ಬಿಟ್ಟು ಬಂದಿದ್ದೆ ಒಳ್ಳೆದಾಯ್ತು ಬಿಡು."

ಅವಳ  ಸೆರಗಲಿದ್ದ ಹೊವಗಳ ಕಂಡು,ತಡಿ ಆ ಹೂವುಗಳನ್ನ ನಾನೇ ಕೊಳಕ್ಕೆ ಹಾಕುತ್ತೇನೆ ಎನ್ನುತ್ತಾ ಪಕ್ಕದಲ್ಲಿದ್ದ ಕೊಳ್ಳದ ನೀರಿನಲ್ಲಿ  ಅವನೆಲ್ಲಾ ತೇಲಿ ಬಿಟ್ಟ.

ಅಲ್ಲಾ,ಯಾಕೆ ಈ ಮುದುಕ ಒಂದೇ ಸಲ ನನ್ನ ಗಂಡ ಕೆಟ್ಟವನು ಅನೋದನ್ನ ಒಪ್ಪಿದ?ನನ್ನ ಓಲೈಸಲು ನೋಡುತ್ತಿರಬಹುದೇ? ಛೆ...ಈ ವಯಸ್ಸಿನಲ್ಲಿ ಅಂತ ದುರ್ಬುದ್ದಿ ಇರಲಿಕ್ಕಿಲ್ಲ.

"ಮುದುಕಪ್ಪ ನಿಮ್ಮ ಮನೆ ಎಲ್ಲಿದೆ? ನಿವ್ಯಾಕೆ ಇಲ್ಲಿಗೆ ಬಂದಿರುವಿರಿ? ನಿಮ್ಮ ಮಕ್ಕಳು ಹೆಂಡತಿ ಯಾರು ಜೊತೆ ಬರಲಿಲ್ಲವೇ?"

"ಮಗ ಸೊಸೆ ಲಂಡನ್ನಲ್ಲಿದ್ದಾರೆ.ಎರಡು ವರ್ಷಕೊಮ್ಮೆ ಬರುತ್ತಾರೆ.ಕಂಪ್ಯೂಟರನಲ್ಲಿ ವಾರಕೊಮ್ಮೆ ಮಾತಿಗೆ ಸಿಗ್ತಾರೆ.ನನ್ನ ಹೆಂಡತಿಗೆ ಅದೆ ಕೊರಗು,ಜೊತೆಗೆ ವಿಚಿತ್ರ ಕಾಯಿಲೆ ಬೇರೆ,ಯಾವುದೋ ಹಳೆ ಗುಂಗಿನಲ್ಲಿರುತ್ತಾಳೆ.ಮಾನಸಿಕವಾಗಿ ತುಂಬಾ ದುರ್ಬಳಲು.ಆಗಾಗ ನನ್ನಿಂದ  ದೂರವಾಗ್ತಾಳೆ.ಅವಳಿಲ್ಲದೆ ಮನೆ ಮನಸು ಎಲ್ಲ ಖಾಲಿ ಎನಿಸಲು ಶುರುವಾಗುತ್ತೆ.ಈ ಜಗತ್ತಿನಲ್ಲಿ ಒಬ್ಬರದ್ದು ಒಂದೊಂದು ಸಮಸ್ಯೆ ಕಣಮ್ಮ."
ಪರವಾಗಿಲ್ವೆ ಈ ಮುದುಕ ಈ ವಯಸ್ಸಿನಲ್ಲೂ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆ.ಮತ್ತೆ ಇವರ ಸೊಸೆಗಿಂತಲೂ ನಾನೆ ಮೇಲೂ ಒಬ್ಬಳನ್ನೇ ಬೇಡ ಅತ್ತೆ ಮಾವರನ್ನು ಕರೆದುಕೊಂಡು ಹೋಗೋಣ ಅಂದಿದ್ದೆ.ಅಲ್ಲ,ಅವರಿಬ್ಬರನ್ನು ಬಿಟ್ಟು ನಾನು ತಾನೇ ಹೇಗಿರಲಿ? ಮದುವೆಯಾದ ಮೊದಲನೆಯ ದಿನವೇ ವಯಸ್ಸಾದ ಕಾಲಕ್ಕೆ ಇಲ್ಲಿಗೆ ಬಂದು ಸಾಯುವ ನಿರ್ಧಾರ ಮಾಡಿ ಆಗಿದೆ,ಇಗಾ ನಿನ್ನೊಡನೆ ಮುಂಬೈಗೆ ಕರೆದುಕೊಂಡು ಹೋಗು ಅಂದ್ರೆ ಸುತರಾಮ್ ಒಪಲಿಲ್ಲ. ಫೋನಿನಲ್ಲೂ  ಆಗೋಲ್ಲ ಅಂತ ಜಗಳಕ್ಕಿಳಿಯುತ್ತಾನೆ.ಗಂಡನಿಲ್ಲದೆ ಹೀಗೆ  ಯಾರ ಯಾರ ಮನೆಲೋ ಇರಬೇಕು.ಅವಳಿಗೆ ಸಂಕಟ ತಡೆಯಲಾಗಲಿಲ್ಲ ಕಣ್ಣೀರು ಉಕ್ಕಿ ಬಂತು.ಅಲ್ಲಿಂದ ಏಳಲು ನೋಡಿದಳು.

ಅಷ್ಟರಲ್ಲಿ "ಕುಳಿತುಕೊಂಡೆ ಮಾತಾನಾಡೋಣವ?"

"ಹಹಹ...ನಾನೇನು ಆತ್ಮಹತ್ಯೆ ಮಾಡಿಕೊಳ್ಳೋಲ್ಲ ಹೆದರ ಬೇಡಿ.ಮುಖ ತೊಳೆದು ಬರುತ್ತೇನೆ"ಎಂದಳು.

"ಹಾಗಲಮ್ಮ ಅದು...ಕೊಳದ ಬಳಿ ಸಂಜೆ ಹೊತ್ತು ಹೆಣ್ಣು ಮಕ್ಕಳು ಅಡ್ಡಾಡ ಬಾರದು.ಅದರಲ್ಲೂ ಮುಖ ತೊಳಿಯುವುದಾಗಲಿ ನೋಡಿಕೊಳ್ಳುವುದಾಗಲಿ ಮಾಡಲೇ ಕೂಡದು."ಅನ್ನುತ್ತ ಸ್ವಲ್ಪ ಸಮಯ ಮೌನಕ್ಕೆ  ಶರಣಾದ.
ಅಯ್ಯೋ ಕತ್ತಲಾಯ್ತಲ್ಲವ ಈ ಮುದುಕಪ್ಪನ ಪ್ರವೇಶದಿಂದ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.ಇಲ್ಲಿಂದ ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿದ್ದಾಗಲೆ,
"ನೋಡಮ್ಮ ಕತ್ತಲಾಗ್ತಿದೆ ಮನೆ ಬಿಟ್ಟು ಬಂದಿದ್ದೀಯ.ಇಲ್ಲಿ ಈ ಮರದಡಿ ವಿಪರೀತ ಚಳಿ.ಬೇಕಿದ್ದರೆ ಇವತ್ತೊಂದು ದಿನ ನನ್ನ ಮನೇಲಿ ಇರುವಂತೆ,ನಾಳೆ ನಿನ್ನ ಗಂಡ ಅದೇ ಆ ಬೇಜವಾಬ್ದಾರಿ ಮನುಷ್ಯನ ಕರಿಸಿ ನ್ಯಾಯ ಪಂಚಾಯತಿ ಮಾಡೋಣವಂತೆ ಏನಂತಿಯಾ ?"

 "ನೋಡಿ ಇವ್ರೆ...ನಿಮ್ಮಂತವರೆ ನನ್ನ ಪಾಲಿಗೆ ನಿಲ್ಲೋದು,ಕಷ್ಟಕ್ಕೆ ನೆರವಾಗೋದು.ಹೀಗೆ ಯಾವಾಗಲು ಎಲ್ಲೆಲ್ಲೊ ಯಾರ ಯಾರಾ ಮನೆಯಲೋ ಇರಬೇಕಾಗುತ್ತೆ.ಹೆಸರು ಮುಖಗಳು ನೆನಪಿಗೆ ಹೊಳಿತಿಲ್ಲ.ಆದರೆ ಎಷ್ಟೋ ತಿಂಗಳಿಂದ ಈ ತಿರುಗಾಟ ನಡೆದಿದೆ."
 "ಪರವಾಗಿಲ್ಲ ಬಿಡಮ್ಮ ನನಗೇನು ತೊಂದರೆ ಇಲ್ಲ.ಆದರೆ ಒಂದು ಮಾತು ಕೊಡಬೇಕು,ಇಲ್ಲಿಂದ ಹೊರಟ ಮೇಲೆ ಮತ್ತೆ ಅಳ ಬಾರದು ಆಯ್ತಾ?." ಆಯಿತು ಎಂಬಂತೆ ಆಕೆ  ತಲೆ ಆಡಿಸಿದಳು.

"ನಡಿ ಹೊರೋಡೋಣ ", ಪಕ್ಕದಲ್ಲಿ ಇಟ್ಟಿದ್ದ  ಕನ್ನಡಕವ ನೋಡಿ ಅದನ್ನ ಎತ್ತಿಕೊಳ್ಳಲು ಸೂಚಿಸಿದ.ಅದು ನನ್ನದಲ್ಲ ಎಂದೇಳಿ ಅಲ್ಲಿಂದ ರಭಸವಾಗಿ ಎದ್ದಳು.ಕಾಲು ಹಿಡಿದುಕೊಂಡಿತು.ಅವಳಿಗೆ ಮುಂದೆ ನಡೆಯುವ ಬಲ ಬರಲಿಲ್ಲ.ಅಷ್ಟರಲ್ಲೇ ಮುದುಕ ದೂರದ ಬೆಂಚಿನ ಮೇಲಿದ್ದ ಇನ್ನೊಂದು ವಾಕಿಂಗ್ ಸ್ಟಿಕ್ ತಂದು ಕೊಟ್ಟ,

"ನಿಧಾನವಾಗಿ ನಡಿ.ಇಲ್ಲೇ  ಪಕ್ಕದ ಬೀದಿಯಲ್ಲೇ ಮನೆ." ಅನ್ನುತ್ತಾ,ಅವಳ ಬೆಂಚಿನ ಮೆಲ್ಲಿದ್ದ ಕನ್ನಡಕವ ತನ್ನ ಕುರ್ತಾ ಜೇಬಿಗೆ ಇಳಿಸಿಕೊಂಡ.

 *

ಐದು ವರ್ಷಗಳಿಂದ ಜರಗುತ್ತಿರುವ ಈ ದೃಶ್ಯಕ್ಕೆ ಸಾಕ್ಷಿಯಾಗುವ ಸೂರ್ಯನಿಗೆ ಮಾತ್ರ ವಯಸ್ಸಾದರೂ ಮರುವಿನ ರೋಗ ಹತ್ತಲೇ ಇಲ್ಲ.ಎಂದಿನಂತೆ ಆ ಜೋಡಿ ನಡೆದು ಹೊಗುವುದನ್ನ  ಮಂಜು ಮಂಜಾಗಿಸಿಕೊಂಡೇ  ನೋಡುತ್ತಾ ಕಣ್ಣು ಮುಚ್ಚಿದ.   

Tuesday, January 22, 2013

ಸಮಾನತೆಯೆಂಬ ಕತ್ತಲಿಂದ,ಬೆಳಕೆಂಬ ಅಪರಿಚಿತನೆಡೆಗೆ !

ಸೂರ್ಯ ರಶ್ಮಿಯ  ಸ್ಪರ್ಶ ಉಷ್ಣತೆಯ ಅರಿಯದ  ದಟ್ಟವಾದ ಕಾಡದು.ಹಗಲೋತ್ತಲೇ ಕೊಳ್ಳಿ ಹಿಡಿದು ಸಾಲು ಸಾಲು ಜಾಣ ಜೀವಿಗಳು ಬೆವರುತ್ತ ಮರಗುತ್ತ ಪ್ರಾರ್ಥಿಸುತ್ತ ನಡೆಯುತ್ತಿದ್ದಾರೆ.ಕೆಲವು ಜಾಣರಿಗೆ ಸೂರ್ಯನ ಬೆಳಕು ಕವಿಯ ಕಲ್ಪನೆಯ ಸಾಲುಗಳಲ್ಲಿ ಪ್ರಾಸಕ್ಕಾಗಿ ಅರಳುವ  ಮಿಥ್ಯ,ಇತರರಿಗೆ ಅದು ಆ ಕಾಡಿನಷ್ಟೇ ಅಪೂರ್ವ ಸತ್ಯ.
ಅದರಲೊಂದಷ್ಟು ಜಾಣರು "ಈ ಪಂಜನ್ನು ಹಿಡಿದಿರುವುದಾದರು ಯಾಕೆ? ಇದಿಲ್ಲದೆಯೂ ಇಷ್ಟು ಕಾಲ ಏಕತೆಯ ಕತ್ತಲ್ಲಿನಲ್ಲಿ ಜೀವಿಸಿಲ್ಲವೇ "ಎಂದು,ಅದನ್ನೆಸೆದು ಅಲ್ಲೇ ತಟಸ್ಥರಾದರು.
ತಾವು ಹಿಡಿದಿರುವ  ಮಾಧಕ ಬೆಳಕಿನಲ್ಲಿ  ವಿಕ್ಷಿಪ್ತ  ಆಕರ್ಷಣೆಯಿದೆ,ಆ ರವಿಕಿರಣಗಳನೊಮ್ಮೆ  ದರ್ಶಿಸಲೇ ಬೇಕೆಂದು  ಪಣ ತೊಟ್ಟು ಇತರ ಜಾಣರು ವೇಗಾವಾಗಿ ಮುನ್ನಡೆದರು.
"ನೋಡಿದಿರಾ,ಏಕತಾನತೆಯ ಮುರಿದ  ಈ ಬೆಳಕಿನಲ್ಲಿ  ನಾವೆಲ್ಲ ಬೇರೆ ಬೇರೆಯಾಗೇ ಕಾಣುತ್ತಿದೇವೆ,ವರ್ತಿಸುತ್ತಿದೇವೆ...ದೀವಟಿಗೆಯ ದಿವ್ಯಾಗ್ನಿ ಅನನ್ಯತೆಯ ಸಾರುತ್ತಿದೆ"   ಉದ್ಧರಿಸಿದ  ಒಬ್ಬ .
"ಬೆಳಕಿನ ಹುಡುಕಾಟದಲ್ಲಿ  ಎಷ್ಟೊತ್ತು ಹೀಗೆ ಸಾಗೋದು? ಹಚ್ಚಿದ ಕೊಳ್ಳಿ ಇನ್ನೇನು  ಆರಿ ಹೋಗುವುದರಲ್ಲಿದೆ...ಆಮೇಲೆ ಎತ್ತ ಸಾಗುತ್ತಿದೇವೆ ಅನ್ನೋ ಅರಿವಿಲ್ಲದೆ  ಚಲಿಸಬೇಕಾಗಬಹುದು"  ಹಲುಬಿದ ಇನ್ನೊಬ್ಬ.
"ಸರಿ ಹಾಗಿದ್ದರೆ,ಬೆಳಕ್ಕನ್ನು ನಮ್ಮಿಂದ ಕಿತ್ತುಕೊಂಡದ್ದು ಈ ಕತ್ತಲು ಕಾಡು,ಇದನ್ನೇ ಕೊಳ್ಳಿಯಿಂದ ಸುಟ್ಟು  ಸೇಡು ತೀರಿಸಿಕೊಳ್ಳೋಣ"ಎಂದವನೇ ಕಾಡಿಗೆ ಕಿಡಿ ಹಚ್ಚಿದ.ಅವನ ಮಾತಿಗೆ ಒಮ್ಮತಿಸಿ ಉಳಿದ ಸಂಗಡಿಗರು  ಕಾಡನ್ನು ಉರಿಸಿದರು.
ಇಡಿ ಕಾಡು ಉರಿಯಲಾರಂಭಿಸಿತು,ಅಲ್ಲಿದ್ದ ಹಲವರು ಉರಿದು ಬೂಧಿಯಾದರು.
*
ದೂರದಲ್ಲಿ ತಟಸ್ಥರಾದವರು, ಅರ್ಧ ಬೆಂದವರು ಬೋಳು ಬಯಲಿನಲ್ಲಿ  ಚೆಲ್ಲಿದ ಸೂರ್ಯನ ಉಜ್ವಲ ಬೆಳಕ ಕಂಡು ಬೆದರಿ ಬೆಚ್ಚಿ ಕಿರುಚುತ್ತ  ಸತ್ತ  ಕಾಡನ್ನು ಅರಸುತ್ತಾ  ಓಟಕಿತ್ತರು.